Breaking; ಬೆಂಗಳೂರು ನಗರದಲ್ಲಿ ಬುಧವಾರ ಸಂಜೆ ಮಳೆ ಆರ್ಭಟ
ಬೆಂಗಳೂರು ಜೂ.29: ಬೆಂಗಳೂರಿನಲ್ಲಿ ಬುಧವಾರ ಸಂಜೆ ಹಲವೆಡೆ ಗುಡುಗು ಸಹಿತ ಜೋರು ಮಳೆಯಾಗಿದೆ. ಮಳೆಯಿಂದಾಗಿ ವಾಹನ ಸಂಚಾರ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆ ಉಂಟು ಮಾಡಿದೆ.
ಜಯನಗರ, ಚಾಮರಾಜಪೇಟೆ, ಮೆಜೆಸ್ಟಿಕ್ ಸುತ್ತಮುತ್ತಲಿನ ಪ್ರದೇಶಗಳು, ಯಲಹಂಕ ಭಾಗದ ಚೌಡೇಶ್ವರಿ ವಾರ್ಡ್, ಕೆಂಪೇಗೌಡರ, ಜಕ್ಕೂರು (3 ಮಿ. ಮೀ.), ಹೊರಮಾವು, ಹೆಬ್ಬಾಳ, ವಿಶ್ವನಾಥ ನಾಗೇನಹಳ್ಳಿ, ಕೇಂಗೇರಿ (5.5 ಮಿ.ಮೀ.), ಆರ್ ಆರ್ ನಗರ, ನಾಯಂಡಹಳ್ಳಿ, ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಸುರಿದಿದೆ.
ಬೆಳಗ್ಗೆಯಿಂದ ನಗರದಲ್ಲಿ ಬಿಸಿಲು ಇತ್ತು. ಸಂಜೆಯಾಗುತ್ತಿದ್ದಂತೆ ಏಕಾಎಕಿ ಮಳೆ ಆರಂಭವಾಯಿತು. ಸಂಜೆ 5.30ರ ನಂತರ ಆರಂಭವಾದ ಮಳೆ ಕೆಲವು ಕಡೆಗಳಲ್ಲಿ ಒಂದೇ ಸಮನೆ ಜೋರಾಗಿ ಸುರಿದರೆ, ಕೆಲವು ಪ್ರದೇಶಗಳಲ್ಲಿ ಜಿಟಿ ಜಿಟಿ ರೂಪದಲ್ಲಿ ಸುರಿಯಿತು. ರಸ್ತೆಯುದ್ಧಕ್ಕೂ ಮಳೆ ನೀರು ಹರಿದು ವಾಹನ ಸವಾರರು ಪರದಾಡಿದರು.

ಸಂಚಾರಕ್ಕೆ ತೊಂದರೆ; ಜನರು ಮಳೆಯಿಂದ ತಪ್ಪಿಸಿಕೊಳ್ಳಲು ಮೆಟ್ರೋ ಮಾರ್ಗ, ಅಂಡರ್ ಪಾಸ್ಗಳಲ್ಲಿ ನಿಂತರು. ಕೆಲವು ಕಡೆಗಳಲ್ಲಿ ಒಳಚರಂಡಿ ನೀರು ಉಕ್ಕಿ ಹರಿಯಿತು. ಕೆ. ಆರ್. ಮಾರುಕಟ್ಟೆ, ಟೌನ್ ಹಾಲ್, ಕೆ. ಆರ್. ವೃತ್ತ, ಸುಜಾತ ರಸ್ತೆಯಲ್ಲಿ ಮತ್ತು ಮೆಜೆಸ್ಟಿಕ್ ಓಕಳಿಪುರಂ ಅಂಡರ್ ಪಾಸ್ ನಲ್ಲಿ ಮಳೆ ನೀರು ತುಂಬಿ ಹರಿಯಿತು. ಶಿವಾನಂದ ವೃತ್ತದ ರೈಲ್ವೆ ಕೆಳಸೇತುವೆಯಲ್ಲಿ ಮಳೆಯಿಂದಾಗಿ ಸಂಚಾರಕ್ಕೆ ತೊಂದರೆ ಉಂಟಾಯಿತು.
ಪ್ರಸ್ತುತ ಮಳೆ ತಡರಾತ್ರಿವರೆಗೆ ನಗರದ ಹಲವು ಭಾಗಗಳಲ್ಲಿ ಮುಂದುವರಿಯುವ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ. ಬುಧವಾರ ನಗರದ ತಾಪಮಾನ ಗರಿಷ್ಠ 29 ಡಿ. ಸೆ. ಹಾಗೂ ಕನಿಷ್ಠ 20 ಡಿ. ಸೆ. ಕಂಡು ಬಂದಿದೆ.
ಹವಾಮಾನ ಇಲಾಖೆ ಮುನ್ಸೂಚನೆ; ಭಾರತೀಯ ಹವಾಮಾನ ಇಲಾಖೆಯು ಜುಲೈ 1ರವರೆಗೆ ಬೆಂಗಳೂರು ನಗರದಲ್ಲಿ ಉತ್ತಮ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿದೆ. ಇಡೀ ದಿನ ಆಗಾಗ ಬಿಸಿಲು ಕಂಡು ಬಂದರೂ ಸಂಜೆ ನಂತರ ಮಳೆ ಆಗಲಿದೆ.
ಈ ವೇಳೆ ತಾಪಮಾನ ಕಡಿಮೆ ಇರಲಿದ್ದು, ಚಳಿಯ ವಾತಾವರಣ ಸೃಷ್ಟಿಯಾಗಲಿದೆ ಎಂದು ಹೇಳಿತ್ತು. ಅದರಂತೆ ಬುಧವಾರ ಸಂಜೆ ಮಳೆಯಾಗಿದ್ದು, ಇದು ಮುಂದಿನ 48 ಗಂಟೆವರೆಗೆ ಮುಂದುವರಿಯುವ ಸಾಧ್ಯತೆ ಇದೆ.












Click it and Unblock the Notifications