ಕಾಂಗ್ರೆಸ್ ನಾಯಕರ ಬಗ್ಗೆ ಎಂಟಿಬಿ ನಾಗರಾಜ್ ಸ್ಫೋಟಕ ಹೇಳಿಕೆ!
Recommended Video
ಬೆಂಗಳೂರು, ಸೆಪ್ಟೆಂಬರ್ 18 : ಕರ್ನಾಟಕದ ಕಾಂಗ್ರೆಸ್ ನಾಯಕರು ಮತ್ತು ಮಾಜಿ ಸಚಿವ ಕೃಷ್ಣ ಬೈರೇಗೌಡ ವಿರುದ್ಧ ಮಾಜಿ ಸಚಿವ ಎಂಟಿಬಿ ನಾಗರಾಜ್ ಹಲವಾರು ಆರೋಪಗಳನ್ನು ಮಾಡಿದ್ದಾರೆ. ಈ ಮೂಲಕ ಹೊಸಕೋಟೆ ಉಪ ಚುನಾವಣಾ ಕಣವನ್ನು ರಂಗೇರಿಸಿದ್ದಾರೆ.
"ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದನ್ನು ನಿಲ್ಲಿಸದಿದ್ದಲ್ಲಿ ಕಾಂಗ್ರೆಸ್ ನಾಯಕರು ನಡೆಸಿರುವ ಅಕ್ರಮಗಳನ್ನು ಬಯಲಿಗೆಳೆಯುವುದು ಅನಿವಾರ್ಯವಾಗಲಿದೆ" ಎಂದು ಎಂಟಿಬಿ ನಾಗರಾಜ್ ಎಚ್ಚರಿಕೆ ನೀಡಿದರು.
ಸೆಪ್ಟೆಂಬರ್ 21ರಂದು ಹೊಸಕೋಟೆಯಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶ ನಡೆಯಲಿದೆ. ಕಾಂಗ್ರೆಸ್ ನಾಯಕರು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಭದ್ರಕೋಟೆಯಲ್ಲಿ ಶಕ್ತಿ ಪ್ರದರ್ಶನ ಮಾಡಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.
ಹೊಸಕೋಟೆ ಕ್ಷೇತ್ರದ ಉಪ ಚುನಾವಣೆ ಉಸ್ತುವಾರಿಯಾಗಿ ಮಾಜಿ ಸಚಿವ ಕೃಷ್ಣ ಬೈರೇಗೌಡರನ್ನು ನೇಮಿಸಲಾಗಿದೆ. ಎಂಟಿಬಿ ನಾಗರಾಜ್ ಕೃಷ್ಣ ಬೈರೇಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಆಪ್ತರಾಗಿದ್ದ ಎಂಟಿಬಿ ನಾಗರಾಜ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅನರ್ಹಗೊಂಡಿದ್ದಾರೆ. ಕಾಂಗ್ರೆಸ್ನಿಂದಲೂ ಉಚ್ಛಾಟನೆಗೊಂಡಿದ್ದಾರೆ.

ಕಾಂಗ್ರೆಸ್ ನಾಯಕರು ಹಣ ಪಡೆದಿದ್ದರು
"ಕಾಂಗ್ರೆಸ್ ನಾಯಕರು ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಬಳಿ ಹಣದ ಭಿಕ್ಷೆ ಪಡೆದಿದ್ದರು. ಚುನಾವಣೆಗಾಗಿ ರಾಜಕೀಯ ಮಾಡಬೇಕೆ ಹೊರತು ತೇಜೋವಧೆಗೆ ಪ್ರಯತ್ನ ನಡೆಸಿದರೆ ತಿರುಗೇಟು ನೀಡಲಾಗುತ್ತದೆ" ಎಂದು ಎಂಟಿಬಿ ನಾಗರಾಜ್ ಎಚ್ಚರಿಕೆ ನೀಡಿದರು.

ಅವರು ಯಾವ ಪಕ್ಷದಲ್ಲಿದ್ದರು
"ನನ್ನನ್ನು ಪಕ್ಷದ್ರೋಹಿ ಎನ್ನುವ ಕೃಷ್ಣ ಬೈರೇಗೌಡರು ಹಿಂದೆ ಯಾವ ಪಕ್ಷದಲ್ಲಿದ್ದರು?. ಅವರ ತಂದೆ ಮಾಡಿರುವ ರಾಜಕಾರಣ ಎಲ್ಲಿರಿಗೂ ತಿಳಿದಿದೆ" ಎಂದು ಮಾಜಿ ಸಚಿವ ಕೃಷ್ಣ ಬೈರೇಗೌಡ ವಿರುದ್ಧ ಎಂಟಿಬಿ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಮುಖವಾಡ ಕಳಚಿ ಬೀಳಲಿದೆ
"ಕೃಷ್ಣ ಬೈರೇಗೌಡರು ಹಿಂದೆ ಕೃಷಿ ಸಚಿವರಾಗಿದ್ದಾಗ ಕೃಷಿ ಹೊಂಡಗಳ ನಿರ್ಮಾಣದಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ವಹಿಸಿದರೆ ಮುಖವಾಡ ಕಳಚಿ ಬೀಳಲಿದೆ" ಎಂದು ಎಂಟಿಬಿ ನಾಗರಾಜ್ ಹೇಳಿದರು.

ಉಪ ಚುನಾವಣೆ ಕಣ
ಎಂಟಿಬಿ ನಾಗರಾಜ್ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಹೊಸಕೋಟೆ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಚುನಾವಣೆ ಸಿದ್ಧತೆಗಾಗಿ ಸೆ.21ರಂದು ಬೃಹತ್ ಸಮಾವೇಶ ಹಮ್ಮಿಕೊಂಡಿದೆ. ಕಾಂಗ್ರೆಸ್ ಮತ್ತು ಎಂಟಿಬಿ ನಾಗರಾಜ್ ಹೇಳಿಕೆಗಳ ಮೂಲಕ ಚುನಾವಣಾ ಕಣ ರಂಗೇರುತ್ತಿದೆ.












Click it and Unblock the Notifications