ಮಕ್ಕಳ ರಕ್ಷಣೆ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ
ಬೆಂಗಳೂರು, ಸೆ. 17 : ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಬೆಂಗಳೂರು ಪೊಲೀಸ್ ಆಯುಕ್ತರು ಹೊರಡಿಸಿರುವ ಮಾರ್ಗಸೂಚಿಗಳನ್ನು ನೀವೇ ಪಾಲಿಸದಿದ್ದರೆ ಹೇಗೆ? ಎಂದು ಹೈಕೋರ್ಟ್ ಮಂಗಳವಾರ ಸರ್ಕಾರದ ಮೇಲೆ ಚಾಟಿ ಬೀಸಿದೆ.
ಕರ್ನಾಟಕ ಖಾಸಗಿ ಶಾಲೆಗಳ ಜಂಟಿ ಕ್ರಿಯಾ ಸಮಿತಿ, ಕರ್ನಾಟಕ ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ ಮತ್ತು 11 ಇತರ ಖಾಸಗಿ ಶಾಲೆಗಳು ಸಲ್ಲಸಿದ್ದ ಅರ್ಜಿ ಆಲಿಸುತ್ತಿರುವ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲ ಗೌಡ ಅವರಿದ್ದ ಏಕಸದಸ್ಯ ಪೀಠ 'ಮೊದಲು ನಿಯಮಗಳು ಸರ್ಕಾರಿ ಶಾಲೆಗಳಲ್ಲಿ ಪಾಲನೆಯಾಗಬೇಕು. ನಂತರ ಖಾಸಗಿ ಶಾಲೆಗಳಿಗೆ ಮಾರ್ಗಸೂಚಿ ಪಾಲಿಸಿ ಎಂದು ಹೇಳಲು ಸಾಧ್ಯ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಉತ್ತರ ನೀಡಬೇಕು' ಎಂದು ಎಂದು ಸ್ಪಷ್ಟವಾಗಿ ಸೂಚಿಸಿದೆ.(ಆರ್ಟಿಇ ಹೋರಾಟದಲ್ಲಿ ವಿದ್ಯಾರ್ಥಿಗಳಿಗೆ ಜಯ)

ಸೂಚನೆ ಪಾಲಿಸಲು ಹಣದ ಕೊರತೆ ಇಲ್ಲ ಎಂದು ನೀವೇ ತಿಳಿಸಿದ್ದಿರಿ. ಮಾರ್ಗಸೂಚಿ ಪಾಲನೆಯಾಗದಿದ್ದರೆ ಪ್ರಾಚಾರ್ಯ ಅಥವಾ ಮುಖ್ಯೋಪಾಧ್ಯಾಯರ ಮೇಲೆ ಪೊಲೀಸ್ ತನಿಖೆ ನಡೆಸಬೇಕಾಗುತ್ತದೆ. ಇದರಲ್ಲಿ ಯಾವ ರಾಜಿ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ.(ಸುರಕ್ಷತಾ ಕ್ರಮ ಅನುಸರಿಸದಿದ್ದರೆ ಕ್ರಿಮಿನಲ್ ಮೊಕದ್ದಮೆ)
186 ಶಾಲೆಗಳ ಮೇಲೆ ಪ್ರಕರಣ
ಇಲ್ಲಿಯವರೆಗೆ 2,727 ಶಾಲೆಗಳ ತಪಾಸಣೆ ಮಾಡಲಾಗಿದೆ. ಮಾರ್ಗಸೂಚಿ ಪಾಲನೆಗೆ ಯಾವ ಕ್ರಮ ತೆಗೆದುಕೊಳ್ಳದ 186 ಶಾಲೆಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಉಳಿದ ಶಾಲೆಗಳನ್ನು ತಪಾಸಣೆ ಮಾಡಿ ವರದಿ ಸಲ್ಲಿಸಲು ಇನ್ನು ನಾಲ್ಕು ವಾರ ಕಾಲಾವಕಾಶ ಬೇಕು ಎಂದು ಹೆಚ್ಚುವರಿ ಅಡ್ವೋಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಕೋರಿದ್ದಾರೆ. 581 ಸರ್ಕಾರಿ ಶಾಲೆಗಳನ್ನು ಪರಿಶೀಲಿಸಲಾಗಿದ್ದು ಕೇವಲ ನಾಲ್ಕು ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆದೇಶ ಪಾಲಿಸಿವೆ ಎಂದು ಮಾಹಿತಿ ನೀಡಿದರು.
ಬಿಬಿಎಂಪಿಗೂ ಬಿಸಿ
ಬಿಬಿಎಂಪಿಯ 46 ಶಾಲೆಗಳನ್ನು ತಪಾಸಣೆಗೆ ಒಳಪಡಿಸಲಾಗಿದ್ದು ಅವುಗಳಲ್ಲಿ ಒಂದೇ ಒಂದು ಶಾಲೆಯೂ ಮಾರ್ಗಸೂಚಿ ಪಾಲಿಸಿಲ್ಲ. 'ಪಾಲಿಕೆಗೇನು ವಿಶೇಷ ರೀತಿಯಲ್ಲಿ ಹೇಳಬೇಕೆ' ಎಂದು ನ್ಯಾಯಾಲಯ ಎಚ್ಚರಿಸಿದೆ.
ಮಧ್ಯಂತರ ವರದಿ ಅಂಶ ಗಮನಿಸಿದರೆ ಶೇ.10 ರಷ್ಟು ಶಾಲೆಗಳು ಮಾರ್ಗಸೂಚಿ ಪಾಲನೆ ಮಾಡುತ್ತಿಲ್ಲ ಎಂಬುದು ಕಂಡುಬಂದಿದೆ. ಎಲ್ಲ ಶಾಲೆಗಳಲ್ಲೂ ಸಿಸಿ ಕ್ಯಾಮರಾ ಅಳವಡಿಕೆ, ಶಾಲಾ ವಾಹನಗಳಿಗೆ ಜಿಪಿಎಸ್, ಪಾಲಕರಿಗೆ ಗುರುತಿನ ಚೀಟಿ ಒಳಗೊಂಡಂತೆ ಅನೇಕ ನಿಯಮಗಳನ್ನು ಆಗಸ್ಟ್ 31ರೊಳಗೆ ಅಳವಡಿಕೆ ಮಾಡುವಂತೆ ಪೊಲೀಸ್ ಆಯುಕ್ತರು ಆದೇಶ ನೀಡಿದ್ದರು. ಆದರೆ ಈ ಮಾರ್ಗಸೂಚಿಗಳು ಸಮರ್ಪಕ ರೀತಿಯಲ್ಲಿ ಅನುಷ್ಠಾನವಾಗದಿರುವುದು ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದೆ.












Click it and Unblock the Notifications