ಬೆಂಗಳೂರಿನಲ್ಲಿ 48 ಗಂಟೆಗಳ ಕಾಲ ಮಳೆ ಮುನ್ಸೂಚನೆ
ಬೆಂಗಳೂರು, ಆಗಸ್ಟ್ 06; ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನೈಋತ್ಯ ಮುಂಗಾರು ದುರ್ಬಲವಾಗಿದೆ. ನದಿಗಳ ನೀರಿನ ಮಟ್ಟದಲ್ಲಿ ಇಳಿಕೆಯಾಗಿದ್ದು, ಜಲಾಶಯಗಳಿಗೆ ಒಳಹರಿವು ಕಡಿಮೆಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ.
ಬೆಂಗಳೂರು ನಗರ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ 48 ಗಂಟೆಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಶನಿವಾರ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಬೆಂಗಳೂರಿನಲ್ಲಿ ರಾತ್ರಿ ತುಂತುರು ಮಳೆ ಸುರಿದಿದೆ.

ರಾಜ್ಯದಲ್ಲಿ ಗಾಳಿಯ ವೇಗವು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗಂಟೆಗೆ 30 ರಿಂದ 40 ಕಿ. ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಇದರ ಜೊತೆಗೆ ವಿವಿಧ ಜಿಲ್ಲೆಗಳಲ್ಲಿ ಸಾಧಾರಣವಾಗಿ ಮಳೆ ಇರಲಿದೆ.
ಕರಾವಳಿಯಲ್ಲಿ ಮಳೆ; ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಸಾಧಾರಣ ಮಳೆ ಮುಂದುವರೆಯುವ ನಿರೀಕ್ಷೆ ಇದೆ. ಉಳಿದಂತೆ ಯಾವುದೇ ಜಿಲ್ಲೆಗಳಲ್ಲಿಯೂ ಭಾರೀ ಮಳೆಯ ಮುನ್ಸೂಚನೆಯನ್ನು ನೀಡಿಲ್ಲ.
ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವೊಮ್ಮೆ ಬಲವಾದ ಗಾಳಿ ಬೀಸಬಹುದು. ರಾಜ್ಯದಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ. ಕರಾವಳಿ ಭಾಗದಲ್ಲಿ ಮುಂಗಾರು ಸಾಮಾನ್ಯವಾಗಿದ್ದು, ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿದೆ.
ಅಂಕೋಲಾ, ಕದ್ರಾ, ಸಿದ್ದಾಪುರ, ಬೇಲೆಕೇರಿ, ಲೋಂಡಾ, ಧರ್ಮಸ್ಥಳ, ಗೇರುಸೊಪ್ಪ, ಕುಮಟಾ, ಬನವಾಸಿ, ಜೋಯ್ಡಾ, ಬೆಳಗಾವಿ ನಗರ, ಮಂಡಗದ್ದೆಯಲ್ಲಿ ಹೆಚ್ಚಿನ ಮಳೆಯಾಗಿದೆ. ಮುಂಗಾರು ಕೆಲವು ಭಾಗಗಳಲ್ಲಿ ಚುರುಕುಗೊಂಡಿದ್ದರೂ ಸಾಧಾರಣ ಮಳೆ ಮಾತ್ರ ಆಗಲಿದೆ.
ಎಷ್ಟು ಮಳೆ ಕೊರತೆ?; ಜೂನ್ ತಿಂಗಳಿನಲ್ಲಿ ನೈಋತ್ಯ ಮುಂಗಾರು ಕೈ ಕೊಟ್ಟಿತು. ಈ ಬಾರಿ ಬರಗಾಲ ಬರುತ್ತದೆ ಎಂದು ಜನರು ಅಂದುಕೊಂಡಿದ್ದರು. ಆದರೆ ಜುಲೈ ಆರಂಭದಿಂದಲೇ ಮುಂಗಾರು ಅಬ್ಬರಿಸಿದ್ದು, 15ರ ತನಕ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿ, ನದಿಗಳ ನೀರಿನ ಮಟ್ಟವೂ ಏರಿಕೆಯಾಗಿ ಜಲಾಶಯಗಳಿಗೆ ನೀರು ಬಂದಿತು.
ಆದರೆ ಮತ್ತೆ ಮುಂಗಾರು ದುರ್ಬಲಗೊಂಡಿದ್ದು, ಕೆಲವು ಜಿಲ್ಲೆಗಳಲ್ಲಿ ಮಾತ್ರ ಸಾಧಾರಣ ಮಳೆಯಾಗುತ್ತಿದೆ. ಆಗಸ್ಟ್ ಆರಂಭದಿಂದಲೇ ಬಿಸಿಲು, ಮೋಡ ಕವಿದ ವಾತಾವರಣವಿದೆ. ಆದರೆ ಮಳೆ ಸುರಿದಿಲ್ಲ. ಇದರಿಂದಾಗಿ ಮತ್ತೆ ಮಳೆ ಕೊರತೆ ಉಂಟಾಗುವ ಭೀತಿ ಎದುರಾಗಿದೆ.
ಮುಂಗಾರು ಹಂಗಾಮು (ಜೂನ್ 1 ರಿಂದ) ರಾಜ್ಯದಲ್ಲಿ ಶೇ 12ರಷ್ಟು ಮಳೆ ಕೊರತೆ ಉಂಟಾಗಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಜುಲೈನಲ್ಲಿ ಸುರಿದ ಮಳೆ ನಂಬಿ ತಡವಾಗಿ ಬಿತ್ತನೆ ಕಾರ್ಯ ಕೈಗೊಂಡಿದ್ದ ರೈತರು ಈಗ ಮಳೆಯ ಕೊರತೆ ಕಾರಣ ಕಂಗಾಲಾಗಿದ್ದಾರೆ.
ಆಗಸ್ಟ್ ತಿಂಗಳ ಮೊದಲ ಒಂದು ವಾರದಲ್ಲಿ ನಿರೀಕ್ಷಿತ ವಾಡಿಕೆ ಮಳೆ ಪ್ರಮಾಣ 66 ಮಿ. ಮೀ. ಆಗಿದೆ. ಆದರೆ ಕೇವಲ 22.3 ಮಿ. ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಳೆ ಸುರಿಯದಿದ್ದರೆ ಬಿತ್ತನೆ ಮಾಡಿದ ಬೀಜಗಳು ಮೊಳಕೆ ಒಡೆಯುವುದಿಲ್ಲ ಎಂದು ರೈತರು ಚಿಂತೆಗೆ ಜಾರಿದ್ದಾರೆ.
ಈ ವರ್ಷದ ಏಪ್ರಿಲ್, ಮೇ ತಿಂಗಳಿನಲ್ಲಿ ನೈಋತ್ಯ ಮುಂಗಾರು ಅವಧಿಯಲ್ಲಿ ವಾಡಿಕೆಯಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಆದರೆ ಜೂನ್ನಿಂದ ಆರಂಭವಾಗ ಮುಂಗಾರು ಅನಿಶ್ಚಿತತೆಯಿಂದ ಕೂಡಿದೆ. ಜೂನ್ 1 ರಿಂದ ಆಗಸ್ಟ್ 5ರ ತನಕ ವಾಡಿಕೆ ಮಳೆ 514 ಮಿ. ಮೀ. ಆಗಿದೆ. ಈ ಬಾರಿ ಸುರಿದಿರುವ ಮಳೆ 452 ಮಿ. ಮೀ. ಮಾತ್ರ.
ಮಲೆನಾಡು ಭಾಗದಲ್ಲಿಯೇ ಕಳೆದ ಒಂದು ವಾರದಿಂದ ಮಳೆ ಮರೆಯಾಗಿದೆ. ದಿನಕ್ಕೆ ಒಮ್ಮೆ ಅಥವ ಎರಡು ಬಾರಿ ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದೆ. ಶಿವಮೊಗ್ಗದಲ್ಲಿ ಶೇ 25, ಹಾಸನದಲ್ಲಿ ಶೇ 19, ಚಿಕ್ಕಮಗಳೂರಿನಲ್ಲಿ ಶೇ 31, ಕೊಡಗಿನಲ್ಲಿ ಶೇ 38ರಷ್ಟು ಮಳೆ ಕೊರತೆ ಉಂಟಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹೇಳಿದೆ.











Click it and Unblock the Notifications