BJPvsBJP: ವಿಜಯೇಂದ್ರಗೆ ಮನೆ ಬರುವುದು ಬೇಡವೆಂದು ಕಡ್ಡಿ ಮುರಿದಂತೆ ಹೇಳಿದ 'ಹಿಂದೂ ಹುಲಿ' ಯತ್ನಾಳ್
ಬೆಂಗಳೂರು, ನವೆಂಬರ್ 24: ಬಿಜೆಪಿ ಪಕ್ಷಕ್ಕೆ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ನೂತನವಾಗಿ ನೇಮಕವಾದ ಬಳಿಕ ವಿಜಯೇಂದ್ರ ಅವರಿಗೆ ನಮ್ಮ ಮನೆಗೆ ಭೇಟಿಗೆ ಬರುವುದು ಬೇಡ ಎಂದು ಕಡ್ಡಿ ಮುರಿದಂತೆ ಸ್ವಪಕ್ಷದ ಶಾಸಕ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ.
ಈ ಕುರಿತು ಇತ್ತೀಚೆಗೆ ಸುದ್ದಿಗಾರರಿಗೆ ಸ್ವತಃ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಮಾಹಿತಿ ನೀಡಿದ್ದಾರೆ. ಬಿಜೆಪಿ ಪಕ್ಷದಲ್ಲಿ ನಾನು ಹೊರಗುಳಿಯುವಂತೆ ಮಾಡುವಲ್ಲಿ ವಿಜಯೇಂದ್ರ ಅವರ ಪಾತ್ರ ಏನೆಂಬುದು ನನಗೆ ಗೊತ್ತಿದೆ. ಅಂದ ಮೇಲೆ ನನ್ನ ಭೇಟಿಗೆ ಮನೆಗೆ ಬರುವುದು ಬೇಡ. ಕಾಟಾಚಾರಕ್ಕೆ ನಾಟಕೀಯವಾಗಿ ಹೂಗುಚ್ಚ ಕೊಡಲು ಬರುವುದು ಬೇಡ. ಇದನ್ನು ನೋಡಿದ ಮಾಧ್ಯಮಗಳು ವಿಜಯೇಂದ್ರ ಅವರಿಗೆ ತಲೆಬಾಗಿದ ಯತ್ನಾಳ್ ಎಂದು ಸುದ್ದಿ ಆಗುವುದು ಬೇಡ ಎಂದು ಸುದ್ದಿಗಾರರ ಕೆಲವು ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮಂತ್ರಿ ಮಂಡಲದಲ್ಲಿ ನನಗೆ ಮಂತ್ರಿ ಸ್ಥಾನ ನೀಡದೇ ನನ್ನ ತುಳಿಯುವಲ್ಲಿ ನಡೆದ ನಿಮ್ಮ ಪ್ರಯತ್ನ ಬಗ್ಗೆ ಗೊತ್ತಿದೆ. ವಿಜಯಪುರ ಅಭಿವೃದ್ಧಿಗೆ ನೀಡಿದ್ದ 125 ಕೋಟಿ ಹಣ ವಾಪಸ್ ಪಡೆದಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಅವರಿಗೆ ನೀಡಿದ ಕೆಲಸ ಕಾರ್ಯಗಳ ಪತ್ರಗಳು ವಿಜಯೇಂದ್ರ ಅವರು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದರು ಎಂದು ಮತ್ತೆ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
ಪಕ್ಷ, ದೇಶ, ಹಿಂದೂತ್ವಕ್ಕಾಗಿ ದುಡಿಯುತ್ತೇನೆ
ತಾಯಿ ಮತ್ತು ದೇವರ ಸಾಕ್ಷಿಯಾಗಿ ಮುಂದಿನ ಲೋಕಸಭಾದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ನಾನು ಶ್ರಮಿಸುತ್ತೇವೆ. ಹಿಂದುತ್ವಕ್ಕಾಗಿ ಈ ದೇಶಕ್ಕೆ ದುಡಿಯಲು ನಾನು ಸಿದ್ದರಿದ್ದೇವೆ ಎಂದು ತಮ್ಮ ನಿಲುವನ್ನು ಅವರು ಸ್ಪಷ್ಟಪಡಿಸಿದರು.

ವಿಜಯೇಂದ್ರ ಅವರ ರಾಜ್ಯಾಧ್ಯಕ್ಷರ ಅವಧಿಯಲ್ಲಿ ಅವರು ಪಕ್ಷ ಕುರಿತು ಕೈಗೊಳ್ಳುವ ನಿರ್ಧಾರ, ಸೂಚನೆಗಳಿಗೆ ವಿರುದ್ಧವಾಗಿ ನಡೆದ ಇದು ಬಿಜೆಪಿ vs ಬಿಜೆಪಿ ಆಗುತ್ತದೆ ಎಂಬ ಅನುಮಾನವು ಮೂಡಿದೆ.
ಬಿಜೆಪಿ ಹೈಕಮಾಂಡ್ ಎಲ್ಲರ, ಎಲ್ಲ ನಾಯಕರ ಭಾವನೆಗಳನ್ನು ಪರಿಗಣಿಸಬೇಕಿತ್ತು. ಎಲ್ಲ ನಿರ್ಣಯ ಕೈಗೊಳ್ಳಲು ಇದು ಕಾಂಗ್ರೆಸ್ ಹೈಕಮಾಂಡ್ ಅಲ್ಲ ಎಂದು ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ಅಸಮಧಾನ ವ್ಯಕ್ತಪಡಿಸಿದರು. ನಮ್ಮದು ಬಿಜೆಪಿ ಕಾರ್ಯಕರ್ತರ ಪಕ್ಷ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮ ವಿರುದ್ಧದ ಹೈಕಮಾಂಡ್ ಕೈಗೊಂಡ ನಿರ್ಣಯ ಯಾವುದೇ ಎಂಬುದನ್ನು ಕಾಲ ಬಂದಾಗ ತಿಳಿಸುತ್ತೇನೆ ಎಂದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ವಿರೋಧ ಪಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಆ ಸ್ಥಾನ ಸಿಗದೇ ಆರ್.ಅಶೋಕ್ ಪಾಲಾಯಿತು. ಇತ್ತ ರಾಜ್ಯಾಧ್ಯಕ್ಷ ಸ್ಥಾನವು ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಅವರಿಗೆ ಧಕ್ಕಿತು.
ಇವರಿಬ್ಬರ ಮಧ್ಯೆ ಸಮನ್ವಯತೆ ಸಾಧ್ಯವಾ?: ಉತ್ತರ
ತಮ್ಮ ನೇರ ನುಡಿ-ನಡೆಯಿಂದ ಆಗಾಗ ಮುನ್ನೆಲೆ ಬರುವ ಯತ್ನಾಳ್ ಅವರು ಯಡಿಯೂರಪ್ಪ ಮತ್ತವರ ಪುತ್ರ ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದವರು. ಸದ್ಯ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ತಾವು ಸದಾ ಟೀಕಿಸುತ್ತಿದ್ದ ವಿಜಯೇಂದ್ರ ಪಾಲಾಗಿದೆ. ಹಾಗಾದರೆ ಈ ಉಭಯ ನಾಯಕರು ಸಂಘಟಿತರಾಗಿ, ಸಮನ್ವಯದಿಂದ ಹೇಗೆ ಹೋಗುತ್ತಾರೆ ಎಂಬ ಪ್ರಶ್ನೆಗೆ ಉದ್ಭವವಾಗಿತ್ತು.
ನಾಟಕೀಯತೆಗೆ ಜಾಗ ಇಲ್ಲ ಎಂದ ಯತ್ನಾಳ್ ಅವರು ಪಕ್ಷಕ್ಕಾಗಿ, ಲೋಕಸಭಾ ಚುನಾವಣೆಯಲ್ಲಿ ಕೇಸರಿ ಪಡೆಗೆ ಅಧಿಕಾರ ಧಕ್ಕುವಂತೆ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಅಂದರೆ ರಾಜ್ಯಾಧ್ಯಕ್ಷ ಸೂಚನೆ ಅಗತ್ಯವಿಲ್ಲದೇ ತಾವು ತಮ್ಮ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಈ ಮೂಲಕ ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಶಾಸಕ ಯತ್ನಾಳ್ ಕತೆ ಏನು ಎಂದುಕೊಂಡಿದ್ದವರಿಗೆ ತಕ್ಕ ಉತ್ತರ ಸಿಕ್ಕಿದೆ ಅಂತಲೇ ಭಾವಿಸಬಹುದಾಗಿದೆ.












Click it and Unblock the Notifications