Darshan First Day Jail: ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಮೊದಲ ರಾತ್ರಿ ಹೇಗಿತ್ತು?
ಬೆಂಗಳೂರು ಜೂನ್ 23: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಕಳೆದ ದಿನ ಜೈಲಿನಲ್ಲಿ ಮುದ್ದೆ ಊಟ ಮಾಡಿದ ದರ್ಶನ್ ರಾತ್ರಿ ಹೇಗೆ ಕಳೆದರು? ಜೈಲಿನಲ್ಲಿ ದರ್ಶನ್ ಮೊದಲ ರಾತ್ರಿ ಹೇಗಿತ್ತು? ಎಂದು ಹೆಸರು ಹೇಳಲು ಇಚ್ಚಿಸದ ಜೈಲು ಸಿಬ್ಬಂದಿಯೊಬ್ಬರು ಹೇಳಿಕೊಂಡಿದ್ದಾರೆ.
ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಅವರಿಗೆ ಜುಲೈ 4ರವರೆಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ದರ್ಶನ್ ಸೇರಿ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ ನಾಲ್ವರು ಆರೋಪಿಗಳನ್ನೂ ಪೊಲೀಸರು ಬಿಗಿಭದ್ರತೆಯಲ್ಲಿ ಸೆಂಟ್ರಲ್ ಜೈಲಿಗೆ ರವಾನಿಸಿದ್ದಾರೆ. ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಮೊದಲ ದಿನ ಕಳೆದಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ಕಳೆದ ದಿನ ಸರಿಯಾಗಿ ನಿದ್ದೆ ಮಾಡಿಲ್ಲ. ರಾತ್ರಿ ಊಟ ಕೂಡ ಅವರಿಗೆ ಸರಿಯಾಗಿ ಮಾಡಲು ಆಗಿಲ್ಲ. ನಿರಂತರ ವಿಚಾರಣೆಯಿಂದ ದಣಿದಿದ್ದ ದರ್ಶನ್ಗೆ ರಾತ್ರಿ ಊಟಕ್ಕಾಗಿ ಮುದ್ದೆ, ಸಾಂಬಾರ್, ಚಪಾತಿ ಮತ್ತು ಮಜ್ಜಿಗೆ ನೀಡಲಾಗಿತ್ತು.
ನಿತ್ಯ ಮನೆ ಹಾಗೂ ಹೋಟೆಲ್ನಲ್ಲಿ ಬಿರಿಯಾನಿ, ಕಬಾಬ್ ತಿನ್ನುತ್ತಿದ್ದ ದರ್ಶನ್ಗೆ ಜೈಲೂಟ ಸರಿ ಹೋಗಲೇ ಇಲ್ಲ. ಪೊಲೀಸ್ ಕಸ್ಟಡಿಯಲ್ಲಿ ಇದ್ದಿದ್ದರೆ ಬಿರಿಯಾನಿ ಊಟ ಮಾಡ್ತಾಯಿದ್ದರೆನೋ ಗೊತ್ತಿಲ್ಲ. ಆದರೆ ಕಳೆದ ದಿನ ಮಾತ್ರ ದರ್ಶನ್ ಸರಿಯಾಗಿ ಜೈಲಿನಲ್ಲಿ ಊಟ ಮಾಡಿಲ್ಲ. ಜೊತೆಗೆ ನಿದ್ದೆ ಕೂಡ ಸರಿಯಾಗಿ ಮಾಡಿಲ್ಲ ಎನ್ನಲಾಗುತ್ತಿದೆ. ಕಳೆದ ದಿನ ಮಂಕಾಗಿ ಕುಳಿದ್ದ ದಾಸ, ಗಾಢವಾಗಿ ಯಾವುದೋ ಯೋಚನೆಯಲ್ಲಿ ಮುಳಗಿದ್ದರು. ರಾತ್ರಿ 11.30ರ ನಂತರ ನಿದ್ದೆಗೆ ಅವರು ಜಾರಿದ್ದಾರೆನ್ನಲಾಗುತ್ತಿದೆ.

ಇನ್ನೂ ಇಂದು ಜೈಲಿನ ಮೆನುವಿನ ಪ್ರಕಾರ ದರ್ಶನ್ಗೆ ಪಲಾವ್ ನೀಡಲಾಗುತ್ತದೆ. ದರ್ಶನ್ 6.30ಕ್ಕೆ ಬೆಳಗ್ಗೆ ಎದ್ದು ನಿತ್ಯಕರ್ಮ ಮುಗಿಸಿ, ಸೆಲ್ನಲ್ಲಿ ಕುಳಿತಿದ್ದು ಅವರೊಂದಿಗೆ ಸಹಖೈದಿ ವಿನಯ್ ಸೆರೆವಾಸ ಅನುಭವಿಸುತ್ತಿದ್ದಾರೆ.
ಜೈಲು ಸೇರಿದ ಪವಿತ್ರಾ ಗೌಡ...
ಚಿತ್ರದುರ್ಗದ ತಮ್ಮ ಅಭಿಮಾನಿ ರೇಣುಕಾ ಸ್ವಾಮಿ ಬರ್ಬರ ಹತ್ಯೆ ಕೇಸ್ನ ಎರಡನೇ ಆರೋಪಿ ದರ್ಶನ್ ಇಂದು (ಜೂನ್ 22) ಜೈಲು ಪಾಲಾಗಿದ್ದಾರೆ. ದರ್ಶನ್ ಸೇರಿದಂತೆ ನಾಲ್ವರಿಗೆ (ವಿನಯ್, ಪ್ರದೂಶ್, ಧನರಾಜ್) 24ನೇ ಎಸಿಎಂಎಂ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಜೂನ್ 20 ರಂದು ಪವಿತ್ರಾ ಗೌಡ ಮತ್ತು ಇತರೆ ಆರೋಪಿಗಳು ಜೈಲು ಸೇರಿದ್ದರು. ಜುಲೈ 4 ರವರೆಗೂ ಎಲ್ಲಾ ಆರೋಪಿಗಳಿಗೂ ಜೈಲೇ ಗತಿ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ಗೆ ವಿಚಾರಣಾಧೀನ ಕೈದಿ ನಂಬರ್ 6106 ನೀಡಲಾಗಿದೆ. ದರ್ಶನ್ ಜೊತೆ ಇಂದು ಜೈಲು ಪಾಲಾಗಿರುವ ಧನರಾಜ್ - ವಿಚಾರಣಾಧೀನ ಕೈದಿ ನಂಬರ್ 6107, ವಿನಯ್ - ವಿಚಾರಣಾಧೀನ ಕೈದಿ ನಂಬರ್ 6108, ಪ್ರದೂಶ್ಗೆ - ವಿಚಾರಣಾಧೀನ ಕೈದಿ ನಂಬರ್ 6109 ಕೊಡಲಾಗಿದೆ.
ಪರಪ್ಪನ ಅಗ್ರಹಾರ ಸೇರಿರುವ ದರ್ಶನ್ಗೆ ಜೈಲಿನಲ್ಲಿ ವಿಶೇಷ ಬ್ಯಾರಕ್ ವ್ಯವಸ್ಥೆ ಮಾಡಲಾಗಿದೆ. ಭದ್ರತಾ ದೃಷ್ಟಿಯಿಂದಾಗಿ ದರ್ಶನ್ ಅನ್ನು ವಿಶೇಷ ಬ್ಯಾರಕ್ನಲ್ಲಿ ಇರಿಸಲಾಗಿದೆ. ಇನ್ನೂ, ರೇಣುಕಾಸ್ವಾಮಿ ಹತ್ಯೆ ಕೇಸ್ನ ಎ1 ಆರೋಪಿ ಪವಿತ್ರಾ ಗೌಡರನ್ನ ಪರಪ್ಪನ ಅಗ್ರಹಾರದ ಮಹಿಳಾ ವಿಭಾಗದ ಡಿ ಬ್ಯಾರಕ್ನಲ್ಲಿ ಇರಿಸಲಾಗಿದೆ. ಪವಿತ್ರಾ ಗೌಡಗೆ ವಿಚಾರಣಾಧೀನ ಕೈದಿ ಸಂಖ್ಯೆ - 6024 ನೀಡಲಾಗಿದೆ.












Click it and Unblock the Notifications