ಬೆಂಗಳೂರು ಮಳೆ ವರದಿ: ಸೆ.6ರವರೆಗೂ ಇದೆ ವರ್ಷಧಾರೆ
ಬೆಂಗಳೂರು,ಸೆ.01: ಸಿಲಿಕಾನ್ ಸಿಟಿಯಲ್ಲಿ ಮುಂದಿನ ಸೆಪ್ಟಂಬರ್ 6ರವರೆಗೂ ಭಾರಿ ಮಳೆ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (ಕೆಎಸ್ಎನ್ಡಿಎಂಸಿ) ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಮುಂಗಾರು ಮಳೆ ಅಬ್ಬರಿಸುತ್ತಿದೆ. ಬೆಂಗಳೂರಿನಲ್ಲಿ ನಿತ್ಯ ಮಧ್ಯಾಹ್ನದ ನಂತರ ಸುರಿಯುತ್ತಿರುವ ಭಾರಿ ಮಳೆಯು ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಇದೀಗ ಮತ್ತೆ ಮಳೆ ಮುಂದುವರಿಯುವ ಮುನ್ಸೂಚನೆಯು ಬೆಂಗಳೂರು ಜನರ ನಿದ್ದೆಗೆಡಿಸಿದೆ.
ಸೆ. 6ರವರೆಗೆ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಬರುವ ಸಾಧ್ಯತೆ ಇದೆ. ಬೆಂಗಳೂರಿನಾದ್ಯಂತ ವ್ಯಾಪಕವಾಗಿ ಮಳೆ ಸುರಿಯಲಿದೆ. ಸೆಪ್ಟಂಬರ್ 02 ಹಾಗೂ ಸೆಪ್ಟಂಬರ್ 06ರಂದು ಸಾಧಾರಣದಿಂದ ಭಾರಿ ಪ್ರಮಾಣದಲ್ಲಿ ಮಳೆ ಅಂದರೆ ಸುಮಾರು 12ಸೆಂಟಿ ಮೀಟರ್ವರೆಗೂ ಬರುವ ಸಾದ್ಯತೆ ಇದೆ. ಈ ಎರಡು ಬೆಂಗಳೂರು ನಗರ ಜಿಲ್ಲೆಗೆ 'ಯೆಲ್ಲೋ ಅಲರ್ಟ್' ಕೊಡಲಾಗಿದೆ.
ಉಳಿದ ದಿನಗಳಲ್ಲಿ ನಗರದ ಹಲವೆಡೆ ಜಿಟಿ ಮಳೆ. ಆದರೆ, ಇನ್ನೂ ಕೆಲವೆಡೆ ಸಾಧಾರಣ ಮಳೆ ಬೀಳಲಿದೆ. ಈ ಮಳೆ ನಿಗದಿತ ದಿನ ತಾಪಮಾನ ಕಡಿಮೆ ಇರಲಿದೆ. ಗರಿಷ್ಠ 29ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಸಹ ನಗರದಲ್ಲಿ ಜೋರು ಮಳೆ
ಗುರುವಾರವು ಬೆಂಗಳೂರಿನಲ್ಲಿ ಜೋರು ಮಳೆ ಸುರಿಯಿತು. ಬೆಳಗ್ಗೆಯಿಂದ ಕಂಡು ಬಂದ ಸಹಜ ವಾತಾವರಣ ನಂತರ ದಿಢೀರನೆ ಮೋಡ ಮುಸುಕಿನ ಕತ್ತಲುಮಯ ವಾತಾವರಣ ನಿರ್ಮಾಣವಾಯಿತು. ನಂತರ ನಗರಾದ್ಯಂತ ಮಳೆ ಅಬ್ಬರ ಶುರುವಾಯಿತು. ಜಯನಗರ, ಚಿಕ್ಕಸಂದ್ರ, ಮೆಜೆಸ್ಟಿಕ್, ದೊಮ್ಮಲೂರು, ಮಹಾದೇವಪುರ, ಜಕ್ಕೂರು, ಯಲಹಂಕ, ದಾಸರಹಳ್ಳಿ, ಆರ್ಆರ್ನಗರ ಸೇರಿದಂತೆ ಬಹುತೇಕ ಎಲ್ಲ ಕಡೆಗಳಲ್ಲಿ ಗುಡುಗು ಸಹಿತ ಮಳೆ ಆಗಿದೆ.
ಹೊರಮಾವು ಬಳಿ ಅಧಿಕ ಮಳೆ ದಾಖಲು
ಈ ಪೈಕಿ ಮಹಾದೇವಪುರದಲ್ಲಿ ಅಧಿಕ ಮಳೆ ದಾಖಲಾಗಿದೆ. ಕೆಎಸ್ಎನ್ಡಿಎಂಸಿ ರಾತ್ರಿ 8 ಗಂಟೆವರೆಗಿನ ಮಳೆ ವರದಿ ಪ್ರಕಾರ, ಹೊರಮಾವು ಪ್ರದೇಶದಲ್ಲಿ ಅಧಿಕ 43 ಮಿ.ಮೀ. ಮಳೆ ಬಿದ್ದಿದೆ. ಉಳಿದಂತೆ ಎಚ್ಎಂಟಿ ವಾರ್ಡ್ 40 ಮಿ.ಮೀ, ಪೀಣ್ಯ ಕೈಗಾರಿಕಾ ಪ್ರದೇಶ ಮತ್ತು ದೊಡ್ಡ ಬಿದರಕಲ್ಲಿನಲ್ಲಿ ತಲಾ 31.5ಮಿ.ಮೀ, ಯಲಹಂಕ ಮತ್ತು ಜಕ್ಕೂರು ತಲಾ 27ಮಿ.ಮೀ., ಕೊಡಿಗೇಹಳ್ಳಿ 26ಮಿ.ಮೀ, ವಿದ್ಯಾಪೀಠ 23ಮಿ.ಮೀ, ಆರ್ಆರ್ ನಗರ 22ಮಿ.ಮೀ ಮಳೆ ದಾಖಲಾಗಿದೆ. ನಗರದ ಉಳಿದ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮಳೆ ಬಿದ್ದ ಬಗ್ಗೆ ವರದಿಯಾಗಿದೆ.