ಮೋದಿ ವಿರುದ್ಧ ಸ್ಪರ್ಧೆ ಸವಾಲು ಸ್ವೀಕರಿಸಿದ ಕೇಜ್ರಿವಾಲ್
ಬೆಂಗಳೂರು, ಮಾ.16: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದ ನಂತರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದರು. ಕರ್ನಾಟಕದ ಹಗರಣಗಳು, ಭ್ರಷ್ಟರ ಜಾತಕವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಕೇಜ್ರಿವಾಲ್ ಅವರ ಮಾತುಗಳು ಮೋದಿ ಹಾಗೂ ಅವರ ಗುಜರಾತ್ ಅಭಿವೃದ್ಧಿ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ವರದಿಗಳತ್ತಲೇ ಸುತ್ತುತ್ತಿತ್ತು. ಮೋದಿ ವಿರುದ್ಧ ಸ್ಪರ್ಧಿಸುವ ಬಗ್ಗೆ ಇದ್ದ ಕುತೂಹಲಕ್ಕೂ ಉತ್ತರ ನೀಡಿದರು.
ಫ್ರೀಡಂ ಪಾರ್ಕ್ ನಲ್ಲಿ ನಡೆದಿರುವ ಸಾರ್ವಜನಿಕ ಸಭೆಯಲ್ಲಿ ಕರ್ನಾಟಕದಲ್ಲಿ ಎಎಪಿ ಟಿಕೆಟ್ ಪಡೆದಿರುವ 13 ಅಭ್ಯರ್ಥಿಗಳು ಸೇರಿದಂತೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ, ಸಾಮಾಜಿಕ ಕಾರ್ಯಕರ್ತ ಎಸ್ ಆರ್ ಹಿರೇಮಠ್ ಅವರು ಉಪಸ್ಥಿತರಿದ್ದರು.
ಭ್ರಷ್ಟರ ಜಾತಕ ಬಿಚ್ಚಿಟ್ಟ ಕೇಜ್ರಿವಾಲ್: ಬಿಜೆಪಿ ಸರ್ಕಾರದಲ್ಲಿ ಅತ್ಯಂತ ಭ್ರಷ್ಟ ಯಾರು ಎಂದು ಪ್ರಶ್ನಿಸುವ ಮೂಲಕ ಕರ್ನಾಟಕದ ಭ್ರಷ್ಟರ ಪಟ್ಟಿಯನ್ನು ಪ್ರಕಟಿಸಿದರು. ಆರೋಪಗಳನ್ನು ಹೊತ್ತಿರುವ ಬಿಎಸ್ ಯಡಿಯೂರಪ್ಪ ಅವರನ್ನು ಮತ್ತೆ ಬಿಜೆಪಿ ಸ್ವಾಗತಿಸಿದ್ದು ಏಕೆ? ಜನರು ಹೇಳುತ್ತಿದ್ದರೆ ಮೋದಿ ಅವರು ಪ್ರಧಾನಿಯಾದರೆ ಬಿಎಸ್ ಯಡಿಯೂರಪ್ಪ ಟೆಲಿಕಾಂ ಸಚಿವರಾಗುತ್ತಾರಂತೆ. [ಎಎಪಿ ರೋಡ್ ಶೋ, ಫ್ರೀಡಂ ಪಾರ್ಕ್ ಟಾಕ್ ಶೋ]
ನಂತರ ಬಲಾತ್ಕಾರ ಆರೋಪ ಹೊತ್ತ ಹರತಾಳು ಹಾಲಪ್ಪಇದ್ದಾರೆ. ಕೃಷ್ಣಯ್ಯ ಶೆಟ್ಟಿ, ಅಕ್ರಮ ಗಣಿಗಾರಿಕೆಯ ಆರೋಪ ಹೊತ್ತಿರುವ ಜನಾರ್ದನ ರೆಡ್ಡಿ,ಅನಂದ್ ಸಿಂಗ್ ಹಾಗೂ ಅವರ ಆಪ್ತ ಬಿಎಸ್ ಶ್ರೀರಾಮುಲು ಅವರು ಪಟ್ಟಿಯಲ್ಲಿ ಮರೆಯುವಂತಿಲ್ಲ. ಅವರನ್ನು ಮತ್ತೆ ಬಿಜೆಪಿಯಲ್ಲಿ ಸೇರಿಸಿಕೊಳ್ಳಲಾಗಿದೆ. ಮೋದಿ ಪ್ರಧಾನಿಯಾದರೆ ಶ್ರೀರಾಮುಲು ಗಣಿಗಾರಿಕೆ ಸಚಿವರಾಗುತ್ತಾರಂತೆ.
ಇನ್ನು ಕರ್ನಾಟಕದಲ್ಲಿ ಪೋರ್ನೊಗ್ರಾಫಿ ಮಂತ್ರಿಗಳು ಮೂವರು ಮೋದಿ ಪ್ರಧಾನಿಯಾದರೆ ಇವರಲ್ಲಿ ಒಬ್ಬರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಗ್ಯಾರಂಟಿ.
ಡಿಕೆಶಿ ದಬ್ಬಾಳಿಕೆಗೆ ಖಂಡನೆ: ಟಿವಿ 9 ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಡಿಕೆ ಶಿವಕುಮಾರ್ ಬೆಂಬಲಿಗರಿಗೆ ತಕ್ಕ ಶಿಕ್ಷೆಯಾಗಬೇಕು. ಟಿವಿ 9 ಪರ ಹೋರಾಟಕ್ಕೆ ಎಎಪಿ ಸಿದ್ದವಿದೆ. ಎಎಪಿ ಕರ್ನಾಟಕ ನಿಮ್ಮ ಬೆಂಬಲ ನೀಡಲಿದೆ, ಧರಣಿ, ಸತ್ಯಾಗ್ರಹ, ಪ್ರತಿಭಟನೆ ಏನಾದರೂ ಮಾಡಲು ಸಿದ್ಧ ಎಂದರು.
ಮೋದಿ ವಿರುದ್ಧ ಸ್ಪರ್ಧೆ: ಭಗತ್ ಸಿಂಗ್ ರಂತೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧ. ಮೋದಿ ವಿರುದ್ಧ ಸ್ಪರ್ಧೆ ಸವಾಲು ಸ್ವೀಕರಿಸುತ್ತೇನೆ ಎಂದ ಅರವಿಂದ್ ಕೇಜ್ರಿವಾಲ್. ಆದರೆ, ನನ್ನ ಬಳಿ ಹಣವಿಲ್ಲ. ದೇಶದ ಜನರು ಅವರ ವಿರುದ್ಧ ನಿಲ್ಲಬೇಕು. ಇದರ ಬಗ್ಗೆ ಮಾ.23ರಂದು ವಾರಣಸಿಯಲ್ಲಿ ನಡೆಯಲಿರುವ ಬೃಹತ್ ಮೆರವಣಿಗೆಯಲ್ಲಿ ಅಂತಿಮ ನಿರ್ಣಯವನ್ನು ತೆಗೆದುಕೊಳ್ಳಲಾಗುತ್ತದೆ. ಅಂದ ಹಾಗೆ, ಮೋದಿ ಅವರು ಎರಡು ಸೀಟುಗಳಲ್ಲಿ ಸ್ಪರ್ಧಿಸುತ್ತಾರಂತೆ ಏಕೆ? ಅವರಿಗೇನು ಹೆದರಿಕೆಯೇ? ದೇಶಕ್ಕೆ ಬಹದ್ದೂರ್ ಪ್ರಧಾನಿಯಾಗಬೇಕು ಹೆದರಿಕೆ ಇರುವ ವ್ಯಕ್ತಿ ಬೇಡ ಎಂದರು.