ಗ್ರಹಣದ ದಿನ ತಟ್ಟೆಯ ಮೇಲೆ ಒನಕೆ ನಿಂತಿದ್ದು ಹೇಗೆ? ಇಲ್ಲಿದೆ ಕಾರಣ
Recommended Video
ಬೆಂಗಳೂರು, ಜನವರಿ 07: ಗ್ರಹಣದ ದಿನ ತಟ್ಟೆಯ ಮೇಲೆ ನೆಟ್ಟಗೆ ಒನಕೆ ನಿಂತಿರುವ ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದವು. ಆದರೆ ಅದಕ್ಕೆ ವೈಜ್ಞಾನಿಕ ಕಾರಣ ಇದೀಗ ಬಯಲಾಗಿದೆ.
ಗ್ರಹಣದ ದಿನ ಮಾತ್ರವಲ್ಲ ಗ್ರಹಣ ಇಲ್ಲದ ಸಾಮಾನ್ಯ ದಿನದಂದೂ ಸಹ ಒನಕೆ ನೆಟ್ಟಗೆ ನಿಲ್ಲುತ್ತದೆ. ಒನಕೆ ನಿಲ್ಲುವುದು ಸಾಮಾನ್ಯ ವಿಷಯವೇ ಹೊರತು ಅದೊಂದು ಪವಾಡವಲ್ಲ ಎಂದು ಖ್ಯಾತ ಪವಾಡ ಭಂಜಕ, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಹುಲಿಕಲ್ ನಟರಾಜ್ ನಿರೂಪಿಸಿದ್ದಾರೆ.
ಒನಕೆ ನೆಟ್ಟಗೆ ನಿಲ್ಲುವ ಕುರಿತು ಪ್ರಯೋಗವೊಂದನ್ನು ಮಾಡಿ ವಿಡಿಯೋ ಚಿತ್ರೀಕರಿಸಿ ಹರಿಬಿಟ್ಟಿರುವ ಅವರು, ಗ್ರಹಣ ಇಲ್ಲದ ದಿನ ಸಹ ಒನಕೆಯನ್ನು ತಟ್ಟೆಯ ಮೇಲೆ ನೆಟ್ಟಗೆ ನಿಲ್ಲಿಸಿದ್ದಾರೆ. ಜೊತೆಗೆ ಹಾಗೆ ಒನಕೆ ನಿಲ್ಲಲು ಕಾರಣವನ್ನೂ ಬಹಿರಂಗ ಪಡಿಸಿದ್ದಾರೆ.
'ಒನಕೆ ತಟ್ಟೆಯ ಮೇಲೆ ಅಥವಾ ನೆಲದಲ್ಲಿ ನೆಟ್ಟಗೆ ನಿಲ್ಲಲು ಗ್ರಹಣ ಕಾರಣವಲ್ಲ ಬದಲಿಗೆ ಅದರ ರಚನೆ ಮತ್ತು ವಾಯುವಿನ ಒತ್ತಡ ಕಾರಣ' ಎಂದು ಹುಲಿಕಲ್ ನಟರಾಜ್ ಹೇಳಿದ್ದಾರೆ.

ಗ್ರಹಣ ಇಲ್ಲದ ದಿನವೂ ಒನಕೆ ನಿಲ್ಲುತ್ತದೆ
ತಟ್ಟೆಯಲ್ಲಿ ನೀರು ಹಾಕಿ ಅಲ್ಲಿ ಒನಕೆಯನ್ನಿಟ್ಟಾಗ ರೇಚಕ ಗುಣದಿಂದ ಹಾಗೂ ಬಾಹ್ಯ ವಾಯುವಿನ ಒತ್ತಡದಿಂದ ಒನಕೆ ನೆಟ್ಟಗೆ ನಿಲ್ಲುತ್ತದೆ ಎಂದಿದ್ದಾರೆ ನಟರಾಜ್, ಅವರ ಮಾತಿಗೆ ಪೂರಕವಾಗಿ ಒನಕೆಯನ್ನು ನೆಲದ ಮೇಲೆ, ಖಾಲಿ ತಟ್ಟೆಯಲ್ಲಿ ಹಾಗೂ ತಟ್ಟೆಯಲ್ಲಿ ನೀರು ಸುರಿದು ಅದರ ಮೇಲೆ ನಿಲ್ಲಿಸಿ ತೋರಿಸಿದ್ದಾರೆ. ಈ ವಿಡಿಯೋವನ್ನು ನಟರಾಜ್ ಅವರು ಚಿತ್ರೀಕರಿಸಿರುವುದು ಡಿಸೆಂಬರ್ 30 ರಂದು, ಅಂದು ಯಾವುದೇ ಗ್ರಹಣವಿರಲಿಲ್ಲ.

ಎಕ್ಕದ ಎಲೆಯ ಮೂಢನಂಬಿಕೆ ಹಿಂದಿನ ಸತ್ಯ
ಇದೊಂದೆ ಅಲ್ಲದೆ ಎಕ್ಕದ ಎಲೆಯ ಮೂಡನಂಭಿಕೆಯನ್ನೂ ಭಂಜನೆ ಮಾಡಿರುವ ಅವರು, ಲೋಟದಲ್ಲಿ ನೀರು ಹಾಕಿ ಅದನ್ನು ಎಕ್ಕದ ಎಲೆಯಿಂದ ಮುಚ್ಚಿ ಲೋಟವನ್ನು ತಲೆಕೆಳಗು ಮಾಡಿ ಹಿಡಿದಾಗ ನೀರು ಚೆಲ್ಲದೆ ಹಾಗೆ ನಿಲ್ಲುವ ಪ್ರಯೋಗವನ್ನೂ ಮಾಡಿದ್ದಾರೆ. ಅದಕ್ಕೂ ಸಹ ಗಾಳಿಯ ಬಾಹ್ಯ ಒತ್ತಡವೇ ಕಾರಣ ಎಂದು ಹುಲಿಕಲ್ ನಟರಾಜ್ ನಿರೂಪಿಸಿದ್ದಾರೆ.

ಸಗಣಿ ನೀರು ಹಾಕಿದ ತಟ್ಟೆಯನ್ನು ಹಿಡಿದಿಡುತ್ತೇ ಚಂಬು
ಸಗಣಿ ನೀರು ಹಾಕಿದ ತಟ್ಟೆಯ ಮೇಲೆ ಬೋರಲು ಹಾಕಿದ ಚೆಂಬು ತಟ್ಟೆಯನ್ನು ಬಿಡದೆ ಹಿಡಿದುಕೊಳ್ಳುವ ಪ್ರಯೋಗವನ್ನೂ ನಟರಾಜ್ ಮಾಡಿದ್ದಾರೆ. ಇದನ್ನೂ ಸಹ ಗ್ರಹಣದ ದಿನ ಕೆಲವು ಕಡೆಗಳಲ್ಲಿ ಮಾಡುತ್ತಾರೆ. ಇದೂ ಸಹ ಗ್ರಹಣದ ದಿನವಷ್ಟೇ ಸಾಧ್ಯವೆಂದು ನಂಬುತ್ತಾರೆ. ಆದರೆ ಇದು ಸುಳ್ಳು ಇದರ ಹಿಂದೆ ವಿಜ್ಞಾನವಿದೆ, ಗ್ರಹಣಕ್ಕೂ ಇದಕ್ಕೂ ಸಂಬಂಧವಿಲ್ಲವೆಂದು ಹುಲಿಕಲ್ ನಟರಾಜ್ ಹೇಳುತ್ತಾರೆ.

ಚಂಬಿನ ಒಳಗೆ ನಿರ್ವಾತ ಸೃಷ್ಟಿಯಾಗುತ್ತದೆ
ಸಗಣಿ ನೀರು ತುಂಬಿದ ತಟ್ಟೆಯ ಒಳಗೆ ಚೆಂಬು ಬೋರಲು ಹಾಕಿದಾಗ ಚೆಂಬಿನ ಒಳಗೆ ನಿರ್ವಾತ ಸೃಷ್ಟಿಯಾಗುತ್ತದೆ. ಹಾಗಾಗಿ ಅದು ತಟ್ಟೆಯನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತದೆ. ಚೆಂಬಿನ ಒಳಗೆ ಸ್ವಲ್ಪ ಗಾಳಿ ಹೋದ ಕೂಡಲೇ ಚೆಂಬು ತಟ್ಟೆಯನ್ನು ಬಿಡುತ್ತದೆ ಎಂದು ಪ್ರಯೋಗದ ಮೂಲಕ ನಟರಾಜ್ ತೋರಿಸಿಕೊಟ್ಟಿದ್ದಾರೆ.











Click it and Unblock the Notifications