ಸಿಬಿಐ, ಐಟಿ, ಇಡಿಯಲ್ಲ, ಅವರಪ್ಪನಿಗೂ ಹೆದರುವುದಿಲ್ಲ: ಎಚ್ಡಿಕೆ
ಬೆಂಗಳೂರು, ಅಕ್ಟೋಬರ್ 19: ಆದಾಯ ತೆರಿಗೆ, ಸಿಬಿಐ ಅಥವಾ ಜಾರಿ ನಿರ್ದೇಶನಾಲಯದ ದಾಳಿಗಳಿಗೆ ತಾವು ಹೆದರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಬಸವನಹಳ್ಳಿಯಲ್ಲಿ ಶನಿವಾರ ಪ್ರಾಥಮಿಕ ಕೃಷಿಪತ್ತನ ಸಹಕಾರ ಸಂಘದ ನೂತಕ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
'ನಾನು ದೊಡ್ಡ ದೊಡ್ಡ ಸಂಸ್ಥೆಗಳನ್ನೇನೂ ನಡೆಸುತ್ತಿಲ್ಲ. ಫ್ಯಾಕ್ಟರಿಗಳನ್ನು ಇಟ್ಟುಕೊಂಡಿಲ್ಲ. ಮೈಸೂರಿನಲ್ಲಿ ಸಿನಿಮಾ ಹಂಚಿಕೆದಾರನಾಗಿ ಮಾಡುತ್ತಿದ್ದ ವ್ಯವಹಾರ ಕೂಡ ನಿಂತುಹೋಗಿದೆ. ಯಾವುದೇ ವ್ಯವಹಾರಗಳು ಇಲ್ಲದೇ ಇರುವುದರಿಂದ ನಿರಾಳವಾಗಿದ್ದೇನೆ. ಹೀಗಾಗಿ ಸಿಬಿಐ, ಐಟಿ, ಇಡಿಯಲ್ಲ, ಅವರ ಅಪ್ಪಂದಿರೇ ಬಂದರೂ ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ' ಎಂದು ಹೇಳಿದರು.

ಸಾಲಮನ್ನಾ ವಿಚಾರದಲ್ಲಿ ಬ್ಯಾಂಕಿನ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸಿದರೆ ರೈತರು ನೇರವಾಗಿ ನನ್ನ ಮನೆಗೆ ಬಂದು ದೂರು ನೀಡಲಿ. ಅಂತಹ ಅಧಿಕಾರಿಗಳನ್ನು ಅಧಿಕಾರ ಕೈಯಲ್ಲಿ ಇಲ್ಲದಿದ್ದರೂ ಜೈಲಿಗೆ ಕಳಿಸುತ್ತೇನೆ ಎಂದರು.
ದೇಶದಲ್ಲಿ ಹಸಿವಿನಿಂದ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ದಿನಕ್ಕೆ ಎರಡು ಹೊತ್ತು ಊಟಕ್ಕೆ ಇಲ್ಲದೆ ಜನರು ಸಾಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನಗಳೇ ನಮಗಿಂತ ಉತ್ತಮ ಸ್ಥಿತಿಯಲ್ಲಿವೆ. ದೇಶದಲ್ಲಿ ಭಾರಿ ಬದಲಾವಣೆ ಆಗುತ್ತದೆ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಆದರೆ ದೇಶದ ಸ್ಥಿತಿ ದಯನೀಯವಾಗಿದೆ ಎಂದು ಟೀಕಿಸಿದರು.












Click it and Unblock the Notifications