ಕುಮಾರಸ್ವಾಮಿ ಭೇಟಿ ಬಳಿಕ ರಾಮಲಿಂಗಾ ರೆಡ್ಡಿ ಹೇಳಿದ್ದೇನು?
ಬೆಂಗಳೂರು, ಜುಲೈ 25 : "ಮಧ್ಯಂತರ ಚುನಾವಣೆ ಬಗ್ಗೆ ನನಗೆ ಗೊತ್ತಿಲ್ಲ. ಇದು ಕಾರ್ಪೋರೇಷನ್ ಎಲೆಕ್ಷನ್ ಅಲ್ಲ ರಾಜ್ಯ ರಾಜಕೀಯ" ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಗುರುವಾರ ಹಂಗಾಮಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮಾಜಿ ಸಚಿವ, ಬಿ. ಟಿ. ಎಂ. ಕ್ಷೇತ್ರದ ಶಾಸಕ ರಾಮಲಿಂಗಾ ರೆಡ್ಡಿ ಭೇಟಿ ಮಾಡಿದರು. ವಿಶ್ವಾಸಮತಯಾಚನೆ ಮುಗಿದ ಬಳಿಕ ನಡೆದ ಈ ಭೇಟಿ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.
ಬೆಂಗಳೂರಿ ಲಕ್ಕಸಂದ್ರದಲ್ಲಿರುವ ರಾಮಲಿಂಗಾ ರೆಡ್ಡಿ ನಿವಾಸಕ್ಕೆ ಎಚ್. ಡಿ. ಕುಮಾರಸ್ವಾಮಿ ಭೇಟಿ ನೀಡಿದರು. ಅಲ್ಲಿಯೇ ಉಪಹಾರ ಸೇವಿಸಿದರು. ಜಯನಗರ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಾಧ್ಯಮಗಳ ಜೊತೆ ಮಾತನಾಡಿದ ರಾಮಲಿಂಗಾ ರೆಡ್ಡಿ, "ರಾಜಕೀಯದ್ದು ಯಾವ ಮಾತು ಇಲ್ಲ.
ನಾನು ಕಾಂಗ್ರೆಸ್ ಅವರು ಜೆಡಿಎಸ್. ರಾಜೀನಾಮೆ ನೀಡಿದ್ದು ಪಕ್ಷದ ಆಂತರಿಕ ವಿಚಾರ.
ನನಗೆ ದೇವೇಗೌಡರು, ಕಾಂಗ್ರೆಸ್ ನಾಯಕರು ರಾಜೀನಾಮೆ ವಾಪಸ್ ಪಡೆಯಲು ಹೇಳಿದ್ದರು.
ಅದಕ್ಕೆ ಅಭಿನಂದನೆ ಸಲ್ಲಿಸಲು ಬಂದಿದ್ದರು" ಎಂದು ಸ್ಪಷ್ಟಪಡಿಸಿದರು.

ರೆಬಲ್ ಶಾಸಕರಿಗೆ ಕರೆ ಮಾಡಿದೆ
"ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬೆಂಗಳೂರಿನ ಮೂರು ಜನ ಶಾಸಕರಿಗೆ ಕರೆ ಮಾಡಲು ನಾನು ಪ್ರಯತ್ನ ಮಾಡಿದೆ. ಒಂದು ವಾರ ಅವರಿಗೆ ಕಾಲ್ ಮಾಡಲು ಪ್ರಯತ್ನ ಮಾಡಿದೆ. ಆದರೆ, ಅವರು ಕರೆಯನ್ನು ಸ್ವೀಕಾರ ಮಾಡಲಿಲ್ಲ, ನಾನು ಸುಮ್ಮನಾದೆ" ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು.

ಮಧ್ಯಂತರ ಚುನಾವಣೆ ಬಗ್ಗೆ ಗೊತ್ತಿಲ್ಲ
"ಕುಮಾರಸ್ವಾಮಿ ರಾಜಕೀಯ ಅಸ್ಥಿರತೆ ಶುರುವಾಗಿತ್ತೆ ಎಂದು ಅವರ ಅನುಭವದ ಮೂಲಕ ಹೇಳಿದ್ದಾರೆ. ಮಧ್ಯಂತರ ಚುನಾವಣೆ ಬಗ್ಗೆ ನನಗೆ ಗೊತ್ತಿಲ್ಲ. ಇದು ಕಾರ್ಪೋರೇಷನ್ ಎಲೆಕ್ಷನ್ ಅಲ್ಲ, ರಾಜ್ಯ ರಾಜಕೀಯ," ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

ಯಾವುದೇ ಸರ್ಕಾರ ಸ್ಥಿರವಾಗಿರಲ್ಲ
ಮಾಧ್ಯಮಗಳ ಜೊತೆ ಮಾತನಾಡಿದ ಎಚ್. ಡಿ. ಕುಮಾರಸ್ವಾಮಿ, "ರಾಜ್ಯದ ರಾಜಕೀಯ ಪರಿಸ್ಥಿತಿ ಹೇಗಿದೆ ಎಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ. ಯಾರೇ ಸರ್ಕಾರ ರಚನೆ ಮಾಡಿದರೂ ಸ್ಥಿರ ಸರ್ಕಾರ ನೀಡುವುದು ಕಷ್ಟ. ಉಪ ಚುನಾವಣೆಗಳನ್ನು ಬಿಜೆಪಿ ನಾಯಕರು ಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆ. ನೀವು ಚುನಾವಣೆ ಮಾಡುತ್ತೀರೋ ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸುತ್ತೀರೋ?" ಎಂದು ಪ್ರಶ್ನಿಸಿದರು.

ಮೈತ್ರಿ ಮುಂದುವರೆಯುವ ಬಗ್ಗೆ ಗೊತ್ತಿಲ್ಲ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುರಿಕೆ ಬಗ್ಗೆ ಮಾತನಾಡಿದ ರಾಮಲಿಂಗಾ ರೆಡ್ಡಿ, "ಮೈತ್ರಿ ಮುಂದುವರೆಯುವುದರ ಬಗ್ಗೆ ನಾನು ಏನ್ ಹೇಳುವುದಕ್ಕೆ ಆಗುತ್ತದೆ. ನಾನು ಯಾರು ಅದನ್ನು ತೀರ್ಮಾನಿಸುವುದಕ್ಕೆ. ನಮ್ಮ ಪಕ್ಷದ ಅಧ್ಯಕ್ಷರು ಹೇಳಬೇಕು ಅಥವ ಹೈಕಮಾಂಡ್ ಹೇಳಬೇಕು" ಎಂದು ಸ್ಪಷ್ಟಪಡಿಸಿದರು.












Click it and Unblock the Notifications