ನನ್ನ ಮಾತಿಂದ ಸಿಎಂಗೆ ಬೇಸರವಾಗಿದ್ದರೆ ಕ್ಷಮೆ ಕೇಳ್ತೀನಿ: ಸೋಮಶೇಖರ್
ಬೆಂಗಳೂರು, ಜನವರಿ 28: ಸಿದ್ದರಾಮಯ್ಯ ಅವರೇ ಎಂದಿಗೂ ನಮಗೆ ಸಿಎಂ ಎಂದು ಹೇಳಿ ಮೈತ್ರಿ ಸರ್ಕಾರದ ಮಧ್ಯೆ ವಿವಾದ ಎಬ್ಬಿಸಿರುವ ಕಾಂಗ್ರೆಸ್ನ ಎಸ್.ಟಿ.ಸೋಮಶೇಖರ್ ಅವರು ಈಗ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
ಎಂದಿದ್ದರೂ ಸಿದ್ದರಾಮಯ್ಯ ಅವರೇ ನಮಗೆ ಸಿಎಂ, ಸಿದ್ದರಾಮಯ್ಯ ಅವರನ್ನು ಸಿಎಂ ಆಗದಂತೆ ತಡೆಯಲೂ ಯಾರಿಗೂ ಸಾಧ್ಯವಿಲ್ಲ ಎಂದು ಎಸ್.ಟಿ.ಸೋಮಶೇಖರ್ ಅವರು ಅಬ್ಬರಿಸಿದ್ದರು, ಇದು ಸಿಎಂ ಕುಮಾರಸ್ವಾಮಿ ಅವರನ್ನು ಕೆರಳಿಸಿತ್ತು.
ಕೆಪಿಸಿಸಿ ಸಹ ಟಿ.ಸೋಮಶೇಖರ್ ಅವರನ್ನು ಗಂಭೀರವಾಗಿ ಪರಿಗಣಿಸಿದ್ದು ನೊಟೀಸ್ ನೀಡಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಟಿ.ಸೋಮಶೇಖರ್ ಕ್ಷಮೆ ಕೇಳುವ ಮಾತಾಡಿದ್ದಾರೆ.

ನನ್ನ ಮಾತಿನಿಂದ ಸಿಎಂ ಕುಮಾರಸ್ವಾಮಿ ಅವರಿಗೆ ನೋವಾಗಿದ್ದರೆ ಕ್ಷಮೆ ಕೇಳಲು ತಯಾರು ಎಂದು ಯಶವಂತಪುರ ಶಾಸಕರಾಗಿರುವ ಸೋಮಶೇಖರ್ ಹೇಳಿದ್ದಾರೆ.
ಕೆಲವರು ಮಗನಿಗೆ, ಸೊಸೆಗೆ ಮಾತ್ರ ಅಧಿಕಾರ ಕೊಡುತ್ತಾರೆ, ಆದರೆ ಸಿದ್ದರಾಮಯ್ಯ ಅವರು ಎಲ್ಲ ಜಾತಿಗಳಿಗೂ ರಾಜಕೀಯ ಅವಕಾಶ ಕೊಟ್ಟರು. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳಾಯಿತು ಆದರೆ ಈಗಲೂ ಬೆಂಗಳೂರು ರಸ್ತೆಗಳು ಸರಿಹೋಗಿಲ್ಲ. ಆದರೆ ಸಿದ್ದರಾಮಯ್ಯ ಅವರು ಇನ್ನು ಐದು ವರ್ಷ ಇದ್ದಿದ್ದರೆ ಬೆಂಗಳೂರು ಅಭಿವೃದ್ಧಿ ಆಗಿರುತ್ತಿತ್ತು ಎಂದು ಸೋಮಶೇಖರ್ ಅವರು ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದರು.
ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿದ್ರೂ ಸಾಲ ಮಾಡಿ ಚುನಾವಣೆ ಎದುರಿಸಿದ್ದಾರೆ. ಆದ್ರೆ ಇವ್ರ ವಿರುದ್ಧ ಒಳಸಂಚು ನಡೆಸಿ ಅಭ್ಯರ್ಥಿ ಹಾಕಿದ್ದರು. ಇವರು ಮಾಡಿರೋ ಸಾಲವನ್ನ ಈವರೆಗೂ ತೀರಿಸಲು ಆಗುತ್ತಿಲ್ಲ ಎಂಬ ಸುದ್ದಿ ಕೇಳಿ ನೋವಾಗುತ್ತದೆ ಅಂತಾ ಪರೋಕ್ಷವಾಗಿ ಜೆಡಿಎಸ್ ನಾಯಕರ ವಿರುದ್ಧ ಎಸ್.ಟಿ.ಸೋಮಶೇಖರ್ ಕಿಡಿಕಾರಿದ್ದರು. ಸಿದ್ದರಾಮಯ್ಯ ಅವರೇ ನನ್ನನ್ನು ಬಿಡಿಎ ಅಧ್ಯಕ್ಷನನ್ನಾಗಿ ಮಾಡಿದರು ಎಂದು ಸಹ ಸೋಮಶೇಖರ್ ಹೇಳಿದ್ದರು.












Click it and Unblock the Notifications