ಐಎಎಸ್ ಅಧಿಕಾರಿ ಬಿ. ಎಂ. ವಿಜಯ್ ಶಂಕರ್ ಆತ್ಮಹತ್ಯೆ
ಬೆಂಗಳೂರು, ಜೂನ್ 23 : ಅಮಾನತುಗೊಂಡಿದ್ದ ಐಎಎಸ್ ಅಧಿಕಾರಿ ಬಿ. ಎಂ. ವಿಜಯ್ ಶಂಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ವಿಜಯ್ ಶಂಕರ್ ಐಎಂಎ ಹಗರಣಲ್ಲಿ ಆರೋಪಿಯಾಗಿದ್ದರು.
Recommended Video
ಬೆಂಗಳೂರಿನ ಜಯನಗರದಲ್ಲಿನ ನಿವಾಸದಲ್ಲಿ ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಬಿ. ಎಂ. ವಿಜಯ್ ಶಂಕರ್ (59) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಬಹುಕೋಟಿ ರೂಪಾಯಿ ಐಎಂಎ ಹಗರಣದಲ್ಲಿ ಆರೋಪಿಯಾಗಿದ್ದ ಬಿ. ಎಂ. ವಿಜಯ ಶಂಕರ್ ಎಸ್ಐಟಿ ಮತ್ತು ಸಿಬಿಐ ತನಿಖೆಯನ್ನು ಎದುರಿಸಿದ್ದರು. ಜೈಲುವಾಸವನ್ನು ಅನುಭವಿಸಿದ್ದ ಅವರು, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.
ಮಂಗಳವಾರ ಮನೆಯಲ್ಲಿ ಎಲ್ಲರೂ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ವಿಜಯ ಶಂಕರ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯವರು ಅವರನ್ನು ಸಂಪರ್ಕಿಸಲು ಪ್ರಯತ್ನ ನಡೆಸಿದಾಗ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಆಗ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು. ಪೊಲೀಸರು ಬಂದು ನೋಡಿದಾಗ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
1961ರಲ್ಲಿ ಜನಿಸಿದ್ದ ವಿಜಯ್ ಶಂಕರ್ 2001ರಿಂದ ಕೆಎಎಸ್ ಅಧಿಕಾರಿಯಾಗಿದ್ದರು. 2014ರಲ್ಲಿ ಐಎಎಸ್ ಅಧಿಕಾರಿಯಾಗಿದ್ದರು.

1.5 ಕೋಟಿ ರೂ. ಲಂಚ ಪಡೆದ ಆರೋಪ
ಬಹುಕೋಟಿ ರೂಪಾಯಿ ಐಎಂಎ ಹಗರಣದಲ್ಲಿ ಬಿ. ಎಂ. ವಿಜಯ್ ಶಂಕರ್ ಆರೋಪಿಯಾಗಿದ್ದರು. ಕಂಪನಿಯ ಪರವಾಗಿ ವರದಿ ನೀಡಲು 1.5 ಕೋಟಿ ರೂ. ಲಂಚ ಪಡೆದಿದ್ದಾರೆ ಎಂಬ ಆರೋಪವಿತ್ತು. ಎಸ್ಐಟಿ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಪ್ರಕರಣ ಬಳಿಕ ಸಿಬಿಐಗೆ ಹಸ್ತಾಂತರವಾಗಿತ್ತು.

ಪ್ರಕರಣ ದಾಖಲಿಸಲು ಅನುಮತಿ
ಐಎಂಎ ಹಗರಣದಲ್ಲಿ ಬಿ. ಎಂ. ವಿಜಯ್ ಶಂಕರ್ 18ನೇ ಆರೋಪಿ ಎಂದು ಸಿಬಿಐ ಚಾರ್ಜ್ ಶೀಟ್ ದಾಖಲು ಮಾಡಿತ್ತು. ಅವರ ವಿರುದ್ಧ ಪ್ರಕರಣ ದಾಖಲು ಮಾಡಲು ಕರ್ನಾಟಕ ಸರ್ಕಾರದ ಒಪ್ಪಿಗೆಯನ್ನು ಸಿಬಿಐ ಕೇಳಿತ್ತು.

ಅಮಾನತುಗೊಂಡಿದ್ದರು
ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಬಿ. ಎಂ. ವಿಜಯ್ ಶಂಕರ್ ಐಎಂಎ ಹಗರಣದಲ್ಲಿ ಬಂಧನವಾದ ಬಳಿಕ ಕರ್ನಾಟಕ ಸರ್ಕಾರ ಅವರನ್ನು ಸೇವೆಯಿಂದ ಅಮಾನತುಗೊಳಿಸಿತ್ತು. ಅವರ ಮನೆಯ ಮೇಲೆ ಸಿಬಿಐ ದಾಳಿ ಸಹ ನಡೆಸಿತ್ತು. ಎಸ್ಐಟಿ ಮತ್ತು ಸಿಬಿಐ ವಿಚಾರಣೆಯನ್ನು ಅವರು ಎದುರಿಸಿದ್ದರು.

ಬೆದರಿಕೆ ಕರೆ ಬಂದಿತ್ತೇ?
ಐಎಂಎ ಹಗರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಇನ್ನೂ ಜೈಲಿನಲ್ಲಿದ್ದಾನೆ. ಬಿ. ಎಂ. ವಿಜಯ್ ಶಂಕರ್ ಪ್ರಕರಣದಲ್ಲಿ ಆರೋಪಿಯಾಗಿದ್ದರಿಂದ ಅವರಿಗೆ ಬೆದರಿಕೆ ಕರೆ ಬಂದಿತ್ತೆ? ಎಂದು ಸಹ ಪೊಲೀಸರು ತನಿಖೆ ನಡೆಸಲಿದ್ದಾರೆ. ತಿಲಕ್ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications