ಕನ್ನಡದ ಮೇಲಿನ ಆಕ್ರಮಣ ಸಹಿಸೋಲ್ಲ: ಸಿದ್ದು ಖಡಕ್ ಸಂದೇಶ
ಬೆಂಗಳೂರು, ಜುಲೈ 31: "ಬೇರೆಡೆಯಿಂದ ಕರ್ನಾಟಕಕ್ಕೆ ಬರುವವರು ನಮ್ಮ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕೇ ಹೊರತು, ಅದರ ಮೇಲೆ ದಾಳಿ ಮಾಡಬಾರದು. ಯಾರಾದರೂ ಹಾಗೆ ದಾಳಿ ಮಾಡಿದರೆ ಅಂಥವರಿಗೆ ಕಟ್ಟುನಿಟ್ಟಿನ ಸಂದೇಶ ನೀಡುವಲ್ಲಿ ಹಿಂಜರಿಯಬೇಡಿ" ಇದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತು.
ಮೆಟ್ರೋದಲ್ಲಿ ಹಿಂದಿ ಹೇರಿಕೆ ಸೇರಿದಂತೆ ಕನ್ನಡ ಭಾಷೆಯ ಮೇಲಾಗುತ್ತಿರುವ ದಾಳಿಯ ಕುರಿತು ಸಿದ್ದರಾಮಯ್ಯ ಅವರು ಮಾತನಾಡಿದ 14 ನಿಮಿಷಗಳ ವಿಡಿಯೋವನ್ನು ರಾಜ್ಯ ಸರ್ಕಾರ ಜುಲೈ 29 ರಂದು ಬಿಡುಗಡೆ ಮಾಡಿದೆ. ಕರ್ನಾಟಕ ನಮ್ಮ ಹೆಮ್ಮೆ ಎಂಬ ಈ ವಿಡಿಯೋದಲ್ಲಿ ಕರ್ನಾಟಕ ರಾಜ್ಯದ ಇತಿಹಾಸ, ಕನ್ನಡ ಭಾಷೆಯ ಹಿರಿಮೆ-ಗರಿಮೆಗಳನ್ನು ಹಾಡಿಹೊಗಳಲಾಗಿದೆ.

ನೆರೆರಾಜ್ಯದವರು ನಮ್ಮ ಸಹೋದರ-ಸಹೋದರಿಯರಿದ್ದಂತೆ, ನಾವು ಅವರನ್ನು ಪ್ರೀತಿಸಬೇಕು. ಆದರೆ ನಮ್ಮ ಭಾಷೆ, ನೆಲ, ಜಲದ ಮೇಲೆ ದಾಳಿ ನಡೆದಾಗಲೂ ನಾವು ಯಾವ ಖಡಕ್ ಸಂದೇಶ ನೀಡದೆ ಸುಮ್ಮನಿರುವುದು ತರವಲ್ಲ ಎಂದು ಈ ವಿಡಿಯೋದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.
'ಕನ್ನಡ ಕವಲು ಸಮಿತಿ'ಯ(ಈಗಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರ) ಅಧ್ಯಕ್ಷರಾಗುವ ಮೂಲಕವೇ ತಮ್ಮ ರಾಜಕೀಯ ಜೀವನ ಆರಂಭಿಸಿದ ಸಿದ್ದರಾಮಮಯ್ಯ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆ ಕರ್ನಾಟಕದಲ್ಲಿ ಬದುಕುತ್ತಿರುವ ಪ್ರತಿಯೊಬ್ಬನ ಆದ್ಯ ಜವಾಬ್ದಾರಿಯಾಗಬೇಕು ಎಂದು ಈ ವಿಡಿಯೋದಲ್ಲಿ ಹೇಳಿದ್ದಾರೆ.












Click it and Unblock the Notifications