ಡಿಸಿ ಪಾಲಯ್ಯ ಮೇಲೆ ಅಸಮಾಧಾನ ಮುಂದುವರೆಸಿದ ಹೈಕೋರ್ಟ್
ಬೆಂಗಳೂರು, ಡಿಸೆಂಬರ್ 08: ನಿನ್ನೆ (ಡಿಸೆಂಬರ್ 07)ರಂದು ಹೈಕೋರ್ಟ್ ಕೈಲಿ ತಪರಾಕಿ ಹಾಕಿಸಿಕೊಂಡಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎಸ್.ಪಾಲಯ್ಯ ಅವರು ಭೂ ಪರಿವರ್ತನೆಗೆ ಸಂಬಂಧಿಸಿದ ಅರ್ಜಿ ಇತ್ಯರ್ಥಕ್ಕೆ ವಿಳಂಬ ಮಾಡಿದ ಪ್ರಕರಣದಲ್ಲಿ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನಿಡಬೇಕು ಎಂದು ಇಂದು ಶುಕ್ರವಾರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ.
ಕೆ.ಎ.ಟಿ ಆದೇಶ ಇದ್ದರೂ ಭೂ ಪರಿವರ್ತನೆ ಮಾಡದೆ ತಡ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎಸ್.ಪಾಲಯ್ಯ ಅವರನ್ನು ತೀರ್ವ ತರಾಟೆಗೆ ತೆಗೆದುಕೊಂಡು, ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಕಳಿಸುವುದಾಗಿ ಮೌಖಿಕ ಎಚ್ಚರಿಕೆಯನ್ನೂ ನೀಡಿತ್ತು.

ನಗರದ ಮಂಗಿಲಾಲ್ ಎಂಬುವರು ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಸ್.ಎನ್. ಸತ್ಯನಾರಾಯಣ ಅವರಿದ್ದ ಏಕಸದಸ್ಯ ಪೀಠ, ಪಾಲಯ್ಯ ಮತ್ತು ಜಿಲ್ಲಾಧಿಕಾರಿ ಕಚೇರಿ ಸಹಾಯಕ (ಒ.ಎ) ಎಂ.ಸಿ. ನರಸಿಂಹ ಮೂರ್ತಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತ್ತು.
'ಕೆಎಟಿ ಆದೇಶವಿದ್ದರೂ ಅರ್ಜಿಯನ್ನು ಏಕೆ ವಿಲೇವಾರಿ ಮಾಡಿಲ್ಲ. ಇಂತಹ ಅರ್ಜಿಗಳ ವಿಲೇವಾರಿಗೆ ನೀವು ಲಕ್ಷಗಟ್ಟಲೆ ಕೇಳುತ್ತೀರಿ ಎಂಬ ದೂರುಗಳು ಬಂದಿವೆ. ಸಗಣಿ ತಿನ್ನುವ ಹಲ್ಕಟ್ ಕೆಲಸ ಮಾಡಲು ನಿಮಗೆ ನಾಚಿಕೆಯಾಗೊಲ್ವೇ' ಎಂದು ನ್ಯಾಯಮೂರ್ತಿ ಕಿಡಿ ಕಾರಿದ್ದರು.
ಇಂದು ಸಹ ತಮ್ಮ ವಾಗ್ದಾಳಿ ಮುಂದುವರೆಸಿದ್ದ ನ್ಯಾಯಮೀರ್ತಿಗಳು ಕಂದಾಯ ಇಲಾಖೆ ಸಂಪೂರ್ಣ ಲಂಚಕೋರರಿಂದ ತುಂಬಿ ಹೋಗಿದೆ, ಇದು ವೈಯಕ್ತಿಕವಾಗಿ ನನಗೂ ಅನುಭವಕ್ಕೆ ಬಂದಿದೆ. ಇವರ ಮೇಲೆ ತೀರ್ವ ಕ್ರಮ ಅಗತ್ಯವಾಗಿದೆ ಎಂದರು.
ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಅವರ ವಾದ ಆಲಿಸಿ ಆದಷ್ಟು ತ್ವರಿತವಾಗಿ ಆಕ್ಷೇಪಣೆ ಸಲ್ಲಿಸಲು ನ್ಯಾಯಮೂರ್ತಿಗಳು ಹೇಳಿದರು.












Click it and Unblock the Notifications