ಕೊಬ್ಬರಿ ದರ ಕುಸಿತ: ಬೆಂಬಲ ಬೆಲೆ ಘೋಷಿಸದಿದ್ದರೆ ಧರಣಿ ಕೂರ್ತೇನೆ ಎಂದ ಹೆಚ್ಡಿ ರೇವಣ್ಣ
ಬೆಂಗಳೂರು, ಜುಲೈ 5: ಕೊಬ್ಬರಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದು ಈ ಬಗ್ಗೆ ವಿಧಾನಸಭೆಯಲ್ಲಿ ಕೂಡ ದನಿ ಎತ್ತಲಾಗಿದೆ. ಕೊಬ್ಬರಿಗೆ ಬೆಂಬಲ ಬೆಲೆ ನೀಡಬೇಕು ಇಲ್ಲದಿದ್ದರೆ ಇಲ್ಲೇ ಪ್ರತಿಭಟನೆ ಮಾಡುತ್ತೇನೆ ಎಂದು ಹೊಳೆನರಸೀಪುರ ಶಾಸಕ ಹೆಚ್.ಡಿ. ರೇವಣ್ಣ ಆಗ್ರಹಿಸಿದ್ದಾರೆ.
ಇವತ್ತೇ ಕೊಬ್ಬರಿಗೆ ಬೆಂಬಲ ಬೆಲೆ ನಿರ್ಧರಿಸಬೇಕು ಇಲ್ಲದಿದ್ದರೇ ಇಲ್ಲೇ ಪಂಚೆ ಹಾಸಿಕೊಂಡು ಮಲಗುವುದಾಗಿ ಎಚ್ಚರಿಕೆ ನೀಡಿದರು. ವಿಧಾನಸಭೆಯಲ್ಲಿ ಮಾತನಾಡಿದ ಅವರು, ಸ್ಪೀಕರ್ ಯು.ಟಿ. ಖಾದರ್ ರಾತ್ರಿ ಊಟ ಹಾಕಿಸುತ್ತಾರೆ. ಇಂದು ಕೊಬ್ಬರಿಗೆ ಬೆಂಬಲ ಬೆಲೆ ನಿರ್ಧಾರ ಮಾಡದಿದ್ದರೆ, ಸದನದಲ್ಲಿ ಅಹೋರಾತ್ರಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದ 13 ಜಿಲ್ಲೆಗಳಲ್ಲಿ 10 ರಿಂದ 12 ಲಕ್ಷ ಎಕರೆ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ತುಮಕೂರು ಜಿಲ್ಲೆಯೊಂದರಲ್ಲೇ 3 ರಿಂದ 3.5 ಲಕ್ಷ ಎಕರೆ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ 2 ಲಕ್ಷ ಎಕರೆ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಇವತ್ತು ಕೊಬ್ಬರಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ ಸರ್ಕಾರ ಅವರ ನೆರವಿಗೆ ಧಾವಿಸಬೇಕು ಎಂದು ಹೇಳಿದರು.
ಸರ್ಕಾರ ನೆರವಿಗೆ ಬರುವಂತೆ ಒತ್ತಾಯ
ಕೊಬ್ಬರಿಗೆ ಬೆಲೆ ಇಲ್ಲದ ಕಾರಣ ಅಡಿಕೆ ಬೆಳೆಯುತ್ತಿದ್ದಾರೆ. ತೆಂಗಿನ ಕಾಯಿ ಬೆಲೆ 8 ರೂಪಾಯಿಗೆ ಬಂದಿದೆ, ಎಳನೀರನ್ನು 18-20 ರೂಪಾಯಿಗೆ ಕೊಯ್ಲು ಮಾಡಿ ಬೆಂಗಳೂರಿಗೆ ತಂದು 40 ರೂಪಾಯಿಗೆ ಮಾರುತ್ತಿದ್ದಾರೆ. ಬಾಂಬೆಗೆ ಇಲ್ಲಿಂದ ಎಳನೀರು ಹೋಗುತ್ತಿದೆ ಅಲ್ಲಿ ಒಂದು ಎಳನೀರಿಗೆ 75-80 ರೂಪಾಯಿ ಬೆಲೆ ಇದೆ. ಆದರೆ ರೈತರಿಗೆ ಸಿಗ್ತಿರೋದು ಮಾತ್ರ 17-18 ರೂಪಾಯಿ ಎಂದು ಹೇಳಿದರು.
ತೆಂಗಿನ ಗಿಡಕ್ಕೆ ವಿವಿಧ ರೋಗಬಾಧೆ ಕಾಡುತ್ತಿದೆ, ತೆಂಗಿನ ಕಾಯಿ 8 ರೂಪಾಯಿಗೆ ಬಂದಿದೆ. ಕೇಂದ್ರ ಸರ್ಕಾರ 11,500 ಬೆಂಬಲ ಬೆಲೆ ನಿಗದಿ ಮಾಡಿದೆ. ವಿವಿಧ ಜಿಲ್ಲೆಗಳಲ್ಲಿ ತೆಂಗು ಬೆಳೆಯ ಲೆಕ್ಕ ಕೊಟ್ಟ ಅವರು, ಹಲವು ರೈತರು ತೆಂಗನ್ನೇ ನಂಬಿ ಜೀವನ ಮಾಡುತ್ತಿದ್ದಾರೆ. ಇವರ ನೆರವಿಗೆ ಸರ್ಕಾರ ಬರಬೇಕು ಎಂದರು.
ತೋಟಗಾರಿಕೆ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿಲ್ಲ. ದೊಡ್ಡವರಿಂದ ಸಣ್ಣವರಿಗೂ ಐದು ಭಾಗ್ಯಗಳನ್ನು ಕೊಡಿ ಊಟ ಮಾಡಿಕೊಂಡು ಆರಾಮಾಗಿ ಇರಿ. ಇಲ್ಲವಾದಲ್ಲಿ ತೆಂಗನ್ನು ತಂದು ವಿಧಾನಸೌಧದ ಮುಂದೆ ಸುರಿಯುತ್ತೇವೆ. ಎಲ್ಲರಿಗೂ ಹಂಚಿ ಎಂದು ಹೇಳಿದರು.
15 ಸಾವಿರ ಬೆಂಬಲ ಕೊಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ಕೊಟ್ಟಿದ್ದರು ಅದರಂತೆ ಬೆಂಬಲ ಬೆಲೆ ಕೊಡಿ ಎಂದು ಹೇಳಿದರು. ಇವತ್ತೇ ಕೊಬ್ಬರಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು, ನಿಮ್ಮ ಗ್ಯಾರಂಟಿ ಜೊತೆ ನಾವಿದ್ದೇವೆ, ಗ್ಯಾರಂಟಿಗಳ ಬಗ್ಗೆ ನಾವು ಮಾತನಾಡುವುದಿಲ್ಲ. ನಾವು ನಿಮಗೆ ಸಂಪೂರ್ಣವಾಗಿ ಬೆಂಬಲ ಕೊಡುತ್ತೇವೆ ಇವತ್ತು ಇದನ್ನು ಜಾರಿಗೆ ತರಬೇಕು, ಇಲ್ಲವಾದಲ್ಲಿ ಧರಣಿ ಮಾಡುತ್ತೇವೆ ಎಂದು ಹೇಳಿದರು.
ಕುಮಾರಸ್ವಾಮಿ ಒತ್ತಾಯ
ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಕೂಡ ಒತ್ತಾಯಿಸಿದ್ದಾರೆ. ಈಗಾಗಲೇ 11,700 ರೂಪಾಯಿ ಬೆಂಬಲ ಬೆಲೆ ಇದ್ದು, ಅದರ ಜೊತೆಗೆ ಕನಿಷ್ಠ 3000 ರೂಪಾಯಿ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು. ಇವತ್ತು ದುಡ್ಡಿಗೆ ಸಮಸ್ಯೆ ಇಲ್ಲ, ಈ ಸರ್ಕಾರಕ್ಕೆ ಆರ್ಥಿಕ ಕೊರತೆ ಇಲ್ಲ, ಆದ್ದರಿಂದ ರೈತರ ಸಹಾಯಕ್ಕೆ ಧಾವಿಸುವಂತೆ ಆಗ್ರಹಿಸಿದರು.












Click it and Unblock the Notifications