ಮಂಗಳೂರು ಗೋಲಿಬಾರ್: ಸರ್ಕಾರವನ್ನು ಬೆತ್ತಲು ಮಾಡಿದ ಕುಮಾರಸ್ವಾಮಿ
ಬೆಂಗಳೂರು, ಫೆಬ್ರವರಿ 19: ಮಂಗಳೂರು ಗೋಲಿಬಾರ್ ಪ್ರಕರಣ ಇಂದು ವಿಧಾನಸಭೆಯಲ್ಲಿ ವಿಸ್ತೃತವಾಗಿ ಚರ್ಚೆಯಾಯಿತು, ಗದ್ದಲ, ಪರಸ್ಪರ ಆರೋಪ ಪ್ರತ್ಯಾರೋಪಗಳಿಗೂ ಕಾರಣವಾಯಿತು.
ಮಂಗಳೂರು ಗಲಭೆ ನಡೆದಾಗಿನಿಂದಲೂ ಪ್ರಕರಣದ ಬಗ್ಗೆ ವಿಶೇಷ ಆಸ್ಥೆವಹಿಸಿದ್ದ ಕುಮಾರಸ್ವಾಮಿ, ಮಂಗಳೂರು ಗಲಭೆ ಬಗ್ಗೆ ತಾವು ಸಂಗ್ರಹಿಸಿದ್ದ ಎಲ್ಲ ಮಾಹಿತಿಯನ್ನೂ ವಿಧಾನಸಭೆಯಲ್ಲಿ ಹೊರಗೆಡವಿ, ಗೃಹ ಇಲಾಖೆ ಹೇಳಿದ್ದ ಸುಳ್ಳುಗಳನ್ನು ಬಯಲಿಗೆಳೆದರು.
ಸುಮಾರು ಒಂದು ಗಂಟೆ ಮಾತನಾಡಿದ ಕುಮಾರಸ್ವಾಮಿ, ಮಾಧ್ಯಮಗಳ ವರದಿಗಳು, ದಿನಪತ್ರಿಕೆ ವರದಿಗಳು, ತಾವು ಮಾಡಿದ ತನಿಖೆ ಮಾಹಿತಿ, ಸರ್ಕಾರಿ ಮಾಹಿತಿ, ಪೊಲೀಸ್ ಅಧಿಕಾರಿಗಳ ಹೇಳಿಕೆಗಳು ಎಲ್ಲವನ್ನೂ ಸದನದ ಮುಂದಿಟ್ಟು ತರ್ಕಬದ್ಧವಾಗಿ ವಾದ ಮಂಡಿಸಿದರು. ಘಟನೆಯನ್ನು ಎಳೆ-ಎಳೆಯಾಗಿ ವಿವರಿಸಿದರು.
ಪ್ರತಿಭಟನಾಕಾರರದ್ದೇ ತಪ್ಪು ಎಂದು ಬಿಂಬಿಸಲು ಪೊಲೀಸರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ವಿಡಿಯೋ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ವಿಡಿಯೋದಲ್ಲಿ ಸಾಕಷ್ಟು ತಪ್ಪು ಮಾಹಿತಿಗಳಿತ್ತು, ಎಂದು ಉದಾಹರಣೆಗಳ ಮೂಲಕ ವಿವರಿಸಿದರು.

ಪೊಲೀಸರು ಲಾಠಿ ಬೀಸುವವರೆಗೂ ಕಲ್ಲು ತೂರಾಟ ಆಗಿರಲಿಲ್ಲ
ಪೊಲೀಸರು ಲಾಠಿ ಬೀಸುವವರೆಗೂ ಪ್ರತಿಭಟನೆಯಲ್ಲಿ ಕಲ್ಲು ತೂರಾಟ ನಡೆದಿರಲಿಲ್ಲ, ಲಾಠಿ ಬೀಸಿ, ರಸ್ತೆ ಬದಿ ಅಂಗಡಿಗಳವರ ಮೇಲೆ ದೌರ್ಜನ್ಯ ನಡೆಸಿ ಒಂದು ರೀತಿಯಲ್ಲಿ ಗಲಭೆಗೆ ಪ್ರಚೋದನೆ ನೀಡಿದ್ದಾರೆ. ನಂತರ ಪೊಲೀಸರೇ ಗೋಲಿಬಾರ್ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪ ಮಾಡಿದರು.

ದಾಖಲೆಗಳನ್ನು ನೀಡಿದ ಕುಮಾರಸ್ವಾಮಿ
ತಮ್ಮ ಹೇಳಿಕೆಗೆ ಪೂರಕವಾಗಿ ವಿಧಾನಸಭೆಯಲ್ಲಿ ದಾಖಲೆಗಳನ್ನೂ ನೀಡಿದ ಕುಮಾರಸ್ವಾಮಿ, ಪೊಲೀಸರು ಘಟನೆ ಸಂದರ್ಭ ನೀಡಿದ್ದ ಹೇಳಿಕೆಗಳು ಸುಳ್ಳೆಂದರು. ಪೊಲೀಸರಿಗೆ ಗಾಯ ಆಗಿದ್ದು, ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಬಂದೂಕು ಕಿತ್ತುಕೊಳ್ಳಲು ಯತ್ನಿಸಿದರು ಎಂಬುದೆಲ್ಲಾ ಪೊಲೀಸರು ಹೇಳಿದ ಸುಳ್ಳು ಎಂದು ಕುಮಾರಸ್ವಾಮಿ ಹೇಳಿದರು.

ಗೋಲಿಬಾರ್ ಸತ್ತವರ ಲೆಕ್ಕಾ ಮಾತ್ರ ಕೊಟ್ಟರು, ಗಾಯಗೊಂಡವರು?
ಗೋಲಿಬಾರ್ ನಲ್ಲಿ ಇಬ್ಬರು ಸತ್ತರು ಎಂಬುದನ್ನು ಮಾತ್ರವೇ ಪೊಲೀಸರು ಬಹಿರಂಗಗೊಳಿಸಿದರು. ಆದರೆ ಹತ್ತು ಮಂದಿ ಗೋಲಿಬಾರ್ ನಿಂದ ಗಾಯಗೊಂಡಿದ್ದರು. ಆದರೆ ಒಬ್ಬ ಸರ್ಕಾರಿ ಅಧಿಕಾರಿ ಸಹ ಅವರನ್ನು ಭೇಟಿ ಮಾಡಿಲ್ಲ, ಅವರ ಕಷ್ಟಕ್ಕೆ ಆಗಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಪೊಲೀಸ್ ಆಯುಕ್ತರ ಗೊಂದಲಮಯ ಹೇಳಿಕೆ
ಪೊಲೀಸ್ ಆಯುಕ್ತರು ನೀಡಿದ್ದ ಗೊಂದಲಮಯ ಹೇಳಿಕೆಗಳನ್ನು ಪ್ರಸ್ತಾಪ ಮಾಡಿದ ಕುಮಾರಸ್ವಾಮಿ, 'ಮೊದಲಿಗೆ ಬಂದರು ಪೊಲೀಸ್ ಠಾಣೆಗೆ ನುಗ್ಗಲು ಯತ್ನಿಸಿದರು ಎಂದು ಪೊಲೀಸ್ ಆಯುಕ್ತರು ಹೇಳಿಕೆ ನೀಡಿದರು ನಂತರ ಅಂಗಡಿ ಒಂದರಿಂದ ಏರ್ಗನ್ ದೋಚುವ ಯತ್ನ ಮಾಡಿದರು ಎಂದರು' ಎಂದು ಹೇಳಿದರು.

'ಗೋಲಿಬಾರ್ ನಲ್ಲಿ ಮೃತಪಟ್ಟ ವ್ಯಕ್ತಿಗಳಿಗೆ ಪರಿಹಾರ ಕಿತ್ತುಕೊಂಡಿರಿ'
ಗೋಲಿಬಾರ್ ನಲ್ಲಿ ಮೃತಪಟ್ಟ ವ್ಯಕ್ತಿಗಳಿಗೆ ನೀಡಲಾಗಿದ್ದ ಪರಿಹಾರದ ಹಣವನ್ನು ಹಿಂಪಡೆದ ಸಿಎಂ ಕ್ರಮವನ್ನು ಖಂಡಿಸಿದ ಕುಮಾರಸ್ವಾಮಿ, 'ಸಂಘಟನೆಗಳು ಒತ್ತಾಯಿಸಿದ್ದರಿಂದ ಪರಿಹಾರ ಹಣ ಹಿಂಪಡೆದುದಾಗಿ ಹೇಳಿದಿರಿ, ಸಿಎಂ ಮೇಲೆ ಒತ್ತಡ ಹೇರಿದ ಸಂಘಟನೆಗಳು ಯಾವುವು ಎಂದು ಬಹಿರಂಗಪಡಿಸಿ' ಎಂದು ಹೇಳಿದರು.












Click it and Unblock the Notifications