1,000 ಕೋಟಿ ರೂಪಾಯಿ ಮೊತ್ತದ ಅಕ್ರಮ ಬಯಲಿಗೆ!
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ (karnataka elections) ಸಂದರ್ಭದಲ್ಲೇ ಆದಾಯ ತೆರಿಗೆ ಇಲಾಖೆ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಕರ್ನಾಟಕದಲ್ಲಿ ಮಾರ್ಚ್ 31ರಂದು ಕೆಲ ಸಹಕಾರಿ ಬ್ಯಾಂಕುಗಳ ಮೇಲೆ ದಾಳಿ ಮಾಡಿದ್ದ ಆದಾಯ ತೆರಿಗೆ ಇಲಾಖೆ (Income Tax) ಅಧಿಕಾರಿಗಳು, ಬರೋಬ್ಬರಿ 1,000 ಕೋಟಿ ರೂಪಾಯಿ ಮೊತ್ತದ ಅಕ್ರಮ ಬಯಲಿಗೆ ಎಳೆದಿದ್ದಾರೆ.
ಆದಾಯ ತೆರಿಗೆ ಇಲಾಖೆ ದಾಳಿ ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಈ ಕುರಿತು ಮಾಹಿತಿ ನೀಡಿರುವ CBDT, 16 ಸಹಕಾರಿ ಬ್ಯಾಂಕುಗಳ ಮೇಲೆ ದಾಳಿ ನಡೆಸಿ ಮಾಹಿತಿ ಸಂಗ್ರಹಿಸಲಾಗಿತ್ತು ಎಂದು ತಿಳಿಸಿದೆ. ಗ್ರಾಹಕರನ್ನು ತೆರಿಗೆ ಕಟ್ಟದಂತೆ ಹಣವನ್ನು ರೂಟಿಂಗ್ನಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂದ ಹಿನ್ನಲೆ ದಾಳಿ ನಡೆದಿತ್ತು. ದಾಳಿ ವೇಳೆ 33 ಕೋಟಿ ರೂಪಾಯಿ ನಗದು ಹಾಗೂ 2 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿತ್ತು ಎಂದು ಮಾಹಿತಿ ನೀಡಲಾಗಿದೆ.

ಸಿಕ್ಕ ಸಿಕ್ಕ ಚೆಕ್ಗಳ ಡಿಸ್ಕೌಂಟ್?
ಅಂದಹಾಗೆ CBDT ವಶಪಡಿಸಿಕೊಂಡಿರುವ ದಾಖಲೆಗಳಲ್ಲಿ ಬ್ಯಾಂಕುಗಳು ಅಸ್ತಿತ್ವದಲ್ಲಿರದ ಕಂಪನಿಗಳ ಚೆಕ್ಗಳನ್ನು ಡಿಸ್ಕೌಂಟ್ ಮಾಡಿರುವುದು ಬೆಳಕಿಗೆ ಬಂದಿದೆ. ಇದರಲ್ಲಿ ಗುತ್ತಿಗೆದಾರರು ಹಾಗೂ ರಿಯಲ್ ಎಸ್ಟೇಟ್ ಕಂಪನಿಗಳು ಸೇರಿದಂತೆ ಹಲವರಿಗೆ ಸೇರಿದ ಚೆಕ್ಗಳನ್ನ ಡಿಸ್ಕೌಂಟ್ ಮಾಡಿರುವುದು ತನಿಖೆ ವೇಳೆ ಬಯಲಾಗಿದೆ. ಅಲ್ಲದೆ ಸಹಕಾರಿ ಬ್ಯಾಂಕುಗಳು ಚೆಕ್ ಡಿಸ್ಕೌಂಟ್ ಮಾಡುವಾಗ KYC ಮಾನದಂಡ ಅನುಸರಿಸಿಲ್ಲ ಎಂದು CBDT ಆರೋಪಿಸಿದೆ. ಈ ಮೂಲಕ ಚುನಾವಣೆಗೆ ಮೊದಲು ಕರ್ನಾಟಕದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಲಾಗಿದೆ.
ತೆರಿಗೆ ನಿಯಮ ಉಲ್ಲಂಘನೆ?
ಮತ್ತೊಂದು ಕಡೆ ಚೆಕ್ ಡಿಸ್ಕೌಂಟ್ ಮಾಡಿದ ನಂತರ ಆ ಹಣವನ್ನು ನೇರವಾಗಿ ಸಹಕಾರಿ ಬ್ಯಾಂಕುಗಳ ಅಕೌಂಟ್ಗೆ ಕ್ರೆಡಿಟ್ ಮಾಡಲಾಗುತ್ತಿತ್ತು ಎನ್ನಲಾಗಿದೆ. ಹಾಗೇ ಈ ಪೈಕಿ ಕೆಲ ಸರ್ಕಾರಿ ಬ್ಯಾಂಕುಗಳ ಹಣ ಬಿಡಿಸಿ ಚೆಕ್ ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತಿತ್ತು, ಆದರೆ ಇದಕ್ಕೆ ಸೂಕ್ತ ಕಾರಣ ತಿಳಿಸಿರಲಿಲ್ಲ ಎಂದು ಆರೋಪಿಸಲಾಗಿದೆ. ಅಲ್ಲದೆ ತೆರಿಗೆ ತಪ್ಪಿಸಲು ಸಹಕಾರಿ ಬ್ಯಾಂಕುಗಳನ್ನು ಬಳಸಿಕೊಳ್ಳಲಾಗಿದ್ದು, ಆದಾಯ ತೆರಿಗೆ ನಿಯಮ ಗಾಳಿಗೆ ತೂರಿರುವುದು ಸ್ಪಷ್ಟವಾಗಿದೆ ಎಂದು CBDT ತಿಳಿಸಿದೆ.
1,000 ರೂ. ಕೋಟಿ ಬೋಗಸ್?
ಹೀಗೆ ಹೆಚ್ಚಿನ ಮೊತ್ತದ ಚೆಕ್ ಡಿಸ್ಕೌಂಟ್ ಮಾಡಿಸಿ ನಕಲಿ ಕಂಪನಿಗಳು ಬೋಗಸ್ ವೆಚ್ಚ ತೋರಿಸಲು ದಾರಿ ಮಾಡಿಕೊಡಲಾಗುತ್ತಿತ್ತು. ಇದೇ ರೀತಿ ಸುಮಾರು 1,000 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತವನ್ನ ಬೋಗಸ್ ಎಂದು ತೋರಿಸಲಾಗಿದೆ ಎಂದು CBDT ಪ್ರಕಟಣೆಯಲ್ಲಿ ತಿಳಿಸಿದೆ. ಸಹಕಾರಿ ಗ್ರಾಹಕರು ಇಟ್ಟಿದ್ದ ನಗದನ್ನು FDR ತೆರೆಯಲು ಅವಕಾಶ ಮಾಡಿಕೊಟ್ಟು ಹಾಗೂ ಅದೇ ಹಣ ಬಳಸಿಕೊಂಡು ಸಾಲ ಮಂಜೂರು ಮಾಡಲಾಗಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ ತನಿಖೆ ವೇಳೆ ಸುಮಾರು 15 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಹಣವನ್ನು ಈ ರೀತಿ ಸಾಲವಾಗಿ ನೀಡಿರುವುದು ಕೂಡ ಬೆಳಕಿಗೆ ಬಂದಿದೆಯಂತೆ.

ಇನ್ನು ಇಷ್ಟು ದೊಡ್ಡ ಮೊತ್ತದ ಅಕ್ರಮ ನಡೆದಿರುವುದು ಚುನಾವಣೆ ಹೊತ್ತಲ್ಲಿ ಸಂಚಲನ ಸೃಷ್ಟಿಸಿದೆ. ಈ ರೀತಿ ಲೆಕ್ಕಕೆ ಸಿಗದ ಹಣವನ್ನು ಬ್ಯಾಂಕುಗಳು ರಿಯಲ್ ಎಸ್ಟೇಟ್ ಸೇರಿದಂತೆ ಬೇರೆ ಬೇರೆಡೆ ತೊಡಗಿಸಲಾಗಿದೆ. ಈ ಹಣವನ್ನು ಬೇರೆ ಬೇರೆ ಮೂಲ ತೋರಿಸುವ ಮೂಲಕ ಖಾತೆಗೆ ಹಿಂತಿರುಗಿಸಲಾಗಿದೆಯಂತೆ. ಅಂತಿಮವಾಗಿ ಬ್ಯಾಂಕಿಗೆ ಸಂಬಂಧಪಟ್ಟ ವ್ಯಕ್ತಿಗಳು ಈ ಹಣವನ್ನು ನಿಯಮ ಬಾಹೀರವಾಗಿ ವೈಯಕ್ತಿಕ ಹಿತಾಸಕ್ತಿಗೆ ಬಳಸಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಲಾಗಿದೆ. ಒಟ್ಟಾರೆ ಆದಾಯ ತೆರಿಗೆ ಇಲಾಖೆಯ ಈ ದಾಳಿಯಲ್ಲಿ ಯಾರೆಲ್ಲಾ ಲಾಕ್ ಆಗಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications