ಸಿಎಂ ಜನತಾದರ್ಶನಕ್ಕೆ ಜನವೋ ಜನ
ಬೆಂಗಳೂರು, ಏ. 28 : ಚುನಾವಣೆ, ವಿಶ್ರಾಂತಿ ಮುಗಿದ ಬಳಿಕ ಸಿಎಂ ಸಿದ್ದರಾಮಯ್ಯ ಸೋಮವಾರ ಜನತಾ ದರ್ಶನ ನಡೆಸಿದರು. ಸಿಎಂ ಗೃಹ ಕಚೇರಿ ಕೃಷ್ಣಾ ನಾಡಿನ ದೊರೆಗೆ ಮನವಿ ಸಲ್ಲಿಸಲು ಬಂದವರಿಂದ ತುಂಬಿ ಹೋಗಿತ್ತು. ಎಲ್ಲರ ಮನವಿಯನ್ನು ತಾಳ್ಮೆಯಿಂದಲೇ ಆಲಿಸಿದ ಸಿಎಂ, ಮೈಸೂರಿನಿಂದ ಬಂದವರಿಗೆ ಚುಣಾವಣೆಯಲ್ಲಿ ಸರಿಯಾಗಿ ಕೆಲಸ ಮಾಡಿದ್ದೀರಾ? ಎಂದು ತಮ್ಮ ಸ್ಟೈಲ್ ನಲ್ಲಿಯೇ ಪ್ರಶ್ನಿಸಿದರು.
ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸಾರ್ವಜನಿಕರಿಗೆ ಸಿಎಂ ಲಭ್ಯವಾಗಿರಲಿಲ್ಲ. ನೀತಿ ಸಂಹಿತೆ ಕಾರಣಕ್ಕೆ ಜನತಾದರ್ಶನ ರದ್ದುಗೊಳಿಸಲಾಗಿತ್ತು. ಒಂದು ವಾರಗಳ ಕಾಲ ಪ್ರಕೃತಿ ಚಿಕಿತ್ಸಾ ಶಿಬಿರದಲ್ಲಿ ವಿಶ್ರಾಂತಿ ಪಡೆದ ಸಿಎಂ ಸೋಮವಾರ ಜನತಾ ದರ್ಶನ ನಡೆಸಿದರು.

ಬೆಳಗ್ಗೆ ಮೊದಲು ಶಾಸಕರು, ಸಚಿವರೊಂದಿಗೆ ಮಾತುಕತೆ ನಡೆಸಿದ ಸಿಎಂ ಸಿದ್ದರಾಮಯ್ಯ ನಂತರ ಜನತಾ ದರ್ಶನಕ್ಕೆ ಆಗಮಿಸಿದರು. ಸುಮಾರು 300 ಜನರು ಸಿಎಂಗೆ ತಮ್ಮ ಮನವಿಯನ್ನು ಸಲ್ಲಿಸಲು ಕಾದು ಕುಳಿತಿದ್ದರು. ಎಲ್ಲರೊಂದಿಗೆ ತಾಳ್ಮೆಯಿಂದ ಮಾತನಾಡಿ ಸಿಎಂ ಎಲ್ಲರ ಅಹವಾಲು ಪಡೆದು ವಿಧಾನಸೌಧದತ್ತ ತೆರಳಿದರು. [ವಿಶ್ರಾಂತಿ ಮುಗಿಸಿ ಮರಳಿದ ಸಿಎಂ]
ಯಾವ ಯೋಜನೆ ಕೈಬಿಡುವುದಿಲ್ಲ : ಜನತಾ ದರ್ಶನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸುತ್ತದೆ. ಯಾವ ಯೋಜನೆಯನ್ನು ಕೈ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರಿ ಕಾಲೇಜುಗಳ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ ಸೇರಿದಂತೆ ಯಾವ ಯೋಜನೆಯನ್ನು ಕೈಬಿಡುವುದಿಲ್ಲ. ಆರ್ಥಿಕ ಕೊರತೆ ಹಿನ್ನೆಲೆಯಲ್ಲಿ ಈ ವರ್ಷ ಲ್ಯಾಪ್ ಟಾಪ್ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದರು. [ಕಾಂಗ್ರೆಸ್ ಪ್ರಣಾಳಿಕೆಯಲ್ಲೇನಿದೆ?]
ನಮ್ಮ ಸರ್ಕಾರಕ್ಕೆ ನಾಲ್ಕು ವರ್ಷಗಳ ಕಾಲಾವಧಿ ಇದೆ. ಆ ವೇಳೆಗೆ ಹಂತ ಹಂತವಾಗಿ ಎಲ್ಲ ಯೋಜನೆಗಳನ್ನು ಈಡೇರಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಲ್ಯಾಪ್ ಟಾಪ್ ಹಂಚಿಕೆ ಯೋಜನೆಗೆ ಸುಮಾರು 200 ಕೋಟಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಆರ್ಥಿಕ ಸ್ಥಿತಿಯ ಹಿನ್ನಲೆಯಲ್ಲಿ ಸದ್ಯಕ್ಕೆ ಈ ಯೋಜನೆ ಜಾರಿ ಮಾಡುವುದು ಬೇಡ ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.
ಶಿಫಾರಸ್ಸು ಪತ್ರ ತನ್ನಿ : ಜನತಾ ದರ್ಶನದಲ್ಲಿ ಹಲವಾರು ಜನರು ವೈದ್ಯಕೀಯ ಚಿಕಿತ್ಸಾ ವೆಚ್ಚ ನೀಡುವಂತೆ ಮನವಿ ಸಲ್ಲಿಸಿದಾಗ ಚಿಕಿತ್ಸಾ ವೆಚ್ಚದ ನಿಖರ ಮಾಹಿತಿ ಬಗ್ಗೆ ವೈದ್ಯರಿಂದ ಶಿಫಾರಸ್ಸು ಪತ್ರ ತರುವಂತೆ ಸಿಎಂ ಸಲಹೆ ನೀಡಿದರು. ಮೈಸೂರಿನಿಂದ ಆಗಮಿಸಿದ್ದ ಕೆಲವು ಜನರು ಮನವಿ ನೀಡಿದಾಗ ಚುನಾವಣೆಯಲ್ಲಿ ಸರಿಯಾಗಿ ಕೆಲಸ ಮಾಡಿದ್ರಾ? ಎಂದು ಕೇಳಿದರು.












Click it and Unblock the Notifications