ಹಿಂದೂ ಮಹಾಸಭಾದಿಂದ ಪ್ರಣವಾನಂದ ಸ್ವಾಮೀಜಿಗೆ ಕೊಕ್
ಬೆಂಗಳೂರು, ಡಿ.08: ಕರ್ನಾಟಕದ ವಿವಿಧ ನಗರಗಳಲ್ಲಿ ನಾಥುರಾಮ್ ಗೋಡ್ಸೆ ಪ್ರತಿಮೆ ನಿರ್ಮಾಣದ ಕನಸು ಹೊತ್ತಿದ್ದ ಪ್ರಣವಾನಂದ ಸ್ವಾಮೀಜಿ ಅವರನ್ನು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಲಾಗಿದೆ.
ಪ್ರಣವಾನಂದ ಸ್ವಾಮೀಜಿ ಅವರ ಮೇಲೆ ಸಾರ್ವಜನಿಕವಾಗಿ ಕೋಮು ಪ್ರಚೋದಿತ ಭಾಷಣ ಮತ್ತು ಅಧಿಕಾರ ದುರುಪಯೋಗ ಆರೋಪ ಹೊರೆಸಿ ಉಚ್ಚಾಟಿಸಲಾಗಿದೆ ಎಂದು ಮಹಾ ಸಭಾದ ರಾಷ್ಟ್ರೀಯ ವಕ್ತಾರ ಎಂ.ವಾಸುದೇವ ರಾವ್ ಕಶ್ಯಪ್ ಸ್ಪಷ್ಟಪಡಿಸಿದ್ದಾರೆ.[ಪ್ರಣವಾನಂದ ಸ್ವಾಮೀಜಿಗೆ ಜೀವ ಬೆದರಿಕೆ ಕರೆ]

ಸಂಘದ ಪರವಾಗಿ ಮಾತನಾಡಿದ ಎನ್.ಲಿಂಗರಾಜು, ಪ್ರಣವಾನಂದ ಸ್ವಾಮೀಜಿಯನ್ನು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ ದಿನದಿಂದಲೂ ದುರಾಡಳಿತ, ಸ್ವಜನ ಪಕ್ಷಪಾತ, ಸಾರ್ವಜನಿಕ ಹಣ ದುರುಪಯೋಗ, ಸಾರ್ವಜನಿಕವಾಗಿ ಕೋಮುಪ್ರಚೋದಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಮೂಲಕ ಸಮಾಜದ ಸ್ವಾಸ್ಥವನ್ನು ಕೆಡಿಸಿದ್ದಾರೆ. ಅಲ್ಲದೆ ಇವರ ಕಾರ್ಯ ವೈಖರಿಯಿಂದ ಮಹಾ ಸಭಾ ತೀವ್ರ ಮುಜುಗರಕ್ಕೆ ಒಳಗಾಗಿದೆ ಎಂದರು.
ಸ್ವಾಮಿಗಳ ವಿರುದ್ಧ ನ್ಯಾಯಾಲಯ ಗಳಲ್ಲಿ ಸುಮಾರು 69ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಸಾರ್ವಜನಿಕವಾಗಿ ರಾಜ್ಯ ಆರೋಗ್ಯ ಸಚಿವರನ್ನು 'ಲೋಫರ್' ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. 'ಮುಸ್ಲಿಂ, ಕ್ರೈಸ್ತರನ್ನು ಹಿಡಿದು ಕೊಲ್ಲಿ' ಎಂದು ಕೋಮು ಪ್ರಚೋದನೆ ಹೇಳಿಕೆಗಳನ್ನು ಪುನರಾವರ್ತಿಸುತ್ತಿರುವುದನ್ನು ಗಮನಿಸಿ ಸ್ವಾಮಿಜಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗಿದೆ
ಪ್ರಣವಾನಂದ ಅವರು ಡಿ.1ರಿಂದ ಜಾರಿಗೆ ಬರುವಂತೆ ಹಿಂದೂ ಸಭಾದ ಹೆಸರಿನಲ್ಲಿ ಯಾವುದೇ ರೀತಿಯ ಚಟುವಟಿಕೆ ನಡೆಸುವಂತಿಲ್ಲ. ಒಂದು ವೇಳೆ ಸಭಾದ ಹೆಸರನ್ನು ದುರುಪಯೋಗ ಪಡಿಸಿಕೊಂಡರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಅವರು ಎಚ್ಚರಿಕೆ ನೀಡಲಾಗಿದೆ.












Click it and Unblock the Notifications