ಹೆಚ್ಚುತ್ತಿರುವ ವಂಚನೆ ಪ್ರಕರಣ : ಸರ್ಕಾರ ಎಚ್ಚೆತ್ತುಕೊಳ್ಳುವುದು ಯಾವಾಗ?
ರಾಜ್ಯದಲ್ಲಿ ದಿನೇ ದಿನೇ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿರುವುದನ್ನು ಆಮ್ ಆದ್ಮಿ ಪಾರ್ಟಿ ತೀವ್ರವಾಗಿ ವಿರೋಧಿಸುತ್ತದೆ. ಜೂನ್ 10 ಸೋಮವಾರದಂದು ಪ್ರಕಟಣೆಗೊಂಡ ವಿಚಾರವು ಸರ್ಕಾರದ ಕಾರ್ಯವೈಖರಿಯ ಹಾಗೂ ಆಡಳಿತದ ಮೇಲೆ ಬಹಳಷ್ಟು ಪ್ರಶ್ನೆಗಳನ್ನು ಮೂಡಿಸುತ್ತದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಜನಸಾಮಾನ್ಯರಿಂದ ಚಿಕ್ಕಚಿಕ್ಕ ಕಂತುಗಳಲ್ಲಿ ಹಣ ಸಂಗ್ರಹಿಸಿ ದೊಡ್ಡ ಮೊತ್ತದ ಬಡ್ಡಿ ನೀಡುವ ಆಸೆ ತೋರಿಸಿ ಜನ ಸಾಮಾನ್ಯರ ಜೀವನದೊಂದಿಗೆ ಆಟವಾಡುವ ಹಲವಾರು ಯೋಜನೆಗಳು ಸರ್ಕಾರದ ಕಣ್ಣೆದುರೆ ನಾಯಿಕೊಡೆಯಂತೆ ತಲೆಯೆತ್ತುತ್ತಿದ್ದರೂ ಸರ್ಕಾರ ಇದರ ವಿರುದ್ಧ ಕ್ರಮ ಜರುಗಿಸದೇ ಮೌನವಾಗಿರುವುದು ದುರಂತವೇ ಸರಿ.
ಇಂತಹ ಕಂಪನಿಗಳು, ಅದರ ಮಾಲೀಕರು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರೊಂದಿಗೆ ಮೋಸದ ದಂದೆಯಲ್ಲಿ ತೊಡಗಿರುವ ಕಂಪನಿಗಳಿಗೆ ಸರ್ಕಾರವೇ ಬೆಂಬಲಕ್ಕೆ ನಿಂತಿರುವುದನ್ನು ಆಮ್ ಆದ್ಮಿ ಪಾರ್ಟಿ ಖಂಡಿಸುತ್ತದೆ.

ಇಂತಹ ಪ್ರಕರಣಗಳ ಪಟ್ಟಿಗೆ ಐಎಂಎ ಗ್ರೂಪ್ ಆಫ್ ಕಂಪನಿ ಸೋಮವಾರ ಹೊಸದಾಗಿ ಸೇರ್ಪಡೆಯಾಗಿದೆ. ಸಾವಿರಾರು ಕೋಟಿ ರೂ ಹಗರಣಗಳನ್ನು ಒಳಗೊಂಡಿರುವ ಜನಸಾಮಾನ್ಯರಿಂದ ಹಣ ಸಂಗ್ರಹಿಸಿ ಅಧಿಕ ಮೊತ್ತದ ಬಡ್ಡಿ ನೀಡುವುದಾಗಿ ನಂಬಿಸಿ ವಂಚಿಸುತ್ತಿರುವ ಐಎಂಎ ಕಂಪನಿ ವಿರುದ್ಧ ಈ ಕೂಡಲೇ ಕ್ರಮ ಜರುಗಿಸಬೇಕೆಂದು ಆಮ್ ಆದ್ಮಿ ಪಾರ್ಟಿ ಕೋರುತ್ತದೆ. ಸಂತ್ರಸ್ತರಿಗೆ ಹಣ ಹಿಂದಿರುಗಿಸಿ ಕೊಡಬೇಕು ಮತ್ತು ವಂಚನೆಯಲ್ಲಿ ಭಾಗಿಯಾಗಿರುವ ಕಂಪನಿ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.
ಐಎಂಎ ಕಂಪನಿ ಪ್ರಕರಣದಲ್ಲಿ ಶಿವಾಜಿನಗರದ ಎಂಎಲ್ಎ ರೋಷನ್ ಬೇಗ್ ಹಾಗೂ ಮತ್ತಿತರ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿರುವ ವರದಿಗಳು ಕೇಳಿಬಂದಿದ್ದು ದುರದೃಷ್ಟಕರವೇ ಸರಿ. ರಾಜ್ಯ ಸರ್ಕಾರ ಇಂತಹ ಕಂಪನಿಗಳ ವಿರುದ್ಧ ಮೊದಲೇ ಎಚ್ಚೆತ್ತುಕೊಂಡಿದ್ದರೆ ಹೂಡಿಕೆದಾರರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಇದರಿಂದ ಎಲ್ಲೊ ಒಂದು ಕಡೆ ಇಂತಹ ವಂಚನೆ ಪ್ರಕರಣಗಳಲ್ಲಿ ಪ್ರಭಾವಿಗಳ ಕೈವಾಡವಿರುವುದು ಕಂಡು ಬರುತ್ತದೆ.
ಹಾಗಾಗಿ ಇದರ ವಿರುದ್ಧ ಸ್ವತಂತ್ರ ತನಿಖೆಗೆ ಆಮ್ ಆದ್ಮಿ ಪಾರ್ಟಿ ಆಗ್ರಹಿಸುತ್ತದೆ. ಸಂತ್ರಸ್ತರಿಗೆ ನ್ಯಾಯ ಕೊಡಿಸುವಲ್ಲಿ ಪಕ್ಷ ಅವರ ಬೆಂಬಲಕ್ಕೆ ನಿಲ್ಲುತ್ತದೆ. ಒಂದು ವೇಳೆ ಸರ್ಕಾರ ಸ್ವತಂತ್ರ ತನಿಖೆಗೆ ಒಪ್ಪದಿದ್ದರೆ ಜನರಿಗೆ ವಂಚಿಸುವ ಹುನ್ನಾರದೊಂದಿಗೆ ಕಂಪನಿಯೊಂದಿಗೆ ಕೈ ಜೋಡಿಸಿದಲ್ಲಿ ಮುಂದಿನ ದಿನಗಳಲ್ಲಿ ಪಕ್ಷ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ ಎಂದು ಎಚ್ಚರಿಸುತ್ತದೆ.












Click it and Unblock the Notifications