Breaking: ಬೆಂಗಳೂರಿನ 5 ವಲಯದಲ್ಲಿ ಶುಕ್ರವಾರ ಅತ್ಯಧಿಕ ಮಳೆ: KSNDMC
ಬೆಂಗಳೂರು, ಅಕ್ಟೋಬರ್ 14: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಶುಕ್ರವಾರ ವ್ಯಾಪಕವಾಗಿ ಮಳೆ ಸುರಿಯತೊಡಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಎಂಸಿ) ತಿಳಿಸಿದೆ.
ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯ ಒಟ್ಟು ಎಂಟು ವಲಯಗಳ ಪೈಕಿ ಐದು ವಲಯಗಳಲ್ಲಿ ಇಂದು (ಶುಕ್ರವಾರ) ಗುಡುಗು, ಮಿಂಚು ಸಹಿತ ಸಾಧಾರಣದಿಂದ ಅತ್ಯಧಿಕ ಭಾರಿ ಮಳೆ ಮಧ್ಯಾಹ್ನದ ನಂತರಚುರುಕುಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಎಸ್ಎನ್ಎಂಸಿ ನೀಡಿರುವ ಮುನ್ಸೂಚನೆಯ ನಕ್ಷೆಯನ್ನು ಟ್ವೀಟ್ ಮಾಡಿದೆ. ಅದರ ಪ್ರಕಾರ, ಮಹಾದೇವಪುರ ವಲಯ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ, ಪಶ್ವಿಮ ವಲಯ ಮತ್ತು ದಕ್ಷಿಣ ವಲಯಗಳಲ್ಲಿ ಧಾರಾಕಾರವಾಗಿ ಮಳೆ ಬೀಳಲಿದೆ. ಇದರೊಂದಿಗೆ ಜೋರು ಗಾಳಿ ಸಹ ಬೀಸಲಿದ್ದು, ಚಳಿಯ ವಾತಾವರಣ ನಿರ್ಮಾಣವಾಗಲಿದೆ. ಈ ಪರಿಸ್ಥಿತಿ ಶನಿವಾರ ಬೆಳಗ್ಗೆ ವರೆಗೂ ಮುಂದುವರಿಯಲಿದೆ.

ಬಾಕಿ ಮೂರು ವಲಯಗಳಾದ ಯಲಹಂಕ ವಲಯ, ದಾಸರಹಳ್ಳಿ ಮತ್ತು ಪೂರ್ವ ವಲಯದಲ್ಲಿ ಅಷ್ಟಾಗಿ ಜೋರು ಮಳೆ ಸಂಭವವಿಲ್ಲ. ಬಂದರೂ ತುಂತುರು ಇಲ್ಲವೇ ಹಗುರ ಮಳೆ ಬರುವ ಲಕ್ಷಣಗಳು ಇವೆ. ಇದರ ಹೊರತಾಗಿ ಗಂಭೀರ ಲಕ್ಷಣಗಳು ಇಲ್ಲ ಎನ್ನಲಾಗಿದೆ. ಈ ಅವಧಿಯಲ್ಲಿ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ.
ಯಲಹಂಕ ವಲಯದಲ್ಲಿ ಭಾರಿ ಮಳೆ ದಾಖಲು
ಗುರುವಾರ ಸಂಜೆಯಿಂದ ತಡರಾತ್ರಿವರೆಗೂ ಬಿಬಿಎಂಪಿ ವ್ಯಾಪ್ತಿಯ ಯಲಹಂಕ ವಲಯದಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಯಲಹಂಕ ಕೆಎಸ್ಎನ್ಡಿಎಂಸಿ ಕ್ಯಾಂಪಸ್ನಲ್ಲಿ 75.5ಮಿ.ಮೀ., ಅಟ್ಟೂರು 71ಮಿ.ಮೀ., ಚೌಡೇಶ್ವರಿ ವಾರ್ಡ್ 67.5ಮಿ.ಮೀ., ಸಂಪಂಗಿರಾಮನಗರ (1) 66ಮಿ.ಮೀ., ದೊಮ್ಮಲೂರು 65.5ಮಿ.ಮೀ., ಯಶವಂತಪುರ ಮತ್ತ ದೊಡ್ಡಬೊಮ್ಮಸಂದ್ರ 61.5ಮಿ.ಮೀ., ವಿದ್ಯಾರಣ್ಯಪುರ 58.5ಮಿ.ಮೀ., ಕೊಡಿಗೇಹಳ್ಳಿ ಹಾಗೂ ರಾಧಾಕೃಷ್ಣ ಟೆಂಪಲ್ ವಾರ್ಡ್ ತಲಾ 57ಮಿ.ಮೀ., ಮನೋರಾಯನಪಾಳ್ಯ, ವಿಶ್ವನಾಥನಾಗೇನಹಳ್ಳಿ ಮತ್ತು ಯಲಹಂಕ 56ಮಿ.ಮೀ, ಬಾಗಲಗುಂಟೆ 54ಮಿ.ಮೀ., ಜ್ಞಾನಭಾರತಿ ವಾರ್ಡ್, ಆರ್ಆರ್ನಗರ ಮತ್ತು ಕೆಂಗೇರಿಯಲ್ಲಿ 53ಮಿ.ಮೀ. ಮಳೆ ಬಿದ್ದಿದೆ.
ಅದಲ್ಲದೇ ಕೋನೆನ ಅಗ್ರಹಾರ, ದೊಡ್ಡಾನೆಕ್ಕುಂದಿ, ಚೊಕ್ಕಸಂದ್ರ, ಬ್ಯಾಟರಾಯನಪುರ, ಜಕ್ಕೂರು (1), ನಂದಿನಿ ಬಡಾವಣೆ, ವಿದ್ಯಾಪೀಠ, ಕೋರಮಂಗಲ, ಬಸವನಗುಡಿ ಹಾಗೂ ಇನ್ನಿತರ ಕಡೆಗಳಲ್ಲಿ ತುಂತುರು ಮಳೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಎಂಸಿ)ದ ವರದಿ ತಿಳಿಸಿದೆ.












Click it and Unblock the Notifications