ಸಿದ್ದರಾಮಯ್ಯ ಅವರದ್ದು ತುಘಲಕ್ ದರ್ಬಾರ್ : ಎಚ್ಡಿಕೆ
ಬೆಂಗಳೂರು, ಅ.05: ನಾಡ ಹಬ್ಬ ಮೈಸೂರು ದಸರಾ ವಿಚಾರದಲ್ಲಿ ಸರ್ಕಾರದ ಆಷಾಡಭೂತಿತನ ಬಯಲಾಗಿದ್ದು, ಇದು ಸರ್ಕಾರದ ತುಘಲಕ್ ದರ್ಬಾರನ್ನು ತೋರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ದಸರಾ ಉತ್ಸವದ ಬಗ್ಗೆ ಸರ್ಕಾರ ಉಂಟು ಮಾಡಿದ ಗೊಂದಲದ ಬಗ್ಗೆ ಯದುವಂಶದ ಇತಿಹಾಸ ತಜ್ಞ, ಅರಸು ಮನೆತನ ಹಿರಿಯರೂ ಆದ ಪ್ರೊ.ನಂಜರಾಜ ಅರಸ್ ಅವರು ಮಾಧ್ಯಮಗಳಿಗೆ ನೀಡಿದ ಸಂದರ್ಶನವನ್ನು ನೋಡಿದ್ದೇವೆ. ಅವರು ಈ ಸರ್ಕಾರ ತಲೆ ಇಲ್ಲದ ತುಘಲಕ್ ಸರ್ಕಾರ ಎಂದಿದ್ದಾರೆ. ಅವರು ಹೇಳಿಕೆಯನ್ನು ನಾನು ಅನುಮೋದಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.[ವಿಜಯ ದಶಮಿಯಂದೇ ಜಂಬೂ ಸವಾರಿ: ಶ್ರೀನಿವಾಸ ಪ್ರಸಾದ್]
ನಾಡ ಹಬ್ಬ ಮೈಸೂರು ದಸರಾ ಎಲ್ಲಾ ಜನರ ಭಾವನಾತ್ಮಕ ವಿಚಾರ. ಇದನ್ನು ತಿಳಿಯದೆ ಸರ್ಕಾರವು ತಮ್ಮ ಆಪ್ತವಲಯದ ಗೌಪ್ಯ ಜ್ಯೋತಿಷಿಗಳು ಹೇಳಿದರು ಎಂಬ ಕಾರಣಕ್ಕೆ ವಿಶ್ವ ವಿಖ್ಯಾತ ಜಂಬೂ ಸವಾರಿ ದಿನವನ್ನೇ ಬದಲಿಸಿ ಜನರಲ್ಲಿ ಗೊಂದಲ ಉಂಟು ಮಾಡಲು ಸರ್ಕಾರ ಮುಂದಾಗಿತ್ತು. ಇದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗಿದ್ದರಿಂದ ಎಂದಿನಂತೆ ಅಕ್ಟೋಬರ್ 23ರಂದೇ ಜಂಬೂ ಸವಾರಿ ನಡೆಯುತ್ತದೆ ಎಂದು ನಿಲುವು ಬದಲಿಸುತ್ತದೆ. ನಿಜಕ್ಕೂ ಇದು ತುಲಘಕ್ ಸರ್ಕಾರವೇ ಆಗಿದೆ ಎಂದರು.

ಸಮಾಜವಾದದ ಮುಖವಾಡ ಕಳಚಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತವಲಯದ ಗೌಪ್ಯ ಜ್ಯೋತಿಷಿಗಳು ಹೇಳಿದರು ಎನ್ನುವ ಕಾರಣಕ್ಕೆ ಜಂಬೂ ಸವಾರಿ ದಿನ ಬದಲಿಸಿದ್ದರು ಎನ್ನುವುದು ಗೊತ್ತಾಗಿದ್ದು, ಇದರೊಂದಿಗೆ ಸಿದ್ದರಾಮಯ್ಯ ಅವರು ಸಮಾಜವಾದದ ಮುಖವಾಡ ಕಳಚಿದೆ. ಆಶಾಡಭೂತಿತನ ಬಯಲಾದಂತಾಗಿದೆ ಎಂದು ಕುಮಾರಸ್ವಾಮಿ ಜರಿದರು. [ದಸರಾ ಉದ್ಘಾಟಿಸುವ ರೈತ ಪುಟ್ಟಯ್ಯ ಪರಿಚಯ]
ಈ ಸರ್ಕಾರ ಅನೇಕ ವಿಚಾರಗಳಲ್ಲಿ ಸ್ಪಷ್ಟ ನಿಲುವು, ಧೋರಣೆಗಳಿಲ್ಲದೆ ಜನರ ಮುಂದೆ ಬೆತ್ತಲಾಗಿದೆ. ರಾಜ್ಯದಲ್ಲಿ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸುವುದಾಗಿ ಹೇಳಿತ್ತು. ಆಗಲಿಲ್ಲ. ಅದ್ದೂರಿ ವಿವಾಹಗಳನ್ನು ತಡೆಯುವ ಕಾಯ್ದೆ ತರುವುದಾಗಿ ಹೇಳಿತ್ತು. ಅದನ್ನೂ ಜಾರಿ ಮಾಡಲಿಲ್ಲ. ಹಾಗೆಯೇ ಧರ್ಮಸ್ಥಳ ಶ್ರೀ ಕ್ಷೇತ್ರವನ್ನು ಮುಜರಾಜಿ ಇಲಾಖೆ ವ್ಯಾಪ್ತಿಗೆ ಒಳಪಡಿಸುವುದಾಗಿ ಹೇಳಿತ್ತು. ಮಠಗಳನ್ನು ಸರ್ಕಾರದ ನಿಯಂತ್ರಣಕ್ಕೆ ತರುವ ಬಗ್ಗೆಯೂ ನಿರ್ಧಾರ ಪ್ರಕಟಿಸಿತ್ತು.
ಆದರೆ, ಈ ಎಲ್ಲಾ ಘೋಷಣೆಗಳಿಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಸರ್ಕಾರ ಕಾರಣ ನೀಡದೆ ಹಿಂದೆ ಸರಿಯಿತು. ದಿಢೀರ್ ನಿಲುವು ಬದಲಿಸಿತು. ಅದೇರೀತಿ ದಸರಾ ವಿಚಾರದಲ್ಲೂ ಜನರಿಂದ ವಿರೋಧ ಉಂಟಾಗುತ್ತಿದ್ದಂತೆ ನಿಲುವು ಬದಲಾಗಿದೆ. ಅಂದರೆ ಈ ಸರ್ಕಾರಕ್ಕೆ ಒಂದು ಗೊತ್ತು ಗುರಿ ಇಲ್ಲ. ಇದು ತಲೆ ಇಲ್ಲದ ತುಘಲಕ್ ಸರ್ಕಾರ ಎನ್ನುವುದು ಸ್ಪಷ್ಟವಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.












Click it and Unblock the Notifications