ಈದ್ಗಾ ಮೈದಾನ ವಿವಾದಕ್ಕೆ ಬಿಬಿಎಂಪಿಯೇ ಕಾರಣ ಎಂದ ಎಎಪಿ!
ಬೆಂಗಳೂರು ಜು.10: ಚಾಮರಾಜಪೇಟೆಯ ಈದ್ಗಾ ಮೈದಾನ ವಿಚಾರದಲ್ಲಿ ಬಿಬಿಎಂಪಿ ಆಯುಕ್ತರು ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದು, ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ.
ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಆಮ್ ಆದ್ಮಿ ಪಾರ್ಟಿ ಬೆಂಗಳೂರು ಸಂಘಟನಾ ಕಾರ್ಯದರ್ಶಿ ಹಾಗೂ ಪಕ್ಷದ ಚಾಮರಾಜಪೇಟೆ ಅಧ್ಯಕ್ಷ ಜಗದೀಶ್ ಚಂದ್ರ, "ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ದ್ವಂಧ್ವ ಹೇಳಿಕೆಗಳನ್ನು ನೀಡಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ" ಎಂದು ಆರೋಪಿಸಿದರು.
"ಬಿಬಿಎಂಪಿ ಮುಖ್ಯ ಆಯುಕ್ತರು ಈದ್ಗಾ ಮೈದಾನವನ್ನು ಒಮ್ಮೆ ವಕ್ಫ್ ಆಸ್ತಿ ಎಂದರೆ ಕರೆಯುತ್ತಾರೆ. ಮತ್ತೊಮ್ಮೆ ಬಿಬಿಎಂಪಿ ಆಸ್ತಿ ಎಂದು ಹೇಳಿಕೆ ನೀಡಿದ್ದಾರೆ. ಇದನ್ನು ಗಮನಿಸಿದರೆ ಪ್ರಕರಣದ ಸೂಕ್ಷ್ಮತೆ ಅರ್ಥ ಮಾಡಿಕೊಳ್ಳುವುದರಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಆಯುಕ್ತರ ಬೇಜವಾಬ್ದಾರಿಯಿಂದಾಗಿ ಈದ್ಗಾ ಮೈದಾನವು ವಿವಾದಿತ ಸ್ಥಳವಾಗುತ್ತಿದೆ" ಎಂದರು.

ಆಯುಕ್ತರ ಉದ್ದಟತನದ ಹೇಳಿಕೆ
ಈದ್ಗಾ ಮೈದಾನದಲ್ಲಿ ಕುರಿ ವ್ಯಾಪಾರದ ವೇಳೆ ತೆರಿಗೆ ಸಂಗ್ರಹಿಸುವ ಬಿಬಿಎಂಪಿಯು ನಂತರ ಆ ಸ್ಥಳವನ್ನು ಸ್ವಚ್ಛಗೊಳಿಸುವ ಪರಿಪಾಠ ಅನೇಕ ವರ್ಷಗಳಿಂದ ಜಾರಿಯಲ್ಲಿದೆ. ಆದರೆ ಇನ್ನುಮುಂದೆ ಆ ಸ್ಥಳವನ್ನು ಬಿಬಿಎಂಪಿ ವತಿಯಿಂದ ಸ್ವಚ್ಛ ಮಾಡುವುದಿಲ್ಲ ಎಂದು ಆಯುಕ್ತರು ಉದ್ಧಟತನದ ಹೇಳಿಕೆ ನೀಡಿದ್ದಾರೆ ಎಂದರು.

ರೋಗ ರುಜಿನ ಉಲ್ಬಣ
ಮೈದಾನವು ಸ್ವಚ್ಛಗೊಳ್ಳದಿದ್ದರೆ ಸುತ್ತಮುತ್ತ ಪ್ರದೇಶಗಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವಿದೆ. ಮಳೆಗಾಲ ಬೇರೆ ನೈರ್ಮಲ್ಯತೆಗೆ ಆದ್ಯತೆ ನೀಡದಿದ್ದರೆ ರೋಗ ರುಜಿನಗಳು ಹೆಚ್ಚಾಗುತ್ತವೆ. ಈ ಕುರಿತು ಆಯುಕ್ತ ತುಷಾರ್ ಗಿರಿನಾಥ್ ಅವರು ಪ್ರಕರಣದ ಸೂಕ್ಷ್ಮತೆ ಅರ್ಥ ಮಾಡಿಕೊಳ್ಳಬೇಕು ಎಂದು ಜಗದೀಶ್ ಚಂದ್ರ ತಿಳಿಸಿದರು.

ಈದ್ಗಾ ಮೈದಾನ ವಿವಾದ
ನೂರಾರು ವರ್ಷಗಳಿಂದ ಆಟದ ಮೈದಾನ ಸ್ಥಳ ಎನ್ನಲಾಗುತ್ತಿರುವ ಈದ್ಗಾ ಮೈದಾನ ಕುರಿತು ವಿವಾದಗಳು ಆಗಾಗ ಕೇಳಿ ಬರುತ್ತಲೇ ಇವೆ. ಈ ಕುರಿತು 1954ರಲ್ಲೆ ದಾವೆ ಹಾಕಲಾಗಿದೆ. ಅಂದಿನ ನಗರಸಭೆ ಮೈದಾನ ಕುರಿತು ದಾಖಲೆ ನೀಡುವಲ್ಲಿ ವಿಫಲವಾಗಿದೆ. ಈದ್ಗಾ ಮೈದಾನದಲ್ಲಿ ಕುರಿ ವ್ಯಾಪಾರಿ, ಮೈದಾನದಲ್ಲಿ ಮಕ್ಕಳ ಆಟ, ಮುಸಲ್ಮಾನರ ಹಬ್ಬಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಲೇ ಬಂದಿವೆ.

ಆಟದ ಮೈದಾನವಾಗಿಯೇ ಉಳಿಸಬೇಕು
ಈ ಕುರಿತು ಇತ್ತೀಚೆಗೆ ಶಾಸಕ ಜಮ್ಮೀರ್ ಅಹ್ಮದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅನೇಕರು ಅದನ್ನು ಆಟದ ಮೈದಾನವಾಗಿಯೇ ಉಳಿಸುವಂತೆ ಕೋರಿ ಕೊಂಡಿದ್ದಾರೆ. ಇದು ಕೇವಲ ಒಂದು ಜಾತಿಗೆ ಸಿಮೀತವಾದದ್ದಲ್ಲ. ಎಲ್ಲ ಸಮುದಾಯಕ್ಕೆ ಸೇರಿರುವುದು ಎಂದಿದ್ದರು. ಈ ಮಧ್ಯೆ ಬಕ್ರಿದ್ ಅಂಗವಾಗಿ ಈದ್ಗಾ ಮೈದಾನದಲ್ಲಿ ಕುರಿ ಮಾರಾಟ ನಡೆದಿತ್ತು. ಈ ಮೈದಾನ ಹಾಗೂ ರಸ್ತೆ ಅಕ್ಕಪಕ್ಕ ಉಂಟಾಗಿದ್ದ ತ್ಯಾಜ್ಯ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ವಚ್ಚತೆ ಕುರಿತು ನೀಡಿದ ಹೇಳಿಕೆ ಆಪ್ ಮುಖಂಡರ ಆಕ್ರೋಶಕ್ಕೆ ಗುರಿಯಾಗಿದೆ ಎಂದು ತಿಳಿದು ಬಂದಿದೆ.












Click it and Unblock the Notifications