Breaking: ಬೆಂಗಳೂರಿಗೆ 3 ದಿನ ಧಾರಾಕಾರ ಮಳೆ: ಯೆಲ್ಲೋ ಅಲರ್ಟ್
ಬೆಂಗಳೂರು, ಅಕ್ಟೋಬರ್ 09: ಹವಾಮಾನದಲ್ಲಿ ಉಂಟಾಗಿರುವ ಬದಲಾವಣೆಗಳಿಂದ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಮಳೆ ಅಬ್ಬರ ಶುರುವಾಗಿದೆ.
ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ಮೂರು ದಿನ ಅಕ್ಟೋಬರ್ 12ರವರೆಗೆ ತೀವ್ರವಾಗಿ ಮಳೆ ಮುಂದುವರಿಯಲಿದೆ. ಈ ವೇಳೆ ನಗರ ಜಿಲ್ಲೆ ಬಹುತೇಕ ಪ್ರದೇಶಗಳಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರವಾಗಿ ಮಳೆ ಸುರಿಯಲಿದೆ. ಈ ಕಾರಣಕ್ಕೆ ಮೂರು ದಿನ ಬೆಂಗಳೂರಿಗೆ 'ಯೆಲ್ಲೋ ಅಲರ್ಟ್' ಘೋಷಿಸಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ವಿಜ್ಞಾನಿ ಡಾ.ಪ್ರಸಾದ್ ತಿಳಿಸಿದರು.
ಕಳೆದ ಎರಡು ಮೂರು ವಾರದಿಂದ ನಗರದಲ್ಲಿ ಮಳೆಯ ವಾತಾವರಣ ಕಂಡು ಬಂದಿತ್ತು. ಆದರೆ ಎಲ್ಲಿಯೂ ದಾಖಲೆ ಪ್ರಮಾಣದಲ್ಲಿ ಮಳೆ ಆಗಿರಲಿಲ್ಲ. ಇದೀಗ ಜೋರು ಮಳೆ ಆಗುವ ಮುನ್ಸೂಚನೆ ದೊರೆತಿದೆ. ಸೆಪ್ಟಂಬರ್ನಲ್ಲಿ ಐದು ದಶಕದಲ್ಲೇ ಅತ್ಯಧಿಕ ಮಳೆ ಕಂಡಿದ್ದ ಬೆಂಗಳೂರಿಗೆ ಮತ್ತೆ ಭಾರೀ ಮಳೆಯ ಆತಂಕ ಎದುರಾಗಿದೆ. ಭಾರಿ ಮಳೆಯ ಮುನ್ಸೂಚನೆ ಮಹಾದೇವಪುರ, ಬೊಮ್ಮನಹಳ್ಳಿ ವಲಯ ಸೇರಿದಂತೆ ತಗ್ಗು ಪ್ರದೇಶದ ನಿವಾಸಿಗಳಲ್ಲಿ ಭಯ ಹುಟ್ಟಿಸಿದೆ.

ನಗರದಲ್ಲಿ ಇತ್ತೀಚೆಗೆ ಮಳೆಯ ದರ್ಶನ ಅಪರೂಪ ಎಂಬಂತಹ ವಾತಾವರಣ ಉಂಟಾಗಿದೆ. ಎಲ್ಲೆಡೆ ಮೋಡ ಮುಸುಕಿದ ಹಾಗೂ ಚಳಿ ವಾತಾವರಣ ಕಂಡು ಬರುತ್ತಿದೆ. ಕೆಲವು ದಿನಗಳಿಂದ ಮರೆಯಾಗಿದ್ದ ಮಳೆ ಭಾನುವಾರ ಒಂದೆರಡು ಕಡೆಗಳ ಮತ್ತೆ ಅಬ್ಬರಿಸಿತು. ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ ನಂತರ ಬಹುತೇಕ ಕಡೆಗಳಲ್ಲಿ ತುಂತುರು ಮಳೆ ದಾಖಲಾಯಿತು.

ಸಿಂಗಸಂದ್ರದಲ್ಲಿ 37ಮಿ.ಮೀ. ಮಳೆ
ಭಾನುವಾರ ಸಿಂಗಸಂದ್ರದಲ್ಲಿ ಅತ್ಯಧಿಕ 37.5ಮಿ.ಮೀ. ಮಳೆ ಆಗಿದೆ. ಸಿಂಗಸಂದ್ರ (2) 20.5ಮಿ.ಮೀ., ಬಿಟಿಎಂ ಬಡಾವಣೆಯಲ್ಲಿ 16ಮಿ.ಮೀ. ಮಳೆ ಆಗಿದೆ. ಉಳಿದಂತೆ ವಿಜಯನಗರ, ಹಂಪಿನಗರ, ರಾಜಾಜಿನಗರ, ಮೆಜೆಸ್ಟಿಕ್ ಸೇರಿದಂತೆ ವಿವಿಧಡೆ ತುಂತುರು ಮಳೆ ಆಗಿದೆ. ಇದೇ ರೀತಿಯ ವಾತಾವರಣ ಮುಂದಿನ ಮೂರು ದಿನ ಇರಲಿದ್ದು, ಗರಿಷ್ಠ ತಾಪಮಾನ 27ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20ಡಿಗ್ರಿ ಸೆಲ್ಸಿಯಸ್ ವಾತಾವರಣ ಕಂಡು ಬರಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.












Click it and Unblock the Notifications