ಬೆಂಗಳೂರಿನ ಉದ್ಯೋಗಿಗಳಿಗೆ ಸರ್ಕಾರದಿಂದ ಭರ್ಜರಿ ಕೊಡುಗೆ
ದಿನದ 12-13 ಗಂಟೆಗಳನ್ನು ಕಚೇರಿಯಲ್ಲಿ ಮತ್ತು ಕಚೇರಿಗೆ ಹೋಗಿ ಬರಲು ಕಳೆಯುತ್ತಿರುವ ಉದ್ಯೋಗಿಗಳ ಪಾಲಿಗೆ ಆಶಾದಾಯಕವಾದ ಸುದ್ದಿ ಹೊರಬೀಳುವ ಸಾಧ್ಯತೆಯಿದೆ.
ನಗರದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಬಸ್ ಮೂಲಕ ಕೆಲಸಕ್ಕೆ ಹೋಗುವ ಉದ್ಯೋಗಿಗಳು ವಾಹನ ದಟ್ಟಣೆಯಿಂದ ಹೈರಾಣವಾಗಿತ್ತಿರುವುದು ತಡವಾದರೂ ಸರಕಾರದ ಗಮನಕ್ಕೆ ಬಂದಿದೆ.
ಮುಖ್ಯಮಂತ್ರಿಗಳು ಹೋದಲೆಲ್ಲಾ ನಿದ್ದೆ ಮಾಡುತ್ತಾರೆ, ಅವರ ಸರಕಾರವೂ ನಿದ್ದೆಯಿಂದ ಎದ್ದಿಲ್ಲ ಎನ್ನುವ ವಿರೋಧ ಪಕ್ಷಗಳ ಟೀಕೆಗೆ, ಸರಕಾರ ಈಗ ಐತಿಹಾಸಿಕ ನಿರ್ಧಾರ ತೆಗೆದುಕೊಂಡು ತಿರುಗೇಟು ನೀಡಲು ಮುಂದಾಗಿದೆ ಎನ್ನುವ ಖಚಿತ ಮಾಹಿತಿ ಲಭ್ಯವಾಗಿದೆ.
ಸರಕಾರೇತರ ಕಂಪೆನಿಯ ನೌಕರರ ಹಿತಾದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು, ಖಾಸಗಿ ಸಂಸ್ಥೆಗಳಲ್ಲಿ ಈಗಿರುವ 'ವರ್ಕ್ ಫ್ರಮ್ ಹೋಮ್' ವ್ಯವಸ್ಥೆಯ ಜೊತೆಗೆ ಕಾರ್ಮಿಕ ಸ್ನೇಹಿ 'ವರ್ಕ್ ಫ್ರಮ್ ಬಿಎಂಟಿಸಿ ಬಸ್'ಎನ್ನುವ ಸುಧಾರಿತ ಪದ್ದತಿಯನ್ನು ಜಾರಿಗೆ ತರಲು ಸರಕಾರ ಗಂಭೀರ ಚಿಂತನೆ ನಡೆಸಿದೆ.

ಕಾರ್ಮಿಕ, ಸಾರಿಗೆ ಮತ್ತು ಮಾನವ ಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಮತ್ತು ಸಚಿವರ ಜೊತೆ ಮುಖ್ಯಮಂತ್ರಿಗಳು ಈ ಸಂಬಂಧ ಉನ್ನತ ಮಟ್ಟದ ಮಾತುಕತೆ ನಡೆಸಿದ್ದಾರೆ. ಕಾರ್ಮಿಕ ಇಲಾಖೆ ಸಿದ್ದಪಡಿಸಿರುವ 'ವರ್ಕ್ ಫ್ರಮ್ ಬಿಎಂಟಿಸಿ ಬಸ್' ಪದ್ದತಿಯ ರೂಪುರೇಷೆಗಳ ಮೇಲೆ ಸಿಎಂ ಕಣ್ಣಾಡಿಸಿದ್ದಾರೆ ಎನ್ನಲಾಗುತ್ತಿದೆ.
ಎಲ್ಲೂ ಇಲ್ಲದ ಈ ಕಾರ್ಮಿಕ ಸ್ನೇಹಿ ಸೌಲಭ್ಯವನ್ನು ಆದಷ್ಟು ಬೇಗ ಅಂದರೆ ಮುಂಬರುವ ಬಿಬಿಎಂಪಿ ಚುನಾವಣೆಗೆ ಮುನ್ನ ಜಾರಿಗೆ ತರಲು ಸಿಎಂ ಉತ್ಸುಕರಾಗಿದ್ದಾರೆಂದು, ಹೆಸರು ಹೇಳಲು ಇಚ್ಚಿಸದ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ಪ್ರಾಯೋಗಿಕವಾಗಿ ಈ ಪದ್ದತಿಯನ್ನು ಬೆಂಗಳೂರಿನ ಪೀಣ್ಯ, ಐಟಿಪಿಎಲ್, ಹೊಸೂರು ರಸ್ತೆ, ಬಿಡದಿ ಭಾಗದಲ್ಲಿರುವ ಖಾಸಗಿ ಸಂಸ್ಥೆಗಳಲ್ಲಿ ಜಾರಿಗೆ ತರಲು ಸರಕಾರ ನಿರ್ಧರಿಸಿದೆ.
ಈ ಭಾಗಕ್ಕೆ ಕೆಲಸಕ್ಕೆ ಹೋಗಿ ಬರಲು ನೌಕರರು ದಿನದ ನಾಲ್ಕೈದು ಗಂಟೆ ವ್ಯಯಿಸುತ್ತಿರುವುದರಿಂದ ಈ ಸಮಯವನ್ನು 'ವರ್ಕ್ ಫ್ರಮ್ ಬಿಎಂಟಿಸಿ ಬಸ್' ಪದ್ದತಿ ಮೂಲಕ ಸದುಯುಪಯೋಗ ಪಡೆದುಕೊಳ್ಳಲು ಸಹಾಯಕವಾಗಲಿದೆ ಎನ್ನುವುದು ಸರಕಾರದ ದೂರದೃಷ್ಟಿ.
ನೌಕರರಿಗೆ ಉಪಯೋಗವಾಗುವ ಯಾವುದೇ ಸೌಲಭ್ಯಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ ಎಂದು ಈ ಭಾಗದ ಬಹುಪಾಲು ಸಂಸ್ಥೆಗಳು ಈಗಾಗಲೇ ಸ್ಪಷ್ಟ ಪಡಿಸಿದಿರುವುದರಿಂದ ಈ ಹೊಸ ಪದ್ದತಿಯ ಚಾಲನೆಗೆ ದಿನಗಣನೆ ಆರಂಭವಾಗಿದೆ.
ಕಾರ್ಮಿಕ ಇಲಾಖೆ ಸಿದ್ದಪಡಿಸಿದ ರೂಪುರೇಷೆಯ ಪ್ರಮುಖಾಂಶಗಳು ಇಂತಿವೆ:

> ಈ ಸೌಲಭ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಲು ಕಾರ್ಮಿಕ ಇಲಾಖೆಯಿಂದ ಈ ಭಾಗದ ಸಂಸ್ಥೆಗಳಿಗೆ ಮೆಮೋ ಜಾರಿ
> ಕ್ಯಾಬಿನೆಟ್ ಅನುಮತಿಯ ನಂತರ ಮುಂದಿನ ಅಧಿವೇಶನದಲ್ಲಿ ಇದಕ್ಕೆ ಅನುಮೋದನೆ. ವಿರೋಧ ಪಕ್ಷಗಳಿಂದಲೂ ಬೆಂಬಲ ಸಾಧ್ಯತೆ.
> ಈ ಸೌಲಭ್ಯ ಪಡೆಯವ ಸಂಸ್ಥೆಗಳು, ಕಾರ್ಮಿಕ ಇಲಾಖೆಯಿಂದ ನೊಂದಣಿ ಮಾಡಿಸಬೇಕು ಮತ್ತು ಅದಕ್ಕಾಗಿ ವಿಶೇಷ ಕೌಂಟರ್. ಇಲಾಖೆಯಿಂದ ಈ ಸಂಸ್ಥೆಗಳ ಉದ್ಯೋಗಿಗಳಿಗೆ ಪ್ರಾಕ್ಶಿಮಿಟಿ ಐಡಿ ಕಾರ್ಡ್ ನೀಡಲು ನಿರ್ಧಾರ.
> ಈ ಭಾಗಕ್ಕೆ ತೆರಳುವ ಎಲ್ಲಾ ಬಿಎಂಟಿಸಿ ಬಸ್ಸುಗಳಲ್ಲಿ ವೈಫೈ ಅಳವಡಿಕೆ.
> ಈ ಸೌಲಭ್ಯ ಪಡೆಯಲು ಲ್ಯಾಪ್ ಟಾಪ್ ಅವಶ್ಯಕವಾಗಿರುವುದರಿಂದ ಲ್ಯಾಪ್ ಟಾಪ್ ಖರೀದಿಗೆ ಸರಕಾರದಿಂದ ಸಬ್ಸಿಡಿ (ಅವಶ್ಯಕತೆ ಬಿದ್ದಲ್ಲಿ ಮಾತ್ರ)
> ಉದ್ಯೋಗಿಗಳು ಬಸ್ ಹತ್ತಿದ ಕೂಡಲೇ ಲ್ಯಾಪ್ ಟಾಪ್ ಮೂಲಕ ಲಾಗ್ ಇನ್ ಮಾಡುವುದು ಕಡ್ದಾಯ ಮತ್ತು ಕಚೇರಿಯ ಆವರಣಕ್ಕೆ ತೆರಳಿದ ನಂತರ ಮತ್ತೆ ಲಾಗ್ ಇನ್ ಮಾಡುವುದು ಕೂಡಾ ಅಷ್ಟೇ ಕಡ್ಡಾಯ.
> ಈ ಪ್ರಾಸ್ತವಿಕ ಹೊಸ ಸೌಲಭ್ಯದಿಂದ ಮಾನವ ಸಂಪನ್ಮೂಲ ಇಲಾಖೆಗೆ ಹೆಚ್ಚುವರಿ ಕೆಲಸ ತಗುಲುವುದರಿಂದ, ಸಂಸ್ಥೆಗಳು ಬಯಸಿದ್ದಲ್ಲಿ ಹೊಸ ಉದ್ಯೋಗಿಗಳನ್ನು ನೇಮಿಸಲು ಆಗುವ ಹೆಚ್ಚುವರಿ ಖರ್ಚಿಗೆ ಅನುದಾನ ನೀಡಲು ಸರಕಾರ ಬದ್ದ.
> ಬಿಎಂಟಿಸಿ ಬಸ್ಸಿಗಳಲ್ಲಿ ಕಳ್ಳತನ ಹೆಚ್ಚುತ್ತಿರುವುದರಿಂದ ಲ್ಯಾಪ್ ಟಾಪ್ ಕಳವುಗೆ ಸರಕಾರದಿಂದಲೇ 50 ಸಾವಿರದವರೆಗೆ ವಿಮೆ.
> ಅಡಿಗಾಸ್ ಹೋಟೆಲ್ ಜೊತೆ ಒಪ್ಪಂದ: ಬಸ್ಸಿನಲ್ಲಿ ಕಾಫೀ, ಟೀ, ಸ್ನ್ಯಾಕ್ಸಿಗೆ ವ್ಯವಸ್ಥೆ (ಟೋಕನ್ ಸಿಸ್ಟಂ ಪದ್ದತಿ)
> ಬಿಎಂಟಿಸಿ ಬಸ್ಸಿನಲ್ಲಿ ಕನ್ನಡ ಹಾಡೇ ಬೇಕೆಂದು ಒತ್ತಾಯಿಸುವಂತಿಲ್ಲ. ರಾಜ್ ಕಪೂರ್ ಹಾಡೂ ಕೇಳಬೇಕು, ರಾಜ್ಕುಮಾರ್ ಹಾಡೂ ಕೇಳಬೇಕು.
> ಈ ಸೌಲಭ್ಯದ ಮೂಲಕ ಕೆಲಸ ಮಾಡುವ ಉದ್ಯೋಗಿಗಳು ಮುಂದಿನ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆಯ ಬಗ್ಗೆ ಚಕಾರ ಎತ್ತುವಂಗಿಲ್ಲ, ಕೆಮ್ಮಂಗಿಲ್ಲ.
ಸಿಎಂ ಅಧ್ಯಕ್ಷತೆಯಲ್ಲಿ ಈ ಭಾಗದ ಖಾಸಗಿ ಸಂಸ್ಥೆಗಳ ಮಾಲೀಕರ ಅಥವಾ ಪ್ರತಿನಿಧಿಗಳ ಸಭೆಯನ್ನು ಇದೇ ಸೋಮವಾರ ಕರೆಯಲು ಕಾರ್ಮಿಕ ಇಲಾಖೆ ನಿರ್ಧರಿಸಿದೆ. ಈ ದಿನಾಂಕದೊಳಗೆ ಉದ್ಯೋಗಿಗಳ ಅಭಿಪ್ರಾಯವನ್ನು ಕ್ರೋಢೀಕರಿಸಲು ಇಲಾಖೆ ಸಂಸ್ಥೆಗಳಿಗೆ ಮನವಿ ಮಾಡಿದೆ.
(ಈ ರೀತಿಯ ವ್ಯವಸ್ಥೆ ಜಾರಿಗೆ ಬಂದರೆ ಹೇಗೆ, ಎನ್ನುವ ಕಾಲ್ಪನಿಕ ಲೇಖನವಿದು)












Click it and Unblock the Notifications