ಬುಧವಾರದ ಮಳೆಗೆ ತತ್ತರಿಸಿದ ನಮ್ಮ ಬೆಂಗಳೂರು
ಬೆಂಗಳೂರು, ಅ.9 : ರಸ್ತೆಗಳು ಜಲಾವೃತ, ಧರೆಗುಳಿದ ಮರ, ವಿದ್ಯುತ್ ಸಂಪರ್ಕ ಕಡಿತ, ಟ್ರಾಫಿಕ್ ಜಾಮ್, ಗಾಳಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ನುಗ್ಗಿದ ನೀರು, ತಗ್ಗು ಪ್ರದೇಶಗಳ ಮನೆಗಳಲ್ಲಿ ಜನರ ಸಂಕಷ್ಟ ಇವು ಬೆಂಗಳೂರು ನಗರದಲ್ಲಿ ಬುಧವಾರ ರಾತ್ರಿ ಸುರಿದ ಮಳೆ ಸೃಷ್ಟಿಸಿದ ಅವಾಂತರ. ಬುಧವಾರ ತಡರಾತ್ರಿವರೆಗೆ ಬೆಂಗಳೂರಿನಲ್ಲಿ 42.3 ಮಿ.ಮೀ ಮಳೆ ಸುರಿದಿದೆ.
ಬುಧವಾರ ಸಂಜೆ ಆರು ಗಂಟೆ ಸುಮಾರಿಗೆ ಗುಡುಗು ಸಹಿತವಾಗಿ ಆರಂಭವಾದ ಮಳೆ ತಡರಾತ್ರಿಯ ತನಕ ಸುರಿದಿದೆ. ಶೇಷಾದ್ರಿ ರಸ್ತೆ, ನೃಪತುಂಗ ರಸ್ತೆ, ಕೆ.ಜಿ.ರಸ್ತೆ, ಮಾಗಡಿ ರಸ್ತೆ, ಅರಮನೆ ರಸ್ತೆ, ಲಾಲ್ಬಾಗ್ ರಸ್ತೆ, ಕೆ.ಎಚ್.ರಸ್ತೆ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಸಂಪಿಗೆ ರಸ್ತೆ, ಗೂಡ್ಸ್ ಶೆಡ್ ರಸ್ತೆ, ಜೆ.ಸಿ. ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರ ಸ್ಥಗಿತಗೊಂಡಿತು.

ಬೆಂಗಳೂರು ದಕ್ಷಿಣ ಮತ್ತು ಬೊಮ್ಮನಹಳ್ಳಿ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಸುರಿದಿದೆ. ನಾಯಂಡಹಳ್ಳಿಯಲ್ಲಿ ಟ್ರಾಫಿಕ್ ಜಾಮ್ ಉಂಟಾದರೆ, ಗಾಳಿ ಆಂಜನೇಯ ಸ್ವಾಮಿ ದೇವಾಲಯ ಮತ್ತೊಮ್ಮೆ ಜಲಾವೃತವಾಗಿತ್ತು. ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರೆ, ಕ್ವೀನ್ಸ್ ರಸ್ತೆಯಲ್ಲಿ ಕಾರೊಂದು ನೀರಿನಲ್ಲಿ ತೇಲಾಡುತ್ತಿತ್ತು. ಸಂಚಾರ ದಟ್ಟಣೆಯಿಂದಾಗಿ ದ್ವಿಚಕ್ರ ವಾಹನ ಸವಾರರು ರಸ್ತೆ ಮಧ್ಯದಲ್ಲೇ ಸಿಲುಕಿ ಪರದಾಡುವಂತಾಯಿತು. [ಮಳೆಯಲ್ಲಿ ಕೊಚ್ಚಿ ಹೋದ ಗೀತಾಲಕ್ಷ್ಮೀ ಶವ ಪತ್ತೆ]
ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಕಾರಿನ ಮೇಲೆ ಮರ ಬಿದ್ದಿದ್ದರಿಂದ ಮಹಿಳೆಯೊಬ್ಬರು ಗಾಯಗೊಂಡರು. ಚಾಮರಾಜಪೇಟೆ, ಜಯನಗರ, ಜೆ.ಪಿ.ನಗರ 16ನೇ ಮುಖ್ಯರಸ್ತೆಯಲ್ಲಿ ಮರಗಳು ಬಿದ್ದು, ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಿಟಿಎಂ ಲೇಔಟ್ನಲ್ಲಿ ಮರ ಬಿದ್ದು, ಕಾರು ಜಖಂಗೊಂಡರೆ, ನಗರದ ಹಲವು ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಜನರು ಪರದಾಡಿದರು.
ನಗರದಾದ್ಯಂತ ರಾತ್ರಿ 12 ಗಂಟೆಯ ತನಕ ಒಟ್ಟು 42.3 ಮಿ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಶೇಷಾದ್ರಿಪುರಂ ಬಳಿ ಅಂಡರ್ಪಾಸ್ನಲ್ಲಿ ಬಿಬಿಎಂಪಿ ಮೋಟಾರ್ ಆಳವಡಿಸಿರುವುದರಿಂದ ಅಲ್ಲಿ ಹೆಚ್ಚು ನೀರು ತುಂಬಿಕೊಂಡಿರಲಿಲ್ಲ. [ಬೆಂಗಳೂರಿಗರೆ, ಹುಡ್ ಹುಡ್ ಸೈಕ್ಲೋನ್ ಬರುತ್ತಿದೆ ಎಚ್ಚರ!]

ಇಂದು ಮಳೆ ಮುಂದುವರೆಯಲಿದೆ : ಲಕ್ಷದ್ವೀಪ ಭಾಗದಲ್ಲಿ ಉಂಟಾಗಿರುವ ಮೇಲ್ಮೈಸುಳಿಗಾಳಿ ಮತ್ತು ಆಂಧ್ರ ಕರಾವಳಿ ಭಾಗದಲ್ಲಿ ಮತ್ತೊಂದು ಸುಳಿಗಾಳಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆಯಾಗುತ್ತಿದೆ. ಇಂದು ಮತ್ತು ನಾಳೆಯೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications