ನವೆಂಬರ್ 26ರಿಂದ ಬೆಂಗಳೂರಲ್ಲಿ ಮತ್ತೆ ಮಳೆ
ಬೆಂಗಳೂರು, ನವೆಂಬರ್ 22; ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ನಗರದಲ್ಲಿ ಸುರಿಯುತ್ತಿರುವ ಮಳೆಗೆ ಜನರು ಕಂಗಾಲಾಗಿದ್ದಾರೆ. ಹಲವು ಪ್ರದೇಶಗಳು ಜಲಾವೃತವಾಗಿದ್ದು, ಅಪಾರ್ಟ್ಮೆಂಟ್ಗಳಿಂದ ಜನರು ಹೊರ ಬರಲಾರದೆ ಪರದಾಡುತ್ತಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ನವೆಂಬರ್ 23ರ ಬಳಿಕ ರಾಜ್ಯದಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಿವೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದ ತೀವ್ರತೆ ಕಡಿಮೆಯಾಗಿದ್ದು, ಮಳೆಯ ಆರ್ಭಟ ವಿವಿಧ ಜಿಲ್ಲೆಗಳಲ್ಲಿ ಕಡಿಮೆಯಾಗಲಿದೆ.
ಸೋಮವಾರ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು, ಸೂರ್ಯ ದೇವನ ದರ್ಶನವಾಗಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮತ್ತು ಜಿಟಿ-ಜಿಟಿ ಮಳೆ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ನವೆಂಬರ್ 26ರಿಂದ ಮಳೆ; ನವೆಂಬರ್ 26ರಿಂದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮೂರು ದಿನ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ಇದರ ಪರಿಣಾಮ ಮಳೆಯಾಗಲಿದೆ.
ರಾಜ್ಯದ ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ ಇದೆ. ನವೆಂಬರ್ 23ರಿಂದ ಮೂರು ದಿನ ಮಳೆ ಕಡಿಮೆ ಇದ್ದರೂ ಬಳಿಕ ಮಳೆಯಾಗಲಿದೆ.
ನೆವೆಂಬರ್ ತಿಂಗಳಿನಲ್ಲಿ ವಾಡಿಕೆಯಂತೆ ಬೆಂಗಳೂರು ನಗರದಲ್ಲಿ 57 ಮಿ. ಮೀ. ಮಳೆಯಾಗಬೇಕಿತ್ತು. ಆದರೆ 267 ಮಿ. ಮೀ. ಮಳೆಯಾಗಿದೆ. ಗುರುವಾರ ಮುಂಜಾನೆ 8.30 ರಿಂದ ಶುಕ್ರವಾರ ಮುಂಜಾನೆ 8.30ರ ತನಕ ಬೆಂಗಳೂರಲ್ಲಿ 73.4 ಮಿ. ಮೀ. ಮಳೆಯಾಗಿತ್ತು. ಆದರೆ ಶುಕ್ರವಾರ, ಶನಿವಾರ ಮಳೆ ಕೊಂಚ ಬಿಡುವು ನೀಡಿತ್ತು.
ಭಾನುವಾರ ಸಂಜೆಯ ವೇಳೆಗೆ ಸುಮಾರು 3 ಗಂಟೆಗಳ ಕಾಲ ವಿವಿಧ ಬಡಾವಣೆಗಳಲ್ಲಿ ಮಳೆಯಾಗಿದೆ. ಇದರಿಂದಾಗಿ ಯಲಹಂಕ, ಜಕ್ಕೂರು ರಸ್ತೆ ಸೇರಿದಂತೆ ವಿವಿಧ ಪ್ರದೇಶದಲ್ಲಿ ಮನೆಗಳು ಜಲಾವೃತವಾದವು. ಸಿಂಗಾಪುರ ಕೆರೆ ಕೋಡಿ ಒಡೆದ ಪರಿಣಾಮ ರಸ್ತೆಗಳು ಜಲಾವೃತವಾದವು. ಹಾವು ಸೇರಿದಂತೆ ವಿಷ ಜಂತುಗಳು ಮನೆಗಳಿಗೆ ಬರುತ್ತಿವೆ ಎಂದು ಜನರು ದೂರು ನೀಡುತ್ತಿದ್ದಾರೆ.
ಟಿ. ದಾಸರಹಳ್ಳಿ, ಯಲಹಂಕ ಸುತ್ತಮತ್ತ ಭಾನುವಾರ ಸುರಿದ ಮಳೆ ಅವಾಂತರ ಸೃಷ್ಟಿ ಮಾಡಿದೆ. ನಾಗಸಂದ್ರ ಕಾಲೋನಿ ಬಳಿ ರಾಜಕಾಲುವೆ ಒಡೆದು ಹಲವು ಮನೆಗಳಿಗೆ ನೀರು ನುಗ್ಗಿತು. ಗುಂಡಪ್ಪ ಬಡಾವಣೆ, ಬೆಲ್ಮರ್ ಬಡಾವಣೆ, ಬಿಟಿಎಸ್ ಬಡಾವಣೆ ಸುತ್ತಮುತ್ತಲು ರಸ್ತೆ ಜಲಾವೃತವಾಯಿತು.
ಪ್ರತಿ ಬಾರಿ ಮಳೆಯಾದಾಗಲೂ ಇದೇ ಸಮಸ್ಯೆ ಆಗುತ್ತದೆ. ಇಲ್ಲಿ ರಾಜ ಕಾಲುವೆ ಒತ್ತುವರಿಯಾಗಿದೆ. ಅಧಿಕಾರಿಗಳು ಸೂಕ್ತಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದರು. ಒತ್ತುವರಿ ತೆರವು ಮಾಡಿ ಗುಣಮಟ್ಟದ ತಡೆಗೋಡೆ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ನವೆಂಬರ್ 23ರ ಬಳಿಕ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆ, ಮೋಡ ಕವಿದ ವಾತಾವರಣ ಮುಂದುವರೆಯಲಿದೆ. ಉತ್ತರ ಒಳನಾಡಿನಲ್ಲಿ ಮಳೆಯ ಯಾವುದೇ ಸೂಚನೆಗಳಿಲ್ಲ. ಮಂಗಳವಾರದ ಬಳಿಕ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ.
ಡಿ. ಕೆ. ಶಿವಕುಮಾರ್ ಟ್ವೀಟ್; ಅಕಾಲಿಕ ಮಳೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಟ್ವೀಟ್ ಮಾಡಿದ್ದಾರೆ. "ರಾಜ್ಯದ ಮಳೆ ಪರಿಸ್ಥಿತಿ ನೋಡಿದರೆ ಬೆಚ್ಚಿ ಬೀಳುವಂತಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಊರೂರೇ ನದಿಯಂತಾಗಿವೆ. ಇನ್ನು ರೈತರ ಪರಿಸ್ಥಿತಿ ಹೇಳತೀರದು. ಕುಷ್ಟಗಿಯ ಹನುಮಸಾಗರದಲ್ಲಿ ತೊಗರಿ ಬೆಳೆಯಲ್ಲಿ ಮೊಳಕೆ ಬಂದಿದೆ. ಮಂಡ್ಯ ಸುತ್ತಮುತ್ತಲ ಭಾಗಗಳಲ್ಲಿ ಭತ್ತದ ಬೆಳೆ ಕೊಚ್ಚಿಹೋಗಿದೆ" ಎಂದು ಹೇಳಿದ್ದಾರೆ.
"ಅಕಾಲಿಕವಾಗಿ ಸುರಿದಿರುವ ಈ ಮಳೆ ಅವಾಂತರಕ್ಕೆ ರೈತರು ಕಂಗೆಟ್ಟಿದ್ದಾರೆ. ಸಾಂಕ್ರಾಮಿಕ ಪರಿಸ್ಥಿತಿಯಿಂದ ಈಗಷ್ಟೇ ಅನ್ನದಾತರಿಗೆ ಬಿಡುವು ಸಿಕ್ಕಿದೆ. ಈ ವರ್ಗಕ್ಕೆ ಕೋವಿಡ್ ಪರಿಹಾರವಂತೂ ಸಿಗಲಿಲ್ಲ. ಅತಿವೃಷ್ಟಿಯಿಂದ ಆಗಿರುವ ನಷ್ಟಕ್ಕೆ ನ್ಯಾಯಯುತ ಪರಿಹಾರ ಸಿಗಬೇಕು" ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.












Click it and Unblock the Notifications