ನ. 23ರ ತನಕ ಗಾಲಿ ಜನಾರ್ದನ ರೆಡ್ಡಿ ಎಸ್ ಐಟಿ ವಶಕ್ಕೆ
ಬೆಂಗಳೂರು, ನ.20: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿದ್ದ ಮಾಜಿ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಬಂಧಿಸಲಾಗಿದೆ. ಜನಾರ್ದನ ರೆಡ್ಡಿ ಅವರ ವಿರುದ್ಧ ಹೊಸದಾಗಿ ಕೇಸ್ ದಾಖಲಿಸಿಕೊಂಡು ಲೋಕಾಯುಕ್ತ ವಿಶೇಷ ತನಿಖಾ ತಂಡ (ಎಸ್ ಐಟಿ) ಬಂಧನ ಮಾಡಿ ಲೋಕಾಯುಕ್ತ ವಿಶೇಷ ನ್ಯಾಯಲಯಕ್ಕೆ ಹಾಜರುಪಡಿಸಲಾಯಿತು. ನ. 23ರ ತನಕ ಎಸ್ ಐಟಿ ವಶಕ್ಕೆ ನೀಡಲಾಗಿದೆ.
ಸುಮಾರು ಎರಡು ವರ್ಷಕ್ಕೂ ಅಧಿಕ ಕಾಲ ಜೈಲಿನಲ್ಲೇ ಕಾಲದೂಡಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಈಗಾಗಲೇ 13 ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.

ಅಕ್ರಮ ಗಣಿಗಾರಿಕೆ ಹಾಗೂ ಅದಿರು ಅಕ್ರಮ ಸಾಗಾಣೆ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ರೆಡ್ಡಿ ಅವರಿಗೆ ಎಸ್ ಐಟಿ ನೋಟಿಸ್ ನೀಡಿತ್ತು. ಗಾಲಿ ರೆಡ್ಡಿ ಅವರು ಶುಕ್ರವಾರ ಬೆಳಗ್ಗೆ ಬೆಂಗಳೂರಿನ ಎಸ್ಐಟಿ ಕಚೇರಿಗೆ ಆಗಮಿಸಿ ವಿಚಾರಣೆಗೆ ಹಾಜರಾಗಿದ್ದರು. ಇತ್ತೀಚೆಗೆ ಗಾಲಿ ರೆಡ್ಡಿ ಅವರ ಆಪ್ತ ಮಧು ಕುಮಾರ್ ವರ್ಮ ಅವರನ್ನು ಬಂಧಿಸಿದ್ದ ಎಸ್ ಐಟಿ ಗುರುವಾರ ಕೋರ್ಟಿಗೆ ಹಾಜರುಪಡಿಸಿತ್ತು.
ಗಾಲಿ ರೆಡ್ಡಿ ಅವರ ವಿಚಾರಣೆ ನಡೆಸುವುದಕ್ಕೂ ಮುನ್ನ ಬಳ್ಳಾರಿ, ಬೆಂಗಳೂರಿನ 14 ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಲವಾರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. [ರೆಡ್ಡಿ ಅರೆಸ್ಟ್, ಸಿದ್ದು ಸರ್ಕಾರ ವಿರುದ್ಧ ಸೋಮಶೇಖರ್ ಗರಂ]
2009 ಹಾಗೂ 2010ರಲ್ಲಿ ಕ್ರಮವಾಗಿ 40-60 ಹಾಗೂ 50-50 ಪ್ರಮಾಣದಲ್ಲಿ ಉತ್ಪಾದನೆ ಹಾಗೂ ರಫ್ತು ಮಾಡಿದ ಆರೋಪ ರೆಡ್ಡಿ ಅವರ ಕಂಪನಿ ಮೇಲಿದೆ. ಅದರೆ, ಎಲ್ಲವೂ ಬೇನಾಮಿ ಕಂಪನಿಗಳಾಗಿತ್ತು. ಹಿಂದ್ ಟ್ರೇಡರ್ಸ್ ಹಾಗೂ ಮಧುಶ್ರೀ ಎಂಟರ್ ಪ್ರೈಸಸ್ ನಿಂದ ಅಕ್ರಮ ರಫ್ತು ಸಾಗಿಸಲಾಗಿದ್ದು, ಸ್ವಸ್ತಿಕ್ ನಾಗರಾಜ್, ಖಾರಪುಡಿ ಮಹೇಶ್ ಅವರು ಸಾಗಾಣಿಕೆ ಜವಾಬ್ದಾರಿ ವಹಿಸಿಕೊಂಡಿದ್ದರು ಎನ್ನಲಾಗಿದೆ.












Click it and Unblock the Notifications