ಹೆಬ್ಬಾಳ ಉಪ ಚುನಾವಣೆ : ಅಭ್ಯರ್ಥಿ ಆಯ್ಕೆ ಕಸರತ್ತು ಮುಗಿದಿಲ್ಲ!
ಬೆಂಗಳೂರು, ಜನವರಿ 22 : ಹೆಬ್ಬಾಳ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಾರು ಎಂಬುದು ಇನ್ನೂ ಖಚಿತವಾಗಿಲ್ಲ. ನಾಮಪತ್ರ ಸಲ್ಲಿಸಲು ಜನವರಿ 27 ಕೊನೆಯ ದಿನವಾಗಿದ್ದು, ಪಕ್ಷಗಳು ಇನ್ನೂ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಕಸರತ್ತಿನಲ್ಲಿ ತೊಡಗಿವೆ.
ಬಿಜೆಪಿ ಹಾಲಿ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣ ಸ್ವಾಮಿ ಹಾಗೂ ಜಗದೀಶ ಕುಮಾರ್ ಅವರ ಪತ್ನಿ ಆರ್.ಲಲಿತಾ ಅವರ ಹೆಸರುಗಳನ್ನು ಪಕ್ಷದ ವರಿಷ್ಠರಿಗೆ ಶಿಫಾರಸು ಮಾಡಿದ್ದರು. ಆದರೆ, ಇವರಲ್ಲಿ ಅಭ್ಯರ್ಥಿ ಯಾರು? ಎಂಬುದು ಇನ್ನೂ ಅಂತಿಮಗೊಂಡಿಲ್ಲ. [ಹೆಬ್ಬಾಳ ಟಿಕೆಟ್ ಬೇಡವೆಂದ ಸುಬ್ರಮಣ್ಯ ನಾಯ್ಡು]

ಅತ್ತ ಕಾಂಗ್ರೆಸ್ ಪಕ್ಷದಲ್ಲಿ ಭೈರತಿ ಸುರೇಶ್, ರೆಹಮಾನ್ ಷರೀಫ್, ಎಚ್.ಎಂ.ರೇವಣ್ಣ ಹೆಸರುಗಳು ಕೇಳಿಬರುತ್ತಿದ್ದು, ಯಾರಿಗೆ ಟಿಕೆಟ್? ಎಂಬುದು ಇನ್ನೂ ಖಚಿತವಾಗಿಲ್ಲ. ಹಿರಿಯ ನಾಯಕ ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್ ಅವರು ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಜೆಡಿಎಸ್ ಸೇರುವ ಸಾಧ್ಯತೆ ಇದೆ. [ಹೆಬ್ಬಾಳ ಚುನಾವಣೆ : ಕಾಂಗ್ರೆಸ್ಸಿನಲ್ಲಿ ಜಟಾಪಟಿ]
ಬಿಜೆಪಿ ಅಭ್ಯರ್ಥಿ ಯಾರು? : ಹೆಬ್ಬಾಳದಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಹೊಣೆಯನ್ನು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ, ಶಾಸಕರಾದ ಬಿ.ಎನ್.ವಿಜಯಕುಮಾರ್, ಎಸ್.ಮುನಿರಾಜು ಹಾಗೂ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಸುಬ್ಬ ನರಸಿಂಹ ಅವರಿಗೆ ವಹಿಸಲಾಗಿತ್ತು.[ಉಪ ಚುನಾವಣೆ ವೇಳಾಪಟ್ಟಿ]
ನಾಯಕರು ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ವೈ.ಎ.ನಾರಾಯಣ ಸ್ವಾಮಿ ಹಾಗೂ ಆರ್.ಲಲಿತಾ ಅವರ ಹೆಸರುಗಳನ್ನು ವರಿಷ್ಠರಿಗೆ ಶಿಫಾರಸು ಮಾಡಿದ್ದರು. ಆದರೆ, ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಚುಣಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆರ್.ಲತಾ ಅವರು ಪಕ್ಷ ಬಯಸಿದರೆ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ. ವೈ.ಎ.ನಾರಾಯಣ ಸ್ವಾಮಿ ಅವರು, ಕಣಕ್ಕಿಳಿಯಲು ಬಯಸಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಭಾವವಿದೆ, ಆದ್ದರಿಂದ ಒಕ್ಕಲಿಗರಾಗಿರುವ ನಾರಾಯಣ ಸ್ವಾಮಿ ಅವರಿಗೆ ಟಿಕೆಟ್ ಸಿಗಲಿದೆ ಎಂಬುದು ಲೆಕ್ಕಾಚಾರ.
ಕಾಂಗ್ರೆಸ್ ಟಿಕೆಟ್ ಯಾರಿಗೆ? : ಕಾಂಗ್ರೆಸ್ ಹಿರಿಯ ನಾಯಕ ಸಿ.ಕೆ.ಜಾಫರ್ ಷರೀಫ್ ಅವರು ಮೊಮ್ಮಗ ರೆಹಮಾನ್ ಷರೀಫ್ ಅವರಿಗೆ ಕ್ಷೇತ್ರದಲ್ಲಿ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಗುರುವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಕುರಿತು ಮಾತುಕತೆ ನಡೆಸಿದ್ದಾರೆ. 'ಕಳೆದ ಬಾರಿಯ ಚುನಾವಣೆಯಲ್ಲಿ ಕಡಿಮೆ ಅಂತರದ ಮತಗಳಿಂದ ನನ್ನ ಮೊಮ್ಮಗ ಸೋತಿದ್ದಾನೆ. ಆದ್ದರಿಂದ, ಈ ಬಾರಿ ಟಿಕೆಟ್ ಸಿಗುವ ವಿಶ್ವಾಸವಿದೆ' ಎಂದು ಹೇಳಿದ್ದಾರೆ.
ಅತ್ತ ಎಚ್.ಎಂ.ರೇವಣ್ಣ ಮತ್ತು ಭೈರತಿ ಸುರೇಶ್ ಅವರು ಹೆಬ್ಬಾಳ ಟಿಕೆಟ್ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಮೂರು ಅಭ್ಯರ್ಥಿಗಳ ಪೈಕಿ ಯಾರಿಗೆ ಟಿಕೆಟ್ ಎಂಬುದು ಇನ್ನೂ ಖಚಿತವಾಗಿಲ್ಲ. ರೆಹಮಾನ್ ಷರೀಫ್ ಅವರು ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಜೆಡಿಎಸ್ನಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.












Click it and Unblock the Notifications