ಬಿಬಿಎಂಪಿಯಡಿ ವಿಸರ್ಜನೆಗೊಂಡ ಗಣೇಶ ಮೂರ್ತಿಗಳೆಷ್ಟು: ಇಲ್ಲಿದೆ ಮಾಹಿತಿ?
ಬೆಂಗಳೂರು, ಸೆ.01: ಬಿಬಿಎಂಪಿ ವ್ಯಾಪ್ತಿಯ ಕಲ್ಯಾಣಿ, ಮೊಬೈಲ್ ಟ್ಯಾಂಕರ್ ಸೇರಿದಂತೆ ತಾತ್ಕಾಲಿಕ ನೀರಿನ ತೊಟ್ಟಿಗಳಲ್ಲಿ ಬುಧವಾರ (ಆಗಸ್ಟ್.31) ಒಂದೇ ದಿನ ಒಟ್ಟು 1,59,980 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷ ಬೆಂಗಳೂರಿನ ಜನರು ಕೋವಿಡ್ ಭೀತಿಯಿಂದ ಮುಕ್ತರಾಗಿ ಸಂಭ್ರಮ, ಸಡಗರದಿಂದ ಗಣೇಶೋತ್ಸವ ಆಚರಿಸಿದ್ದಾರೆ. ಅದರಲ್ಲೂ ಕಳೆದ ಎರಡು ಮೂರು ವರ್ಷದಿಂದ ಸರ್ಕಾರ ಕೈಗೊಂಡ ಪರಿಸರ ಮಾಲಿನ್ಯ ನಿಯಂತ್ರಣ ಕ್ರಮಗಳಿಂದಾಗಿ ಈ ವರ್ಷ ಮಣ್ಣಿನ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹೆಚ್ಚಾಗಿರುವುದು ಕಂಡು ಬಂದಿದೆ.
ನಿರಂತರ ಮಳೆಗೆ ಬಡಾವಣೆಗಳು ಮುಳುಗಡೆ: ಜೀವನ ಅಸ್ತವ್ಯಸ್ತ
ಜನರು ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಿ ಮೆರವಣಿಗೆ ನಡೆಸಿ ಬಿಬಿಎಂಪಿ ನಿಗದಿಪಡಿಸಿದ್ದ ಕಲ್ಯಾಣಿ, ಮೊಬೈಲ್ ಟ್ಯಾಂಕರ್ ಸೇರಿದಂತೆ ತಾತ್ಕಾಲಿಕ ನೀರಿನ ತೊಟ್ಟಿಗಳಲ್ಲಿ ಮೂರ್ತಿಗಳನ್ನು ವಿಸರ್ಜನೆ ಮಾಡಿದ್ದಾರೆ. ಆಗಸ್ಟ್.31ರಂದು ಒಂದೇ ದಿನ ಗಣೇಶನನ್ನು ಪ್ರತಿಷ್ಠಾಪಿಸಿ ವಿಸರ್ಜನೆಗೊಂಡ ಒಂದೂವರೆ ಲಕ್ಷಕ್ಕೂ ಅಧಿಕ ಮೂರ್ತಿಗಳ ವಿವರವನ್ನು ಬಿಬಿಎಂಪಿ ತಿಳಿಸಿದೆ. ಇದರಲ್ಲಿ ಮಣ್ಣಿನ ಗಣೇಶ ಮೂರ್ತಿಗಳು ಎಷ್ಟು? ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶಗಳೆಷ್ಟು ಎಂಬ ಎಂಟು ವಲಯಗಳ ವಲಯವಾರು ಸಂಪೂರ್ಣ ವಿವರ ಹೀಗಿದೆ.
ಪಶ್ಚಿಮ ವಲಯದಲ್ಲಿ 34,471 ಗಣೇಶ ವಿಸರ್ಜನೆ
ಪಶ್ಚಿಮ ವಲಯದಲ್ಲಿ ಬುಧವಾರ ಒಂದೇ ದಿನ ಒಟ್ಟು 34,471 ಮಣ್ಣಿನ ಗಣೇಶ ಮೂರ್ತಿಗಳು ವಿಸರ್ಜನೆಗೊಂಡರೆ, ಕೇವಲ 306 ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿಗಳು ವಿಸರ್ಜನೆಗೊಂಡಿವೆ. ಇದರಿಂದ ವರ್ಷದಿಂದ ವರ್ಷಕ್ಕೆ ಪರಿಸರಕ್ಕೆ ಪೂರಕವಾದ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳುತ್ತಿವೆ ಎಂದು ತಿಳಿದು ಬಂದಿದೆ.
ಬೆಂಗಳೂರಲ್ಲಿ ಮಳೆ ಅವಾಂತರ; ಈ ನಂಬರ್ ನೋಟ್ ಮಾಡಿಕೊಳ್ಳಿ
ಇನ್ನು ಬಿಬಿಎಂಪಿ ದಕ್ಷಿಣ ವಲಯದಲ್ಲಿ 68,521 ಮಣ್ಣಿನ ಗಣೇಶ ಮೂರ್ತಿಗಳು ಹಾಗೂ 11,402 ಪಿಓಪಿ ಗಣೇಶ ಮೂರ್ತಿಗಳು ವಿಸರ್ಜನೆಗೊಂಡಿವೆ. ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ 1,382 ಮಣ್ಣಿನ ಗಣೇಶ ಮೂರ್ತಿಗಳು ಹಾಗೂ 22 ಪಿಓಪಿ ಗಣೇಶನನ್ನು ವಿಸರ್ಜಿಸಲಾಗಿದೆ.
ಅದೇ ರೀತಿ ಪೂರ್ವ ವಲಯದಲ್ಲಿ 12,750 ಮಣ್ಣಿನ ಗಣೇಶ ಮೂರ್ತಿಗಳು ನೀರಲ್ಲಿ ಬಿಡಲಾಗಿದ್ದು, ಇಲ್ಲಿ ಕೇಲವ ಮಣ್ಣಿನ ಗಣೇಶನನ್ನು ಮಾತ್ರ ಪ್ರತಿಷ್ಠಾಪಿಸಲಾಗಿತ್ತು. ಒಂದೇ ಒಂದು ಪಿಓಪಿ ಗಣೇಶ ಮೂರ್ತಿ ಬುಧವಾರ ವಿಸರ್ಜಿಸಲಾಗಿಲ್ಲ. ಇದನ್ನು ನೋಡಿದರೆ ವರ್ಷದಿಂದ ವರ್ಷಕ್ಕೆ ಜನರಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಬಗ್ಗೆ ಜನರಲ್ಲಿ ಒಲವು ಹೆಚ್ಚಾಗುತ್ತಿದೆ. ಇದು ಹೀಗೆ ಮುಂದುವರಿದೆ ಮುಂದಿನ ದಿನಗಳಲ್ಲಿ ಬೆಂಗಳೂರು ಗಣೇಶೋತ್ಸವ ಇತರ ನಗರಗಳಿಗೆ ಮಾದರಿ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಸರ್ಜನೆಗೊಂಡ ಗಣೇಶ ಮೂರ್ತಿಗಳ ಮಣ್ಣಿನ ಮರುಬಳಕೆ, ಪಿಒಪಿ ಗಣೇಶ ಮೂರ್ತಿಗಳ ಸೂಕ್ತ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಬೆಂಗಳೂರಿನಾದ್ಯಂತ ಕೆಲವರು ಒಂದು ದಿನಕ್ಕೆ, ಐದು ದಿನ, ಏಳು, ಒಂಭತ್ತು ಮತ್ತು ಹನ್ನೋದು ಹೀಗೆ ಹಂತ ಹಂತವಾಗಿ ಗಣೇಶನನ್ನು ವಿಸರ್ಜಿಸುತ್ತಾರೆ. ಅದಕ್ಕು ಮುನ್ನ ಮೆರವಣಿಗೆಯಂತಹ ಕಾರ್ಯಕ್ರಮ ನಡೆಯುತ್ತವೆ. ಅವುಗಳಿಗೆ ಬಿಬಿಎಂಪಿ ಸೂಕ್ತ ಸೌಲಭ್ಯ ಒದಗಿಸಲಿದೆ. ಅಲ್ಲದೇ ಗಣೇಶೋತ್ಸವ ಸಂಪೂರ್ಣ ಮುಗಿಯುವವರೆಗೂ ಗಣೇಶನ ವಿಸರ್ಜನೆ, ನೀರಲ್ಲಿ ಬಿಟ್ಟ ಮೂರ್ತಿಗಳ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರ್ಆರ್ನಗರದಲ್ಲಿ ಅಧಿಕ ಮಣ್ಣಿನ ಗಣೇಶ ವಿಸರ್ಜನೆ
ರಾಜರಾಜೇಶ್ವರಿ ನಗರ ವಲಯದಲ್ಲಿ 14,479 ಮಣ್ಣಿನ ಗಣೇಶ ಮೂರ್ತಿ, 152 ಪಿಓಪಿ ಗಣೇಶ ಮೂರ್ತಿ, ಬೊಮ್ಮನಹಳ್ಳಿ ವಲಯದಲ್ಲಿ 6,136 ಮಣ್ಣಿನ ಗಣೇಶ ಮೂರ್ತಿ, 131 ಪಿಓಪಿ ಗಣೇಶ ಮೂರ್ತಿ, ಅಲ್ದೇ ಯಲಹಂಕ ವಲಯದಲ್ಲಿ 6,000ಮಣ್ಣಿನ ಗಣೇಶ, 73 ಪಿಓಪಿ ಗಣೇಶ ಮೂರ್ತಿ ಹಾಗೂ ಮಹದೇವಪುರ ವಲಯದಲ್ಲಿ 4,155 ಮಣ್ಣಿನ ಗಣೇಶ ಮೂರ್ತಿ ವಿಸರ್ಜಿಸಲಾಗಿದೆ. ಈ ಮಹದೇವಪುರದಲ್ಲೂ ಸಹ ಒಂದೇ ಒಂದು ಪಿಓಪಿ ಗಣೇಶ ಮೂರ್ತಿ ಸದ್ಯಕ್ಕೆ ವಿಸರ್ಜನೆಗೊಂಡಿಲ್ಲ.
ವಿಸರ್ಜನೆಗೊಂಡ ಗಣೇಶ ಮೂರ್ತಿಗಳ ಮಣ್ಣಿನ ಮರುಬಳಕೆ, ಪಿಒಪಿ ಗಣೇಶ ಮೂರ್ತಿಗಳ ಸೂಕ್ತ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.