ಜೂನ್ ಮೊದಲ ದಿನವೇ ಬೆಂಗಳೂರಲ್ಲಿ ಭಾರೀ ಮಳೆ
ಬೆಂಗಳೂರು, ಜೂನ್ 01 : ನೋಡನೋಡುತ್ತಿದ್ದಂತೆ ಸಂಜೆ ಬೆಂಗಳೂರಿನ ಆಗಸದ ತುಂಬ ಆವರಿಸಿಕೊಂಡ ಕಾರ್ಮೋಡಗಳು ನಗರದ ಹಲವೆಡೆಗಳಲ್ಲಿ ಬುಧವಾರ ಭಾರೀ ಮಳೆ ಸುರಿಸಿವೆ. ವರ್ತೂರು, ಕೆಂಗೇರಿ ಮುಂತಾದ ಪ್ರದೇಶದಲ್ಲಿ ಆಲಿಕಲ್ಲು ಸಮೇತ ಭಾರೀ ವರ್ಷಧಾರೆಯಾಗಿದೆ.
ಮೇ ತಿಂಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಮಳೆರಾಯ ಜೂನ್ ತಿಂಗಳ ಮೊದಲ ದಿನವೇ ತನ್ನ ರೌದ್ರಾವತಾರ ತೋರಿದ್ದಾನೆ. ಬಿರುಗಾಳಿಯೊಂದಿಗೆ, ಮಿಂಚು ಮತ್ತು ಗುಡುಗಿನೊಂದಿಗೆ ಸಂಜೆ ಆಗಮಿಸಿದ ವರುಣದೇವ ನಗರದಾದ್ಯಂತ ತನ್ನ ಆರ್ಭಟ ತೋರಿದ್ದಾನೆ. [ಉತ್ತರಾಖಂಡ ಮೇಘಸ್ಪೋಟದಲ್ಲಿ ಸಿಲುಕಿದ್ದ ಕನ್ನಡಿಗರು ಪಾರು]
ನಗರದೆಲ್ಲೆಡೆ ಭಾರೀ ಮಳೆಯಾಗುತ್ತಿದ್ದು, ಚಾಲಕರು ಮರದ ಕೆಳಗೆ ವಾಹನ ನಿಲ್ಲಿಸಬಾರದು ಮತ್ತು ಜನರು ಕೂಡ ಗಿಡದ ಕೆಳಗೆ ನಿಲ್ಲಬಾರದು. ನಿಧಾನವಾಗಿ ವಾಹನ ಚಲಾಯಿಸಿ, ವಾಹನದ ಇಂಡಿಕೇಟರ್ಸ್ ತಪ್ಪದೆ ಬಳಸಿ. ತುರ್ತು ಸಂಧರ್ಭಗಳಲ್ಲಿ 1095 - ಸಂಚಾರ ಸಹಾಯವಾಣಿಗೆ ಮಾಹಿತಿ ಕೊಡಿ ಎಂದು ಬೆಂಗಳೂರು ಸಂಚಾರಿ ಪೊಲೀಸರು ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಭಾರೀ ಗಾಳಿ ಬೀಸಿದ್ದರಿಂದ ಹಲವಾರು ಪ್ರದೇಶಗಳಲ್ಲಿ ಮರ ಧರೆಗೆ ಉರುಳಿರುವ ವರದಿ ಬಂದಿದೆ. ಜಯನಗರ, ಮೈಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ನೈಸ್ ರಸ್ತೆ, ಶಿವಾನಂದ ಸರ್ಕಲ್, ಕೋರಮಂಗಲ, ಮಡಿವಾಳ, ಬನ್ನೇರುಘಟ್ಟ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಕೋರಮಂಗಲದಲ್ಲಿ ವಿದ್ಯುತ್ ಕಂಬದ ಮೇಲೆ ಮರದ ಟೊಂಗೆ ಬಿದ್ದಿದ್ದರಿಂದ ಸಂಚಾರ ದಟ್ಟಣೆಯಾಗಿದೆ.
ಮಳೆಯಲ್ಲಿ ನೆನೆಯುತ್ತಲೇ ಟ್ವಿಟ್ಟರ್ ನಲ್ಲಿ ಟ್ವಿಟ್ಟಿಗರು ಟ್ವೀಟ್ಮಳೆ ಸುರಿಸುತ್ತಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ರಸ್ತೆ ಕಾಣದಂತೆ ಮಳೆ ಸುರಿಯುತ್ತಿದೆ ಅಂತ ಒಬ್ಬರು ಟ್ವೀಟ್ ಮಾಡಿದ್ದರೆ, ಕ್ಯಾಬ್ ಗಳಲ್ಲೆಲ್ಲ ಒದ್ದೆಮುದ್ದೆಯಾದ ಯುವತಿಯರೇ ಕಾಣಿಸುತ್ತಿದ್ದಾರೆ ಎಂದು ಮತ್ತೊಬ್ಬರು ಟ್ವೀಟಿಸಿದ್ದಾರೆ.
ಸಂಜೆ ಕೆಂಪೇರುತ್ತಲೆ ಮನೆ ಸೇರಿದವರು, ಸದ್ಯ ಮಳೆ, ಟ್ರಾಫಿಕ್ ಜಾಮಲ್ಲಿ ಸಿಗ್ಹಾಕ್ಕಿಕೊಳ್ಳಲಿಲ್ಲ ಎಂದು ಸಂತಸಪಡುತ್ತಿದ್ದರೆ, ಸಿಲುಕಿಕೊಂಡವರು ಬೆಂಗಳೂರು ಟ್ರಾಫಿಕ್ಕನ್ನು ಶಪಿಸುತ್ತ ಮನೆಯತ್ತ ಧಾವಿಸುತ್ತಿದ್ದಾರೆ.