ಬೇಗೂರು ಕೆರೆ ಮಧ್ಯೆ ಶಿವನ ಮೂರ್ತಿ; ಪೊಲೀಸ್ ಕ್ರಮಕ್ಕೆ ಕೋರ್ಟ್ ಆದೇಶ
ಬೆಂಗಳೂರು, ಆಗಸ್ಟ್ 12: ಬೆಂಗಳೂರಿನ ಬೇಗೂರು ಕೆರೆಯಲ್ಲಿ ಕೃತಕ ದ್ವೀಪ ಸೃಷ್ಟಿಸಿ ಮಧ್ಯೆ ಶಿವನ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಕರ್ನಾಟಕ ಹೈಕೋರ್ಟ್ ಬುಧವಾರ ಆದೇಶಿಸಿದೆ.
ಇದರೊಂದಿಗೆ ಬೇಗೂರು ಕೆರೆಯ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಬಿಬಿಎಂಪಿ 1 ರು ಶುಲ್ಕ ಸಂಗ್ರಹ ರದ್ದುಪಡಿಸಿದ ಹೈಕೋರ್ಟ್
ಬೇಗೂರು ಕೆರೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದ್ದರೂ ಕೆರೆಯ ಮಧ್ಯೆ ದ್ವೀಪ ಪ್ರದೇಶದಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ ಎಂದು ಪರಿಸರ ಬೆಂಬಲಿತ ಸಂಘವೊಂದು ಅರ್ಜಿ ಸಲ್ಲಿಸಿದ್ದು, ಆ ಮೊಮೊ ಆಧರಿಸಿ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಹಾಗೂ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.
"ಕೆರೆಯಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಆದೇಶ ಹೊರಡಿಸಲಾಗಿದೆ. ಆದೇಶ ಉಲ್ಲಂಘಿಸಿ ಚಟುವಟಿಕೆ ನಡೆಸಲಾಗಿದೆ. ಆದೇಶದಿಂದ ಯಾರಿಗಾದರೂ ಸಮಸ್ಯೆಯಿದ್ದರೆ ಅದಕ್ಕೆ ಶಾಸನಬದ್ಧ ಪರಿಹಾರಗಳಿವೆ" ಎಂದು ನ್ಯಾಯಾಲಯ ಹೇಳಿದೆ.
"ಮೆಮೊದಲ್ಲಿ ಉಲ್ಲೇಖಿಸಿರುವ ಅಂಶಗಳು ಸತ್ಯವೇ ಆಗಿದ್ದರೆ ನ್ಯಾಯಾಲಯದ ಆದೇಶ ಉಲ್ಲಂಘನೆಯನ್ನು ವಿರೋಧಿಸಲೇಬೇಕಿದೆ. ಕೆರೆಗಳ ರಕ್ಷಣೆ, ಕೆರೆಗಳ ಗುರುತಿಸುವಿಕೆ ಹಾಗೂ ಪುನರುಜ್ಜೀವನವನ್ನು ಉದ್ದೇಶವಾಗಿಟ್ಟುಕೊಂಡು ನ್ಯಾಯಾಲಯದ ಆದೇಶ ನೀಡಿರುತ್ತದೆ ಎಂಬುದು ನೆನಪಿರಲಿ" ಎಂದು ಹೇಳಿದೆ.
ಬೆಂಗಳೂರಿನಲ್ಲಿ ಹಲವು ಕೆರೆಗಳು ಒತ್ತುವರಿಯಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಗಳ ವಿಚಾರಣೆಯನ್ನು ನ್ಯಾಯ ಪೀಠ ಬುಧವಾರ ಕೈಗೆತ್ತಿಕೊಂಡಿತ್ತು.
ಬೇಗೂರು ಕೆರೆಯಲ್ಲಿ ಕೃತಕ ದ್ವೀಪ ಸೃಷ್ಟಿಸಿ ಅಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಬಿಬಿಎಂಪಿ ಕ್ರಮವನ್ನು ಮನವಿಯೊಂದರಲ್ಲಿ ಪ್ರಶ್ನಿಸಲಾಗಿತ್ತು. "ಧಾರ್ಮಿಕ ವಿಷಯವನ್ನು ಈ ಮನವಿ ಒಳಗೊಂಡಿಲ್ಲ" ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.
ನಂತರ ಪ್ರತಿಮೆಯನ್ನು ಮುಚ್ಚುವ ಮೂಲಕ ಯಥಾಸ್ಥಿತಿ ಕಾಯ್ದುಕೊಂಡಿರುವುದಾಗಿ ಬಿಬಿಎಂಪಿ ಕೋರ್ಟ್ಗೆ ತಿಳಿಸಿದೆ.ಶಿವನ
ವಿಗ್ರಹ ವಿವಾದ; ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ
ಬೇಗೂರು ಕೆರೆಯನ್ನು ಕೃತಕ ದ್ವೀಪವನ್ನಾಗಿ ಪರಿವರ್ತಿಸಿ ಅಲ್ಲಿ ಶಿವನ ವಿಗ್ರಹ ಸ್ಥಾಪನೆ ಮಾಡಿದ ವಿವಾದ ಉಂಟಾದ ಬೆನ್ನಲ್ಲೇ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರ ಮನೆಯ ಆವರಣದಲ್ಲಿ ನಿಲ್ಲಿಸಿರುವ ಕಾರುಗಳಿಗೆ ಬೆಂಕಿ ಬಿದ್ದಿದೆ. ಹೀಗಾಗಿ ಸತೀಶ್ ರೆಡ್ಡಿ ಕಾರು ಸುಟ್ಟ ಪ್ರಕರಣ ಶಿವನ ವಿಗ್ರಹ ಸ್ಥಾಪನೆ ವಿವಾದದ ಜತೆ ತಳಕು ಹಾಕಿಕೊಂಡಿದೆ.
ಕೆಲವು ಹಿಂದೂಪರ ಸಂಘಟನೆ ಕಾರ್ಯಕರ್ತರು ಬೇಗೂರು ಕೆರೆ ಸಮೀಪ ಹೋಗಿ ಶಿವನ ವಿಗ್ರಹ ಮುಚ್ಚಿದ್ದ ಟಾರ್ಪಲ್ ತೆಗೆದು ಹಾಕಿದ್ದರು. ಘಟನಾ ಸ್ಥಳಕ್ಕೆ ಶಾಸಕ ಸತೀಶ್ ರೆಡ್ಡಿ ಕೂಡ ಭೇಟಿ ನೀಡಿದ್ದರು. ಹಿಂದೂಪರ ಸಂಘಟನೆಗಳ ಪರ ಸತೀಶ್ ರೆಡ್ಡಿ ಧ್ವನಿಯೆತ್ತಿದ್ದರು. ಈ ಹಿನ್ನೆಲೆಯಲ್ಲಿ ಕಾರುಗಳಿಗೆ ಬೆಂಕಿ ಇಡಲಾಗಿದೆಯೇ ಎಂದು ಶಂಕಿಸಲಾಗುತ್ತಿದೆ.
Recommended Video
"ಬೇಗೂರು ಕೆರೆಯ ಬಳಿ ಶಿವನ ವಿಗ್ರಹ ತೆರವು ವಿಚಾರ ಸಂಬಂಧ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದರು. ಹೀಗಾಗಿ ಬೇಗೂರು ಕೆರೆ ಬಳಿ ನಾನು ಹೋಗಿದ್ದೆ. ಶಿವನ ದೇವಸ್ಥಾನದಲ್ಲಿ ಪೂಜೆ ಮಾಡದಂತೆ ಕ್ರಿಶ್ಚಿಯನ್ ವ್ಯಕ್ತಿ ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ. ಹಾಗಾಗಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದವು. ಕೋರ್ಟ್ ತಡೆಯಾಜ್ಞೆ ಇರುವ ಕಾರಣದಿಂದ ಕಾನೂನು ರೀತಿಯಲ್ಲಿಯೇ ವಿವಾದ ಬಗೆ ಹರಿಸೋಣ ಎಂದು ಹೇಳಿ ಬಂದಿದ್ದೆ. ಈ ವಿಚಾರವಾಗಿಯೇ ನನ್ನ ಮನೆಯ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ" ಎಂದು ಸತೀಶ್ ರೆಡ್ಡಿ ತಿಳಿಸಿದ್ದಾರೆ.