ಮೈಸೂರು ರಸ್ತೆಯ ಪಂತರಪಾಳ್ಯದಲ್ಲಿ ಅಕ್ರಮ ಅಂಗಡಿ ನೆಲಸಮ
ಬೆಂಗಳೂರು, ಅಕ್ಟೋಬರ್ 20 : ಮೈಸೂರು ರಸ್ತೆಯ ನಾಯಂಡಹಳ್ಳಿಯಲ್ಲಿರುವ ಪಂತರಪಾಳ್ಯದ ಬಳಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಅಂಗಡಿ ಮುಂಗಟ್ಟುಗಳನ್ನು ಮಂಗಳವಾರ ತೆರವುಗೊಳಿಸಲಾಗಿದೆ. ಜೆಸಿಬಿ ಸಹಾಯದಿಂದ ಎಲ್ಲ ಅಂಗಡಿಗಳನ್ನು ನಿರ್ನಾಮ ಮಾಡಲಾಗಿದೆ.
ನಾಯಂಡಹಳ್ಳಿಯ ಅಂಬೇಡ್ಕರ್ ಕಾಲೋನಿ ಬಳಿ ಬಡ ಜನತೆಗೆಂದು ನಿರ್ಮಿಸಲಾಗಿರುವ ವಸತಿ ಸಮುಚ್ಚಯ ಪಕ್ಕದಲ್ಲಿ ನಿರ್ಮಿಸಲಾಗಿದ್ದ ಅಂಗಡಿಗಳನ್ನು ಪೊಲೀಸ್ ಕಾವಲಿನಲ್ಲಿ ಮಂಗಳವಾರ 10 ಗಂಟೆ ಸುಮಾರಿಗೆ ತೆರವುಗೊಳಿಸಲಾಗಿದೆ. ರಸ್ತೆ ಅಗಲೀಕರಣದ ಉದ್ದೇಶದಿಂದಲೂ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. [ಮೃತ್ಯುರೂಪಿ ನಾಯಂಡಹಳ್ಳಿ ಜಂಕ್ಷನ್ ಹೀಗಿದೆ ನೋಡಿ]
ದಶಕಗಳಿಂದಲೂ ಈ ಸ್ಥಳದಲ್ಲಿ ವ್ಯಾಪಾರಿಗಳು ಸಣ್ಣಸಣ್ಣ ಅಂಗಡಿ ಹಾಕಿಕೊಂಡು ಟೈರ್ ಮಾರಾಟ, ಸ್ಟೌ ರಿಪೇರಿ, ಪಂಚರ್ ಅಂಗಡಿ, ಗಾರೆ ಕೆಲಸದ ಸಾಮಗ್ರಿ ಮಾರುವ ವ್ಯಾಪಾರ ನಡೆಸುತ್ತಿದ್ದರು. ಇದೇ ಸಾಲಿನಲ್ಲಿ ಕಲ್ವಾರಿ ದೇವಾಲಯ ಅಂತ ಬರೆದಿರುವ ಪುಟ್ಟ ಕ್ರೈಸ್ತರ ಚರ್ಚ್ ಕೂಡ ಇದೆ. ಇದನ್ನು ಸದ್ಯಕ್ಕೆ ಕೆಡವಲಾಗಿಲ್ಲ.
ಅಂಗಡಿ ಮುಂಗಟ್ಟು ನಾಶವಾಗಿದ್ದಲ್ಲದೆ, ಪ್ರಾರ್ಥನಾ ಸ್ಥಳಕ್ಕೂ ಸಂಚಕಾರ ಬಂದಿದ್ದರಿಂದ ಈ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಚರ್ಚ್ ನಿರ್ಮಿಸಿದ ಮಾಲಿಕರಿಗೂ ನೋಟೀಸ್ ನೀಡಲಾಗಿದ್ದು, 15 ದಿನಗಳಲ್ಲಿ ಆ ಸ್ಥಳವನ್ನು ಕೂಡ ನೆಲಸಮ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದರು.
ಕೆಲವರು ತಮ್ಮ ಸಾಮಾನು ಸರಂಜಾಮುಗಳನ್ನು ಟೆಂಪೋದಲ್ಲಿ ಹಾಕಿಕೊಂಡು ಬೇರೆ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಿದ್ದರು. ಕೆಲವು ಅಂಗಡಿಗಳಿಂದ ಹೊರಬಿದ್ದಿದ್ದ ಸಮಾನುಗಳು ಮಾಲಿಕರಿಗಾಗಿ ಕಾದು ರಸ್ತೆಯಲ್ಲಿ ಕುಳಿತಿದ್ದವು. ಗುಜರಿಗೆ ಹಾಕಬೇಕಾದ ವಸ್ತುಗಳೇ ಅಲ್ಲಿ ಹೆಚ್ಚಿದ್ದವು.
ಬಣ್ಣದ ಲುಂಗಿ ಸುತ್ತಿಕೊಂಡಿದ್ದ ಮುಷ್ತಾಕ್ ಎಂಬುವವರು, ತಮ್ಮ ಸಾಮಾನುಗಳ ಸಮೇತ ಏನು ಮಾಡಬೇಕೆಂದು ತೋಚದೆ ರಸ್ತೆಯಲ್ಲೇ ನಿಂತಿದ್ದರು. ಮುಂದೇನು? ಎಂಬ ಪ್ರಶ್ನೆಗೆ "ಏನೋ ಗೊತ್ತಿಲ್ಲ ಸ್ವಾಮಿ, ಎಲ್ಲಿಗೆ ಹೋಗಬೇಕೋ ಗೊತ್ತಾಗುತ್ತಿಲ್ಲ" ಅಂತ ತಮ್ಮ ಅಳಲನ್ನು ತೋಡಿಕೊಂಡರು.