ಮೋದಿ ಸಮಾವೇಶದಲ್ಲಿ ಭಾಗವಹಿಸಲು ಬಿಎಸ್ವೈ ಷರತ್ತೇನು?
ಸೋಮವಾರ ಹಾಸನ ಜಿಲ್ಲೆಗೆ ಭೇಟಿ ನೀಡಿದ್ದ ಯಡಿಯೂರಪ್ಪ, ಹಾಸನಾಂಬೆ ದರ್ಶನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು, ಎರಡು ತಿಂಗಳಿಂದಲೂ ಎನ್ಡಿಎ ಬೆಂಬಲಿಸುವುದಾಗಿ ಹೇಳಿಕೊಂಡು ಬರುತ್ತಿದ್ದೇನೆ. ಕೆಜೆಪಿಯನ್ನು ಎನ್ಡಿಎ ಅಂಗ ಪಕ್ಷವೆಂದು ಪರಿಗಣಿಸಿ ಎನ್ಡಿಎ ಸಭೆಗಳಿಗೆ ಆಹ್ವಾನಿಸುವಂತೆ ಕೋರಿ ಎನ್ಡಿಎ ಅಧ್ಯಕ್ಷ ಎಲ್.ಕೆ.ಅಡ್ವಾಣಿಯವರಿಗೆ ಪತ್ರ ಬರೆದಿದ್ದೇನೆ ಎಂದರು.
ಅಡ್ವಾಣಿ ಅವರಿಂದ ಪತ್ರಕ್ಕೆ ಯಾವುದೇ ಉತ್ತರ ಬಂದಿಲ್ಲ. ಎನ್ಡಿಎ ಬೆಂಬಲಿಸುವ ತಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ. ಕೆಜೆಪಿಯನ್ನು ಎನ್ಡಿಎ ಅಂಗಪಕ್ಷವೆಂದು ಘೋಷಿಸಿದರೆ, ನ.17ರಂದು ನಡೆಯುವ ನರೇಂದ್ರ ಮೋದಿ ಅವರ ಬೆಂಗಳೂರು ಸಮಾವೇಶದಲ್ಲಿ ಭಾಗವಹಿಸುತ್ತೇನೆ ಹಾಗೂ ಸಮಾವೇಶಕ್ಕೆ ಅಗತ್ಯ ಸಹಕಾರ ನೀಡುತ್ತೇನೆ ಎಂದು ಯಡಿಯೂರಪ್ಪ ಹೇಳಿದರು. (ಮೋದಿ ಬೆಂಗಳೂರು ಸಮಾವೇಶ ನ.17ಕ್ಕೆ)
ಎನ್ಡಿಎ ಬೆಂಬಲಿಸುವುದಾಗಿ ಘೋಷಿಸಿದ ಮೇಲೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆಗೆ ಒಪ್ಪಿದ್ದೇವೆ ಎಂದು ಅರ್ಥ. ಇಂತಹ ಕ್ಷೇತ್ರಗಳು ಬೇಕು ಎಂದು ನಾವು ಬೇಡಿಕೆ ಇಡುವುದಿಲ್ಲ. ಕೆಜೆಪಿ ಅಭ್ಯರ್ಥಿಗಳು ಗೆಲ್ಲಲು ಅವಕಾಶವಿರುವ ಕ್ಷೇತ್ರಗಳನ್ನು ಕೆಜೆಪಿಗೆ ನಿಡಬೇಕೆಂದು ಮನವಿ ಮಾಡಲಾಗುವುದು ಎಂದರು.
ಏಕವಚನಕ್ಕೆ ವಿಷಾದ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಏಕವಚನದಲ್ಲಿ ಮಾತನಾಡಿರುವುದಕ್ಕೆ ವಿಷಾದಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಆವೇಶಕ್ಕೊಳಗಾಗಿ ಇತಿ-ಮಿತಿ ಮೀರಿ ನಾನು ಮಾತನಾಡಿರುವುದು ಸ್ವತಃ ನನ್ನ ಮನಸ್ಸಿಗೂ ನೋವು ತಂದಿದೆ ಎಂದು ಅವರು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರು ಶಿವಮೊಗ್ಗಕ್ಕೆ ಬಂದು ಯಡಿಯೂರಪ್ಪ ಸಿಎಂ ಆಗಿದ್ದಾಗ 1000 ಕೋಟಿ ರೂ. ಲೂಟಿ ಹೊಡೆದಿದ್ದಾರೆ. ಆದರೂ, ಶಿವಮೊಗ್ಗದಲ್ಲಿ ಅಭಿವೃದ್ಧಿ ಕಾರ್ಯಗಳಾಗಿಲ್ಲ ಎಂದು ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದರು.
ಆದ್ದರಿಂದ ನಾನು ಆವೇಶಕ್ಕೊಳಗಾಗಿ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದೆ. ಅವರ ಮನಸ್ಸಿಗೆ ಬೇಸರವಾಗಿದ್ದರೆ ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು. (ಸಿದ್ದರಾಮಯ್ಯ ರಾಜೀನಾಮೆ ಕೊಡಿಸುವೆ : ಯಡಿಯೂರಪ್ಪ)