ಸಿಡಿ ರಾಜಕೀಯ: ಬಿಜೆಪಿ ಶಾಸಕರ ವೈಯಕ್ತಿಕ ಸಿಡಿಗಳೂ ಇವೆಯಂತೆ
ಬೆಂಗಳೂರು, ಜನವರಿ 10: ಕೆಲವು ವರ್ಷಗಳ ಹಿಂದೆ ಬಹು ಪ್ರಚಲಿತದಲ್ಲಿದ್ದ, ಸರ್ಕಾರವನ್ನು ಉರುಳುಸಿದ್ದ ಸಿಡಿ ರಾಜಕಾರಣ ಮತ್ತೆ ಮುನ್ನೆಲೆಗೆ ಬಂದಂತಿದೆ.
ಮಾಜಿ ಸಿಎಂ ಕುಮಾರಸ್ವಾಮಿ ಅವರು ಇಂದು ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಸಿಡಿ ಬಿಡುಗಡೆ ಮಾಡಿದ್ದಾರೆ. 35 ವಿವಿಧ ದೃಶ್ಯಗಳಿರುವ ಸಿಡಿಯಲ್ಲಿ ಮಂಗಳೂರು ಗಲಭೆಯಲ್ಲಿ ಪೊಲೀಸರು ಹೇಗೆ ಹಿಂಸಾತ್ಮಕವಾಗಿ ವರ್ತಿಸಿದರು ಎಂಬುದಕ್ಕೆ ಸಾಕ್ಷ್ಯಗಳಿವೆ.
ಕುಮಾರಸ್ವಾಮಿ ಬಿಡುಗಡೆ ಮಾಡಿದ ವಿಡಿಯೋ: ಪೊಲೀಸರ ದೌರ್ಜನ್ಯ ಸೆರೆ
ಮಂಗಳೂರು ಗಲಭೆ ವಿಡಿಯೋ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿರುವಾಗಲೇ ಕುಮಾರಸ್ವಾಮಿ ಮತ್ತೊಂದು ಸಿಡಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಮಂಗಳೂರು ಗಲಭೆ ವಿಡಿಯೋ ಬಿಡುಗಡೆ ನಂತರ ಮಾತನಾಡಿದ ಕುಮಾರಸ್ವಾಮಿ, 'ಬಿಜೆಪಿಯ ಹಲವು ಶಾಸಕರ, ಮಂತ್ರಿಗಳು ಖಾಸಗಿ ವಿಡಿಯೋಗಳೂ ಸಹ ನನ್ನ ಬಳಿ ಇವೆ, ಅವನ್ನು ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ' ಎಂದಿದ್ದಾರೆ.
ಸಿಡಿ ಎಂದರೆ ಬಿಜೆಪಿಯವರಿಗೆ ಭಯ ಶುರುವಾಗುತ್ತೆ: ಕುಮಾರಸ್ವಾಮಿ
'ಸಿಡಿ ಬಿಡುಗಡೆ ಮಾಡುತ್ತೇನೆ ಎಂದರೆ ಬಿಜೆಪಿಯವರಿಗೆ ಭಯ ಶುರುವಾಗುತ್ತದೆ. ನಮ್ಮ ಖಾಸಗಿ ಸಿಡಿ ಬಿಡುಗಡೆ ಎಂದು ಆದರೆ ಇಂದು ಆ ರೀತಿಯ ಸಿಡಿ ಬಿಡುಗಡೆ ಮಾಡುತ್ತಿಲ್ಲ, ಖಾಸಗಿ ಸಿಡಿಗಳೂ ನನ್ನ ಬಳಿ ಸಾಕಷ್ಟು ಬರುತ್ತಲೇ ಇರುತ್ತವೆ, ಅವನ್ನು ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ' ಎಂದಿದ್ದಾರೆ.
ಮಂಗಳೂರು ಗಲಭೆ ವಿಡಿಯೋ ಸರ್ಕಾರಕ್ಕೆ ಸೃಷ್ಟಿಸಿದೆ ಸಂಕಷ್ಟ
ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಮಂಗಳೂರು ಗಲಭೆ ಸಿಡಿ ಈಗಾಗಲೇ ರಾಜಕೀಯದಲ್ಲಿ ಒಂದು ಹಂತಕ್ಕೆ ಅಲ್ಲೋಲ-ಕಲ್ಲೋಲ ಎಬ್ಬಿಸಿದೆ. ಬರುವ ವಿಧಾನಸಭೆ ಕಲಾಪದಲ್ಲಿ ಈ ಸಿಡಿ ವಿಷಯ ಬಹುವಾಗಿ ಚರ್ಚೆ ಆಗುವುದು ಖಾಯಂ ಎನ್ನಲಾಗುತ್ತಿದೆ.
ಮಂಗಳೂರು ಗಲಭೆ: ಪೊಲೀಸರ ವಿರುದ್ಧ ಕುಮಾರಸ್ವಾಮಿ ವಿಡಿಯೋ ಬಿಡುಗಡೆ
ಸರ್ಕಾರದ ಬೆಂಬಲಕ್ಕೆ ಧಾವಿಸಿದ್ದಾರೆ ಸಂಸದರು, ಸಚಿವರು
ಗೃಹ ಸಚಿವರು, ಕೇಂದ್ರ ಸಚಿವರುಗಳು, ಸಂಸದರು ಇನ್ನೂ ಇತರರು ಈಗಾಗಲೇ ಸಿಡಿಯಲ್ಲಿರುವ ದೃಶ್ಯಗಳ ಬಗ್ಗೆ ಹೇಳಿಕೆಗಳನ್ನು ನೀಡಲು, ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಆರಂಭಿಸಿದ್ದಾರೆ.
ವಿಡಿಯೋ ಬಿಡುಗಡೆ ಖಂಡಿಸಿರುವ ಗೃಹ ಸಚಿವ
ಕುಮಾರಸ್ವಾಮಿ ವಿಡಿಯೋ ಬಿಡುಗಡೆ ಮಾಡಿರುವುದು ಸರಿಯಲ್ಲವೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಆರೋಪ ಮಾಡಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಸದಾನಂದಗೌಡ ಸಹ ಇದೇ ಮಾದರಿಯ ಹೇಳಿಕೆ ನೀಡಿದ್ದಾರೆ.