ಬೆಂಗಳೂರಿನಲ್ಲಿ ಮಳೆ ಆರ್ಭಟ: ಮಂಗಳವಾರ ಶಾಲಾ-ಕಾಲೇಜಿಗೆ ರಜೆ ಘೋಷಣೆ
ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಭಾರಿ ಮಳೆ ಸುರಿಯುತ್ತಿದೆ. ರಾಜಧಾನಿಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಧಾರಾಕಾರ ಮಳೆ ಹಿನ್ನಲೆಯಲ್ಲಿ ಆಗಸ್ಟ್ 30 ರಂದು ಮಂಗಳವಾರ ಬೆಂಗಳೂರು ನಗರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಸೋಮವಾರ ಕೂಡ ಬೆಂಗಳೂರಿನಲ್ಲಿ ಭಾರಿ ಮುಂದುವರೆದಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಭಾರಿ ಮಳೆಯಾಗುತ್ತಿರುವ ಕಾರಣ ವಿದ್ಯಾರ್ಥಿಗಳ ಸುರಕ್ಷತೆಯ ಕಾರಣದಿಂದಾಗಿ ಜಿಲ್ಲಾಧಿಕಾರಿಗಳು ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಡಿಪಿಐ ಬೈಲಾಂಜನಪ್ಪ ಹೇಳಿದ್ದಾರೆ.
ಐದು ವರ್ಷಗಳ ಬಳಿಕ ಆಗಸ್ಟ್ ತಿಂಗಳಲ್ಲಿ ದಾಖಲೆ ಮಳೆ ಕಂಡ ಬೆಂಗಳೂರು: ಜನರ ಪರದಾಟ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಆಗಸ್ಟ್ 30ರ ಮಂಗಳವಾರ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ.
ಸೋಮವಾರ ಎಡಬಿಡದೆ ಸುರಿದ ಮಳೆಯಿಂದಾಗಿ ನಗರದ ಹಲವು ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಯಿತು. ರಾತ್ರಿ ಕೂಡ ಮಳೆ ಮುಂದುವರೆದಿದ್ದು, ಕಚೇರಿಯಿಂದ ಮನೆಗೆ ತೆರಳಲು ನೌಕರರು ಹರಸಾಹಸ ಪಡುತ್ತಿದ್ದಾರೆ.
ಕರ್ನಾಟಕದಲ್ಲಿ
ಸೆ.
2ರವರೆಗೆ
ಎಲ್ಲೆಡೆ
ಭಾರಿ
ಮಳೆ
ಮುನ್ಸೂಚನೆ
ಬಹುತೇಕ ಅಂಡರ್ ಪಾಸ್ಗಳಲ್ಲಿ ನೀರು ನಿಂತು ಅವಾಂತರ
ಭಾರಿ ಮಳೆಯ ಕಾರಣದಿಂದಾಗಿ ನಗರದ ಹಲವು ಅಂಡರ್ ಪಾಸ್ಗಳಲ್ಲಿ ನೀರು ತುಂಬಿಕೊಂಡಿದ್ದು ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ನಾಯಂಡಹಳ್ಳಿ, ಲಗ್ಗೆರೆ, ಶಿವಾನಂದ ವೃತ್ತ ಸೇರಿದಂತೆ ಹಲವು ಅಂಡರ್ ಪಾಸ್ಗಳಲ್ಲಿ ನೀರು ನಿಂತ ಪರಿಣಾಮ ಹೆಚ್ಚಿನದಾಗಿ ದ್ವಿಚಕ್ರ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು.
ಉತ್ತರಹಳ್ಳಿ 39.5 ಮಿ.ಮೀ, ನಾಯಂಡಹಳ್ಳಿ 49.5 ಮಿ.ಮೀ, ಹಂಪಿ ನಗರ 44.5 ಮಿ.ಮೀ, ಹೆಚ್.ಗೊಲ್ಲಹಳ್ಳಿ 44.5 ಮಿ.ಮೀ., ಕೋಣನಕುಂಟೆ 55.0 ಮಿ.ಮೀ., ಅರಕೆರೆ 47.5 ಮಿ.ಮೀ., ಬಿಳೇಕಲ್ಲಹಳ್ಳಿ 60.5 ಮಿ.ಮೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಟ್ರಾಫಿಕ್ನಿಂದ ಸವಾರರ ಪರದಾಟ
ಭಾರಿ ಮಳೆಯ ಜೊತೆಗೆ ನಗರದ ಟ್ರಾಫಿಕ್ ಜನರ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ. ಮಲ್ಲೇಶ್ವರಂನ 8ನೇ ಕ್ರಾಸ್ನಲ್ಲಿ ಮರದ ಕೊಂಬೆ ಮುರಿದುಬಿದ್ದ ಪರಿಣಾಮ ರಸ್ತೆ ಬದಿ ನಿಲ್ಲಿಸಿದ್ದ ಕಾರು ಜಖಂ ಗೊಂಡಿದೆ. ಅದೃಷ್ಟವಶಾತ್ ಕಾರಿನಲ್ಲಿ ಯಾರೂ ಇಲ್ಲದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ಮಲ್ಲೇಶ್ವರಂನ ಹಲವು ರಸ್ತೆಗಳಲ್ಲಿ ನೀರು ತುಂಬಿಕೊಂಡ ಪರಿಣಾಮ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ನಿಧಾನ ಗತಿಯಲ್ಲಿ ವಾಹನಗಳು ಚಲಿಸುತ್ತಿದ್ದು, ರಸ್ತೆ ಗುಂಡಿಗಳು ದ್ವಿಚಕ್ರ ವಾಹನ ಸವಾರರನ್ನು ಕಂಗೆಡಿಸಿವೆ.
ಹಬ್ಬದ ಸಂಭ್ರಮ ಕಿತ್ತುಕೊಂಡ ಮಳೆ
ಇಡಿ ರಾಜ್ಯವೇ ಆಗಸ್ಟ್ 31ರಂದು ಗಣೇಶನ ಹಬ್ಬದ ಸಂಭ್ರಮದಲ್ಲಿತ್ತು. ಆದರೆ ಎಡಬಿಡದೆ ಸುರಿಯುತ್ತಿರುವ ಮಳೆ ಹಬ್ಬದ ಸಂಭ್ರಮವನ್ನು ಕಿತ್ತುಕೊಂಡಿದೆ. ಅದರಲ್ಲೂ ಬೆಂಗಳೂರಿನಿಂದ ಹಬ್ಬಕ್ಕಾಗಿ ಊರಿಗೆ ಹೋಗುವವರ ಸಂಕಷ್ಟ ಹೇಳತೀರದಾಗಿದೆ. ಮೊದಲೇ ಬಸ್ಗಳನ್ನು ಬುಕ್ ಮಾಡಿಕೊಂಡವರು, ಸಮಯಕ್ಕೆ ಸರಿಯಾಗಿ ಹೋಗಲಾರದೆ ಪರದಾಡುವಂತಾಗಿದೆ.
ಮೆಜೆಸ್ಟಿಕ್, ರಾಜಾಜಿನಗರ, ಬಸವೇಶ್ವರ ನಗರ, ವಿಜಯ ನಗರ, ಶಾಂತಿನಗರ, ಲಾಲ್ ಬಾಗ್, ಜಯನಗರ, ಜೆ.ಪಿ.ನಗರ, ಕೆ.ಆರ್.ಮಾರ್ಕೆಟ್, ಶೇಷಾದ್ರಿಪುರಂ, ಕಾರ್ಪೊರೇಷನ್ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ
ಮಂಗಳವಾರವೂ ಭಾರಿ ಮಳೆ ಸಾಧ್ಯತೆ
ಬೆಂಗಳೂರು ಸೇರಿದಂತೆ ರಾಜ್ಯದ 24 ಜಿಲ್ಲೆಗಳಿಗೆ ಮಂಗಳವಾರ ಕೂಡ ಯೆಲ್ಲೋ ಅಲರ್ಟ್ ನೀಡಲಾಗಿದೆ. ಸೆಪ್ಟೆಂಬರ್ 2ರವರೆಗೂ ಭಾರಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಭಾರಿ ಮಳೆಯಿಂದ ಕಂಗಾಲಾಗಿರುವ ಜನತೆಗೆ ಹವಾಮಾನ ಇಲಾಖೆಯ ಮುನ್ಸೂಚನೆ ಮತ್ತಷ್ಟು ಆತಂಕ ಮೂಡಿಸಿದೆ.
ಮಂಗಳವಾರ
ನಗರದಲ್ಲಿ
ಪ್ರಯಾಣ
ಮಾಡಲು
ಬಯಸುವ
ನಾಗರಿಕರು
ಸ್ವಂತ
ವಾಹನಗಳನ್ನು
ಬಿಟ್ಟು
ಆದಷ್ಟು
ಸಾರ್ವಜನಿಕ
ಸಾರಿಗೆ
ಬಳಸಿದರೆ
ಉತ್ತಮ
ಎನ್ನಲಾಗಿದೆ.