40 ಶಾಸಕರು ರಾಜೀನಾಮೆ ಕೊಟ್ಟರೂ ಸ್ವೀಕರಿಸಲು ಸಿದ್ಧ: ರಮೇಶ್ ಕುಮಾರ್
ಬೆಂಗಳೂರು, ಫೆಬ್ರವರಿ 07: "ನಾಲ್ಕಲ್ಲರೀ, ನಲವತ್ತು ಶಾಸಕರು ರಾಜೀನಾಮೆ ಕೊಟ್ಟರೂ ನಾನು ಸ್ವೀಕರಿಸುತ್ತೇನೆ" ಎಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯ ಕುರಿತು ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದ ಶ್ರೀನಿವಾಸಪುರದ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್, ''ನಾವು ಆತಂಕ ಪಡುವಂಥ ಬೆಳವಣಿಗೆಯೇನೂ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿಲ್ಲ. ರಾಜ್ಯದಲ್ಲಿ ಮಳೆಯಾಗಿಲ್ಲ, ನೀರಿನ ಸಮಸ್ಯೆ ಇದೆ. ಅದರ ಬಗ್ಗೆ ನಾವು ಯೋಚಿಸುತ್ತಿದ್ದೇವೆ" ಎಂದು ರಮೇಶ್ ಕುಮಾರ್ ಪತ್ರಕರ್ತರ ಪ್ರಶ್ನೆಗೆ ಜಾಣತನದ ಉತ್ತರ ನೀಡುತ್ತಿದ್ದರು.
ಈ ಸಂದರ್ಭದಲ್ಲಿ ಪತ್ರಕರ್ತರೊಬ್ಬರು, 'ಕಾಂಗ್ರಸ್ ನ ನಾಲ್ವರು ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ವದಂತಿ ಇದೆಯಲ್ಲ. ನಿಜವೇ?' ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ರಮೇಶ್ ಕುಮಾರ್, 'ನನಾಲ್ಕು ಶಾಸಕರಲ್ಲ, ನಲವತ್ತು ಶಾಸಕರು ರಾಜೀನಾಮೆ ನೀಡಲಿ ಬಿಡಿ. ಸ್ವೀಕರಿಸುತ್ತೇನೆ, ನನಗೇನು?' ಎಂದರು.

ಬುಧವಾರದಿಂದ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಹಲವು ಕಾಂಗ್ರೆಸ್ ಶಾಸಕರು ಗೈರಾಗಿದ್ದು, ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಕಮಲದ ಭೀತಿ ಮತ್ತೆ ಆವರಿಸಿದೆ.ಇಂದು ಸಹ ಅಧಿವೇಶನ ಮುಂದುವರಿದಿದ್ದು, ಈಗಾಗಲೇ ಬಿಜೆಪಿ ಶಾಸಕರು ಗದ್ದಲ ಎಬ್ಬಿಸಿ, ಅಧಿವೇಶನಕ್ಕೆ ಅಡ್ಡಿಯಾಗಿದ್ದಾರೆ. ಶುಕ್ರವಾರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬಜೆಟ್ ಮಂಡಿಸಲು ಅವಕಾಶ ನೀಡದಿರಲು ಬಿಜೆಪಿ ಯೋಜನೆ ರೂಪಿಸಿಕೊಂಡಿದೆ ಎಂಬ ಮಾತು ಕೇಳಿಬರುತ್ತಿದೆ.












Click it and Unblock the Notifications