ಕರ್ನಾಟಕ ಹಸಿವು ಮುಕ್ತವಾಗಿಲ್ಲ, ಭ್ರಷ್ಟರ ರಾಜ್ಯವಾಗಿದೆ: ಎಚ್ಡಿಕೆ ಆರೋಪ
ಬೆಂಗಳೂರು, ಫೆಬ್ರವರಿ 10 : ಹಸಿವು ಮುಕ್ತ, ಭಯಮುಕ್ತ ರಾಜ್ಯವನ್ನು ನಿರ್ಮಾಣ ಮಾಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳಿದೆ, ಆದರೆ ಕರ್ನಾಟಕದಲ್ಲಿರುವುದು ಭಷ್ಟರು ಮತ್ತು ಲೂಟಿಕೋರರು ಇವರ ಮಧ್ಯೆ ಭಯಮುಕ್ತ ರಾಜ್ಯ ನಿರ್ಮಾಣ ಸಾಧ್ಯವೇ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಶವಂಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ತಮ್ಮ ಮಾತಿನುದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಕಾಂಟ್ರೋವರ್ಸಿ ಯಾಕೆ, ನನ್ನ ಕನಸುಗಳನ್ನು ಜನರಿಗೆ ತಿಳಿಸಿ: ಎಚ್ ಡಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನು ಅಧಿಕಾರಕ್ಕೆ ಬಂದ ತಕ್ಷಣ ಉಚಿತವಾಗಿ ಅನ್ನಭಾಗ್ಯ ಯೋಜನೆ ಘೋಷಣೆ ಮಾಡುವ ಮೂಲಕ ಕರ್ನಾಟಕವನ್ನು ಹಸಿವು ಮುಕ್ತ ಮಾಡಿದ್ದೇನೆ ಎನ್ನುತ್ತಿದ್ದಾರೆ. ಇದು ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆಯಂತಾಗಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರ ಕೆಲಸಕ್ಕಿಂತ ಹೆಚ್ಚು ಪುಕ್ಕಟೆ ಪ್ರಚಾರವನ್ನೇ ಮಾಡುತ್ತಿದೆ. ಕರ್ನಾಟಕದಲ್ಲಿ ಎಲ್ಲೆಲ್ಲಿ ಭಯದ ವಾತಾವರಣವಿದೆ ಎಂದು ಕಾಂಗ್ರೆಸ್ ನಾಯಕರು ನನ್ನ ಬಳಿ ಬಂದರೆ ದಾಖಲೆಗಳ ಸಮೇತ ನೀಡುತ್ತೇನೆ. ಯಾರಾದರೂ ಬರಲಿ ಎಂದು ಪಂಥಾಹ್ವಾನ ನೀಡಿದರು. 48 ರೂ.ಗೆ ಸಿಗುತ್ತಿದ್ದ ಅಕ್ಕಿಯನ್ನು ನಿಮಗೆ ನೀಡುತ್ತಿದ್ದಾರೆ. ಈ ರಾಜ್ಯ ಸರ್ಕಾರ ಕಡಿಮೆ ಮಾಡಿರುವುದು ಕೇವಲ 48 ರೂ. ಮಾತ್ರ. ಆದರೆ 84 ರೂ.ಗಳ ಪ್ರಚಾರ ಪಡೆಯುತ್ತಿದ್ದಾರೆ. ಇವರೇನೊ 100 ರೂ. ಕಡಿಮೆ ಮಾಡಿ ಅನ್ನಭಾಗ್ಯ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರು.