ಈಗ ಶನಿ, ರಾಹು ಕಾಟ..ಮುಂದೆ ರಾಜ ಯೋಗ: ಹೇಗಿದೆ ನಟ ದರ್ಶನ್ ಭವಿಷ್ಯ?
ಬೆಂಗಳೂರು, ಜುಲೈ 04: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ನಟ ದರ್ಶನ್ ಜೈಲುಪಾಲಾಗಿದ್ದು, ಸದ್ಯ ಪರಪ್ಪನ ಅಗ್ರಹಾರದಲ್ಲಿ ಜೈಲಿವಾಸ ಅನುಭವಿಸುವಂತಾಗಿದೆ. ಇತ್ತ ಪತಿಯ ಬಿಡುಗಡೆಗೆ ಹೋರಾಡುತ್ತಿದ್ದರುವ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬೆಂಗಳೂರಿನ ಶಕ್ತಿ ದೇವತೆಯ ಮೊರೆ ಹೋಗಿದ್ದಾರೆ. ವಿಜಯಲಕ್ಷ್ಮಿ ನಿನ್ನೆ ಶನಿವಾರ ಬಂಡೆ ಮಾಂಕಾಳಮ್ಮ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ವಿಜಯಲಕ್ಷ್ಮಿ ಬಂಡೆ ಮಾಂಕಾಳಮ್ಮ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದ ಬೆನ್ನಲ್ಲೇ ದರ್ಶನ್ ಭವಿಷ್ಯದ ಬಗ್ಗೆ ಬಂಡೆ ಮಹಾಕಾಳಿ ದೇವಾಲಯದ ಪ್ರಧಾನ ಅರ್ಚಕರು ಭವಿಷ್ಯ ನುಡಿದಿದ್ದಾರೆ ಎಂದು ತಿಳಿದು ಬಂದಿದೆ.

ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ಗೆ ಶನಿ, ರಾಹು ಕಾಟವಿದೆ ಎಂದು ಬಂಡೆ ಮಹಾಕಾಳಿ ದೇವಾಲಯದ ಪ್ರಧಾನ ಅರ್ಚಕರು ಜಾತಕ ತಿಳಿಸಿರುವ ಬಗ್ಗೆ ನ್ಯೂಸ್ಫಸ್ಟ್ ವೆಬ್ನಲ್ಲಿ ವರದಿ ಮಾಡಲಾಗಿದೆ.
ದರ್ಶನ್ ಅವರಿಗೆ ಸದ್ಯ ಶನಿ ಕಾಟವಿದೆ. ಶ್ರವಣ ನಕ್ಷತ್ರ, ಮಕರ ರಾಶಿಗೆ ರಾಹು-ಶನಿಯ ಒಂದೇ ಬಾರಿಗೆ ಕಾಟ ಕೊಡುತ್ತಿದ್ದಾರೆ. 2025ರ ನವೆಂಬರ್ ನಂತರ ಅವರಿಗೆ ರಾಜಯೋಗ ಲಭಿಸುತ್ತದೆ. ಫೆಬ್ರವರಿಯಲ್ಲೇ ದರ್ಶನ್ ಅಣ್ಣನಿಗೆ ಈ ಬಗ್ಗೆ ಪೂರ್ಣ ಮಾಹಿತಿ ತಿಳಿಸಿದ್ದೆ. ಗಂಡಾಂತರ ಇದೆ ಅಂಥ ಹೇಳಿದ್ದೆ ಎಂದು ದರ್ಶನ್ ಆಪ್ತ ಸ್ನೇಹಿತ ಪ್ರಧಾನ ಅರ್ಚಕ ಹೇಳಿದ್ದಾರೆ ಎನ್ನಲಾಗಿದೆ.

ದರ್ಶನ್ ಅವರದ್ದು ಶ್ರವಣ ನಕ್ಷತ್ರ, ಮಕರ ರಾಶಿಯಾಗಿದೆ. ಸದ್ಯ ಈ ರಾಶಿಗೆ ಈಗ ರಾಹು ಮತ್ತು ಶನಿ ಕಾಟ ಇದೆ. ಪ್ರತಿವಾರ ಎಳ್ಳಿನ ದೀಪ ಹಚ್ಚಲು ಅವರಿಗೆ ಹೇಳಿದ್ದೆ. ನಾನು ಹೇಳಿದ್ದನ್ನು ಅವರು 2 ವಾರ ಮಾತ್ರ ಮಾಡಿ ಆ ನಂತರ ಸುಮ್ಮನಾಗಿಬಿಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಹೆಸರಿಗೆ ಚ್ಯುತಿ ಬರುವ, ಆಸ್ಪತ್ರೆ ಸೇರುವ ಸಾಧ್ಯತೆಗಳು ಹೆಚ್ಚಿದೆ ಹೀಗಾಗಿ ಎಚ್ಚರಿಕೆಯಿಂದ ಇರಬೇಕು ಎಂದು ಬಂಡೆ ಮಹಾಕಾಳಿ ದೇವಾಲಯದ ಪ್ರಧಾನ ಅರ್ಚಕರು ಈ ಹಿಂದೆಯೇ ದರ್ಶನ್ಗೆ ತಿಳಿಸಿದ್ದರು ಎನ್ನಲಾಗಿದೆ.
ಇನ್ನು ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗುವ ಎರಡು ದಿನದ ಮೊದಲು ದರ್ಶನ್ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದು, ಈ ವೇಳೆ ಶಕ್ತಿ ದೇವತೆಯ ಮುಂದೆ ದೃಷ್ಟಿ ತೆಗೆಸಿ ತಡೆ ಒಡೆಸಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಇದೀಗ ಪತಿ ದರ್ಶನ್ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮಿ ಮತ್ತೆ ಈ ಶಕ್ತಿ ದೇವತೆ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.












Click it and Unblock the Notifications