ಐಎಂಎ ಜ್ಯುವೆಲರ್ಸ್ ವಂಚನೆ ಪ್ರಕರಣ ಸಿಸಿಬಿಗೆ: ಕುಮಾರಸ್ವಾಮಿ
ಬೆಂಗಳೂರು, ಜೂನ್ 11: ಐಎಂಎ ಜ್ಯುವೆಲರ್ಸ್ ವಂಚನೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿರುವುದಾಗಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಐಎಂಎ ಜ್ಯುವೆಲರ್ಸ್ನಲ್ಲಿ ಹೂಡಿಕೆ ಮಾಡಿದ್ದ ಗ್ರಾಹಕರಿಗೆ ವಂಚಿಸಿ ಮಾಲೀಕ ಮನ್ಸೂರ್ ಪರಾರಿ ಆಗಿದ್ದು, ಗ್ರಾಹಕರು ತಮ್ಮ ಹಣಕ್ಕಾಗಿ ಪರದಾಡುವಂತಾಗಿದೆ. ಐಎಂಎ ಜ್ಯುವೆಲರ್ಸ್ ಗ್ರಾಹಕರು ನಿನ್ನೆಯಿಂದ ಪ್ರತಿಭಟನೆ ನಡೆಸುತ್ತಿದ್ದು, ಬಿಜೆಪಿ ಸಹ ಗ್ರಾಹಕರ ಬೆಂಬಲಕ್ಕೆ ಧಾವಿಸಿದೆ.
IMA ಜ್ಯುವೆಲ್ಲರಿ ಮನ್ಸೂರ್ ಯುಎಇಗೆ ಓಡಿಹೋದನೆ? ಹೂಡಿಕೆದಾರರ ನೆರವಿಗೆ ಕಾಂಗ್ರೆಸ್ ನಾಯಕರು
ಪ್ರಕರಣದ ಗಂಭೀರತೆ ಮನಗಂಡ ಸಿಎಂ ಕುಮಾರಸ್ವಾಮಿ ಅವರು ಇಂದು ಪ್ರಕರಣವನ್ನು ಸಿಸಿಬಿ ತನಿಖೆಗೆ ನೀಡಿದ್ದಾರೆ. ಈ ಕುರಿತು ಗೃಹ ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ಮಾತನಾಡಿದ್ದು, ಪ್ರಕರಣವನ್ನು ಶೀಘ್ರ ಇತ್ಯರ್ಥಗೊಳಿಸುವಂತೆ ಸೂಚಿಸಿದ್ದೇನೆ ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಹೂಡಿಕೆದಾರರ ಆತಂಕವನ್ನು ಸರ್ಕಾರ ಅರ್ಥ ಮಾಡಿಕೊಂಡಿದ್ದು ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿದೆ. ಗೃಹ ಸಚಿವರಾದ ಎಂ.ಬಿ.ಪಾಟೀಲ್ ಸಅವರೊಂದಿಗೆ ಈ ಬಗ್ಗೆ ಮಾತನಾಡಿದ್ದು ಪ್ರಕರಣವನ್ನು ಶೀಘ್ರ ಇತ್ಯರ್ಥಗೊಳಿಸಲು ಸೂಚಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ರೋಷನ್ ಬೇಗ್ ಬಾಯಿ ಮುಚ್ಚಿಸಲು ಬಯಲಿಗೆ ಬಿತ್ತಾ IMA ಜ್ಯುವೆಲ್ಲರಿ ಹಗರಣ?
ಐಎಂಎ ಜ್ಯುವೆಲ್ಸ್ ಮಾಲೀಕ ನಿನ್ನೆ ಬಿಡುಗಡೆ ಮಾಡಿರುವ ಆಡಿಯೋ ಪ್ರಕರಣದ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ಶಾಸಕರು ಸೇರಿ ಹಲವು ರಾಜಕಾರಣಿಗಳು ಪ್ರಕರಣದಲ್ಲಿ ಶಾಮೀಲಾಗಿರುವ ಅನುಮಾನ ವ್ಯಕ್ತವಾಗಿದೆ.