ಹೊಟೇಲ್ ಮಾಲೀಕರಿಗೆ ಸಚಿವ ಖಾದರ್ ಎಚ್ಚರಿಕೆ
ಬೆಂಗಳೂರು, ಮೇ 9: ಆಹಾರ ಪದಾರ್ಥಗಳ ವ್ಯಾಪಾರ ಮಾಡುವ ಅದರಲ್ಲೂ ಪ್ರಮುಖವಾಗಿ ಹೊಟೇಲ್ ಮತ್ತು ಕಾಂಡಿಮೆಂಟ್ಸ್ ಮಾಲೀಕರಿಗೆ ಸಚಿವ ಯು ಟಿ ಖಾದರ್ ಕಟ್ಟೆಚ್ಚರ ನೀಡಿದ್ದಾರೆ. ಶುಚಿತ್ವ ಕಾಪಾಡಿಕೊಳ್ಳಿ, ಇಲ್ಲದಿದ್ದರೆ ದಂಡ ತೆರಲು ಸಜ್ಜಾಗಿ ಎಂದು ಎಚ್ಚರಿಕೆ ನೀಡಿದ್ದಾರೆ.
ಎಲ್ಲಾ ವ್ಯಾಪರಸ್ಥರು ಶುಚಿತ್ವ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಆರೋಗ್ಯಕ್ಕೆ ಹಾನಿಯಾಗುವಂತಹ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ದಂಡದ ಜೊತೆಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ (ಮೇ 9) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಚಿವ ಖಾದರ್, ಆಹಾರ ಸುರಕ್ಷತೆ ಕಾಯ್ದೆಯನ್ವಯ ಪದಾರ್ಥಗಳ ಶುಚಿತ್ವ ಮತ್ತು ಗುಣಮಟ್ಟ ಕಾಪಾಡಿಕೊಳ್ಳಲು ನಮ್ಮ ಸರಕಾರ ವಿಶೇಷ ಒತ್ತು ನೀಡುತ್ತಿದೆ. ಕಾನೂನನ್ನು ಉಲ್ಲಂಘಿಸುವವರ ವಿರುದ್ದ ಕಾನೂನು ರೀತಿಯಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. (ಸಚಿವ ಖಾದರ್ ಬೇಜಾರ್ ಮಾಡಿಕೊಂಡ್ರು)

ಗುಣಮಟ್ಟದ ಆಹಾರ ಪದಾರ್ಥಗಳು ಗ್ರಾಹಕರಿಗೆ ಸಿಗಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿದ್ದ ಆಯುಕ್ತರನ್ನು ಹೆಚ್ಚುವರಿಯಾಗಿ ಆಹಾರ ಸುರಕ್ಷತಾ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಚಿವ ಖಾದರ್ ಹೇಳಿದ್ದಾರೆ.
ಇಲಾಖೆಯ ಅಧಿಕಾರಿಗಳು ತಿಂಗಳಿಗೊಮ್ಮೆಯಂತೆ ಸಭೆ ಸೇರಿ ಹೋಟೇಲ್ ಮತ್ತಿತರ ಕಡೆ ಆಹಾರ ಪದಾರ್ಥಗಳ ಗುಣಮಟ್ಟ ಮತ್ತು ಸುತ್ತಮುತ್ತಲ ಪರಿಸರ ನೈರ್ಮಲ್ಯದ ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆಂದು ಸಚಿವರು ಹೇಳಿದ್ದಾರೆ.












Click it and Unblock the Notifications