ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರುವ ಹಾದಿ ಸುಗಮ
ಹೊಸಕೋಟೆ, ನವೆಂಬರ್ 05: ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಬಹಳ ದಿನಗಳಿಂದ ಹಬ್ಬಿವೆ. ಈಗ ಕಾಂಗ್ರೆಸ್ ಸೇರುವ ಹಾದಿ ಸುಗಮವಾಗಿದ್ದು, ಪಕ್ಷ ಸೇರ್ಪಡೆ ದಿನಾಂಕ ಮಾತ್ರ ಅಂತಿಮವಾಗಬೇಕಿದೆ.
ಹಲವಾರು ಹಿರಿಯ ಕಾಂಗ್ರೆಸ್ ನಾಯಕರು ಶರತ್ ಬಚ್ಚೇಗೌಡ ಅವರನ್ನು ಈಗಾಗಲೇ ಪಕ್ಷಕ್ಕೆ ಆಹ್ವಾನಿಸಿದ್ದಾರೆ. "ಈ ಕುರಿತು ಸೂಕ್ತ ಸಮಯದಲ್ಲಿ ತೀರ್ಮಾನ ಕೈಗೊಳ್ಳುತ್ತೇನೆ" ಎಂದು ಶರತ್ ಶರತ್ ಬಚ್ಚೇಗೌಡ ಅವರು ಹೇಳಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಹ ಶರತ್ ಬಚ್ಚೇಗೌಡ ಅವರ ಜೊತೆ ಮಾತನಾಡಿದ್ದು, ಪಕ್ಷ ಸೇರ್ಪಡೆಗೊಳ್ಳಲು ಒಪ್ಪಿಗೆ ನೀಡಿದ್ದಾರೆ. 2021ರಲ್ಲಿ ಶರತ್ ಬಚ್ಚೇಗೌಡ ಅವರು ಬೆಂಬಲಿಗರ ಜೊತೆ ಪಕ್ಷ ಸೇರುವ ಸಾಧ್ಯತೆ ಇದೆ.
ಹೊಸಕೋಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶರತ್ ಬಚ್ಚೇಗೌಡ ಟಿಕೆಟ್ ಕೈ ತಪ್ಪಿದಾಗ ಪಕ್ಷದ ನಾಯಕರ ವಿರುದ್ಧವೇ ಬಂಡಾಯ ಎದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿದ್ದಾರೆ.

ತಾಲೂಕು ಘಟಕದ ಒಪ್ಪಿಗೆ
ಶರತ್ ಬಚ್ಚೇಗೌಡ ಕಾಂಗ್ರೆಸ್ ಪಕ್ಷ ಸೇರಲು ಹೊಸಕೋಟೆ ತಾಲೂಕು ಘಟಕ ಒಪ್ಪಿಗೆ ನೀಡಿದೆ. ಬುಧವಾರ ಸಭೆ ಸೇರಿದ್ದ ತಾಲೂಕು ಘಟಕದ ಪದಾಧಿಕಾರಿಗಳು ಶರತ್ ಬಚ್ಚೇಗೌಡ ಸೇರ್ಪಡೆಗೆ ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ. ಈ ಕುರಿತು ಕೆಪಿಸಿಸಿಗೂ ವರದಿಯನ್ನು ಸಲ್ಲಿಸಲಿದ್ದಾರೆ.

ಒಮ್ಮತದ ತೀರ್ಮಾನ ಕೈಗೊಂಡಿದ್ದೇವೆ
"ಶರತ್ ಬಚ್ಚೇಗೌಡ ಅವರು ಪಕ್ಷ ಸೇರ್ಪಡೆಯಾಗಲು ತಾಲೂಕು ಕಾಂಗ್ರೆಸ್ ಸಭೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ಕೆಪಿಸಿಸಿಗೆ ಸಹ ಶೀಘ್ರದಲ್ಲಿಯೇ ವರದಿ ಸಲ್ಲಿಸಲಾಗುತ್ತದೆ" ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಮುನಿಶಾಮಣ್ಣ ಹೇಳಿದ್ದಾರೆ.

ಹಿರಿಯ ನಾಯಕರ ಆಹ್ವಾನ
ರಮೇಶ್ ಕುಮಾರ್ ಸೇರಿದಂತೆ ಹಿರಿಯ ನಾಯಕರು ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಶರತ್ ಬಚ್ಚೇಗೌಡಗೆ ಆಹ್ವಾನ ನೀಡಿದ್ದಾರೆ. ರಮೇಶ್ ಕುಮಾರ್ "ಶರತ್ ಬಚ್ಚೇಗೌಡ ನನ್ನ ಮಗನಿದ್ದಂತೆ. ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗನಿಗಿಂತ ಹೆಚ್ಚು. ಅವರು ಕಾಂಗ್ರೆಸ್ ಸೇರ್ಪಡೆಗೊಳ್ಳುವುದಾದರೆ ಅದಕ್ಕಿಂತ ಆನಂದ ಬೇರೊಂದಿಲ್ಲ" ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದಾರೆ.
Recommended Video

ಡಿ. ಕೆ. ಶಿವಕುಮಾರ್ ತಂತ್ರ
ಶರತ್ ಬಚ್ಚೇಗೌಡ ಯುವ ನಾಯಕ, ಹೊಸಕೋಟೆ ಕ್ಷೇತ್ರದಲ್ಲಿ ಯುವಕರ ಅಪಾರ ಬೆಂಬಲ ಅವರಿಗೆ ಇದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಶರತ್ ಬಚ್ಚೇಗೌಡರನ್ನು ಪಕ್ಷಕ್ಕೆ ಕರೆತಂದರೆ ಭವಿಷ್ಯದಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಅನುಕೂಲವಾಗಲಿದೆ ಎಂದು ತಂತ್ರ ರೂಪಿಸಿದ್ದಾರೆ.












Click it and Unblock the Notifications