‘ಇಂಡಿಯಾ’ ಹೆಸರಲ್ಲಿ ಕರ್ನಾಟಕದ ಸಂಪತ್ತು ಲೂಟಿ: ಕುಮಾರಸ್ವಾಮಿ!
ಬೆಂಗಳೂರು: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ನಾಯಕರು & ಕಾಂಗ್ರೆಸ್ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಪದೇ ಪದೆ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಮಾಜಿ ಸಿಎಂ ಎಚ್ಡಿಕೆ ಇಂದು ಹೊಸ ಬಾಂಬ್ ಸಿಡಿಸಿದ್ದಾರೆ. ಹಾಗಾದರೆ ಮಾಜಿ ಸಿಎಂ ಕುಮಾರಸ್ವಾಮಿ ಸಿಡಿಸಿದ ಹೊಸ ಬಾಂಬ್ ಏನು?
ಹೌದು, ಕಾಸಿಗಾಗಿ ಪೋಸ್ಟಿಂಗ್ & ಗುತ್ತಿಗೆದಾರರಿಂದ ಹಣ ಸುಲಿಗೆ ಸೇರಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಲವು ಗಂಭೀರ ಆರೋಪ ಮಾಡಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತೆ ಹೊಸ ಬಾಂಬ್ ಸಿಡಿಸಿದ್ದಾರೆ. ರಿಯಲ್ ಎಸ್ಟೇಟ್ ಕುಳಗಳು ಹಾಗೂ ಬಿಲ್ಡ್ಗಳಿಂದ ಕಾಂಗ್ರೆಸ್ ಸರ್ಕಾರದ ಪ್ರಭಾವಿಗಳು 2,000 ರೂಪಾಯಿ ಸುಲಿಗೆ ಮಾಡಲು ಹೊರಟಿದ್ದಾರೆ ಎಂದು ಇದೀಗ ಎಚ್ಡಿಕೆ ಸ್ಫೋಟಕ ಆರೋಪ ಮಾಡಿದ್ದಾರೆ. ಹಾಗಾದ್ರೆ ಮಾಜಿ ಸಿಎಂ ಕುಮಾರಸ್ವಾಮಿ ಈ ಆರೋಪ ಮಾಡಿದ್ದು ಎಲ್ಲಿ? ಮುಂದೆ ಓದಿ.

ಲೋಕಸಭಾ ಚುನಾವಣೆಗೆ ವಸೂಲಿ ಆರೋಪ
ಅಷ್ಟಕ್ಕೂ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಎಚ್ಡಿಕೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಬೆಂಗಳೂರಿನಲ್ಲಿ ಬಿಲ್ಡರ್ಗಳ ಸಭೆ ಮಾಡಿರುವ ಪ್ರಭಾವಿಗಳು, ಲೋಕಸಭೆ ಚುನಾವಣೆ ನೆಪ ಇಟ್ಟುಕೊಂಡು ಬಿಲ್ಡರುಗಳಿಂದ ಪ್ರತೀ ಚದರ ಅಡಿಗೆ 100 ರೂಪಾಯಿ ಲೆಕ್ಕದಲ್ಲಿ ವಸೂಲಿಗೆ ಇಳಿದಿದ್ದಾರೆ. ಆ ಮೂಲಕ ಭರ್ತಿ 2,000 ಕೋಟಿ ರೂಪಾಯಿ ಸಂಗ್ರಹಕ್ಕೆ ಗುರಿ ಇಟ್ಟುಕೊಂಡಿದ್ದಾರೆ ಎಂದು ಮಾಜಿ ಸಿಎಂ ಇದೇ ವೇಳೆ ನೇರ ಆರೋಪ ಮಾಡಿದ್ರು.
ಹೆಸರಿಗೆ ʼಇಂಡಿಯಾʼ ಎಂದು ಕೂಟ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿಯೇ ನಾಮಕರಣ ಮಾಡಿಕೊಂಡರು. ಅದೇ ʼಇಂಡಿಯಾʼ ಹೆಸರಲ್ಲಿ ನಾಡಿನ ಸಂಪತ್ತು ಲೂಟಿ ಮಾಡಲು ಅವರು ಹೊರಟಿದ್ದಾರೆ. ಬಿಲ್ಡರುಗಳ ಸಭೆ ನಡೆಸಿ ಇಷ್ಟಿಷ್ಟು ಕಪ್ಪ ಒಪ್ಪಿಸಲೇಬೇಕು ಎಂದು ಡಿಮ್ಯಾಂಡ್ ಮಾಡಿದ್ದಾರೆ. ಅವರಿಗೆ ಜನ ಪೆನ್ನು ಪೇಪರ್ ಕೊಟ್ಟಿದ್ದು ಹೀಗೆ ಸುಲಿಗೆ ಮಾಡಲಿಕ್ಕಾ? ಅಂತಾ ಯಾರ ಹೆಸರನ್ನೂ ಹೇಳದೆ ನೇರ ಆರೋಪ ಮಾಡಿದ್ದಾರೆ ಮಾಜಿ ಸಿಎಂ

2-3 ಲಕ್ಷ ಕೋಟಿ ಮೌಲ್ಯದ ಭೂಮಿ ಗುಳುಂ?
ಹಾಗೇ ಮತ್ತೊಂದ್ಕಡೆ ಬೆಂಗಳೂರು-ಮೈಸೂರು ಮೂಲಭೂತ ಕಾರಿಡಾರ್ ಯೋಜನೆ (ನೈಸ್ ರಸ್ತೆ) ಬಹುಕೋಟಿ ರೂಪಾಯಿಗಳ ದೊಡ್ಡ ಹಗರಣವಾಗಿದ್ದು, ಸುಮಾರು 2-3 ಲಕ್ಷ ಕೋಟಿ ರೂ. ಮೌಲ್ಯದ ಭೂಮಿಯನ್ನ ಪಟ್ಟಭದ್ರರು ನುಂಗಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ರೈತರಿಂದ ಕಸಿದುಕೊಂಡಿರುವ ಭೂಮಿಯನ್ನು ವಾಪಸ್ ಪಡೆದು ರೈತರಿಗೆ ಮರು ಹಸ್ತಾಂತರ ಮಾಡಬೇಕು. ನೈಸ್ ಅಕ್ರಮದಲ್ಲಿ ಈ ಸರ್ಕಾರದ ಪ್ರಭಾವಿ ಸಚಿವರೊಬ್ಬರು ನೇರ ಶಾಮೀಲಾಗಿದ್ದಾರೆ. ಆ ಕಂಪನಿ ಜತೆ ಕೈಜೋಡಿಸಿ ಸಾವಿರಾರು ಕೋಟಿ ರೂ. ಬೆಲೆಯ ರೈತರ ಭೂಮಿಯನ್ನು ಲೂಟಿ ಮಾಡಿದ್ದಾರೆ ಎಂದು ಎಚ್ಡಿಕೆ ಗಂಭೀರ ಆರೋಪ ಮಾಡಿದ್ರು.
ನನಗೂ ಪೆನ್ನು ಪೇಪರ್ ಕೊಡಿ ಎಂದು ಚುನಾವಣೆಗೂ ಮುನ್ನ ಜನರಿಗೆ ದುಂಬಾಲು ಬಿದ್ದಿದ್ದರು ಅವರು. ಆದರೆ ಇದೀಗ ಪೆನ್ನು, ಪೇಪರ್ ಸಿಕ್ಕಿದ ನಂತರ ಜನರ ಸಂಪತ್ತನ್ನು ಎಗ್ಗಿಲ್ಲದೆ ಲೂಟಿ ಹೊಡೆಯುತ್ತಿದ್ದಾರೆ. ಅವರು ಕೂಡ ನೈಸ್ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ.

14 ಸಾವಿರ ಎಕರೆ ಹೆಚ್ಚುವರಿ ಭೂಮಿ?
ರೈತರಿಂದ ಯೋಜನೆಗೆ 14 ಸಾವಿರ ಎಕರೆ ಭೂಮಿ ಹೆಚ್ಚುವರಿಯಾಗಿ ಪಡೆದಿದ್ದಾರೆ. ಅದನ್ನು ಕೂಡಲೇ ವಾಪಸ್ ಪಡೆಯಬೇಕು. ಸಿದ್ದರಾಮಯ್ಯ ಅವರೇ ಎರಡನೇ ಬಾರಿ ಸಿಎಂ ಆಗಿದ್ದಾರೆ. ಪೂರ್ಣ ಬಹುಮತವೂ ಇದೆ. ರೈತರ ಬಗ್ಗೆ ಕಾಳಜಿ ಇದ್ದರೆ, ಅವರನ್ನು ಉಳಿಸಬೇಕಲ್ಲವೇ? ಹಾಗಿದ್ದರೆ ಕೂಡಲೇ ಕ್ರಮ ತೆಗೆದುಕೊಳ್ಳಿ. ದಮ್ಮು, ತಾಕತ್ತಿನ ಬಗ್ಗೆ ಹೇಳುತ್ತೀರಲ್ಲ, ನಿಮಗೆ ದಮ್ಮು ತಾಕತ್ತು ಇದ್ದರೆ ರೈತರ ಜಮೀನು ವಾಪಸ್ ಪಡೆಯಿರಿ ಎಂದು ಮಾಜಿ ಸಿಎಂ ಸವಾಲು ಹಾಕಿದ್ದಾರೆ.
ಸಿಂಗಾಪುರಕ್ಕೆ ಬಂದಿದ್ದ ನೈಸ್ ಕುಳ
ನಾನೊಮ್ಮೆ ಸಿಎಂ ಆಗಿದ್ದಾಗ ಸಿಂಗಾಪುರಕ್ಕೆ ಅಧಿಕೃತ ಪ್ರವಾಸಕ್ಕೆ ಹೋಗಿದ್ದೆ. ಅಲ್ಲಿಗೆ ಈ ನೈಸ್ ಕಂಪನಿಯವನು ವ್ಯವಹಾರ ಕುದುರಿಸಲು ಬಂದಿದ್ದ ವಿಧಾನಸೌಧದ ಮೂರನೇ ಮಹಡಿಗೆ ಬಾ ಎಂದು ಉಗಿದು ಕಳಿಸಿದೆ. ಅವತ್ತು ನಾನು ಆ ಪಾಪದ ಕೆಲಸಕ್ಕೆ ಕೈ ಜೋಡಿಸಲಿಲ್ಲ. ಅಂದು ಈ ಬಗ್ಗೆ ನಾನೇನು ಅಂದುಕೊಂಡಿದ್ದೆನೋ ಈಗ ಅದೇ ನಡೆಯುತ್ತಿದೆ. ಟಿ.ಬಿ.ಜಯಚಂದ್ರ ಅವರು ಕೊಟ್ಟಿರುವ ಸದನ ಸಮಿತಿ ವರದಿ ಇದೆ. ಆ ವರದಿಯಲ್ಲಿ ನೈಸ್ ಅಕ್ರಮದ ವಿರಾಟ ರೂಪವೇ ತೆರೆದುಕೊಂಡಿದೆ. ಆಗ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದರೂ ಸದನ ಸಮಿತಿ ವರದಿ ಆಧಾರದ ಮೇಲೆ ಕ್ರಮ ಜರುಗಿಸಲಿಲ್ಲ ಎಂದು ಎಚ್ಡಿಕೆ ವಾಗ್ದಾಳಿ ನಡೆಸಿದರು.
ನೈಸ್ ರಸ್ತೆ ಬೇಕೆಂದು ಬಯಸಿದ್ದು ದೇವೇಗೌಡರೆ ಹಾಗೂ ಆ ಯೋಜನೆಯಲ್ಲಿ ರೈತರ ಭೂಮಿ ಹೊಡೆಯಲು ಹೊರಟಾಗ ಬೀದಿಗಿಳಿದು ಹೋರಾಟ ಮಾಡಿದ್ದು ಕೂಡ ದೇವೇಗೌಡರೇ. ಅವರು ರಸ್ತೆ ಆಗಲಿ ಎಂದು ಸಹಿ ಹಾಕಿದ್ದರು. ಆದ್ರೆ, ಇಲ್ಲೊಬ್ಬರು ನನ್ನನ್ನು ಅಣ್ಣಾ ಅಂತ ಕರೆಯುವ ವ್ಯಕ್ತಿ ರೈತರ ಭೂಮಿಯನ್ನ ಲಪಟಾಯಿಸಲು ಜನರಿಂದ ಪೆನ್ನು ಮತ್ತು ಪೇಪರ್ ಪಡೆದಿದ್ದು, ಪ್ರಾಣ ಇರುವವರೆಗೂ ಹೋರಾಟ ಮಾಡುತ್ತೇನೆ ಎಂದು ದೇವೇಗೌಡರು ಹೇಳಿದ್ದರು.

ವಿದ್ಯುತ್ ಖರೀದಿ ಅವ್ಯವಹಾರ ಆರೋಪ
ಕಾಂಗ್ರೆಸ್ ಸರ್ಕಾರ ಎಲ್ಲಾ ಇಲಾಖೆಗಳಲ್ಲೂ ಲೂಟಿಗೆ ಟಾರ್ಗೆಟ್ ಫಿಕ್ಸ್ ಮಾಡಿಕೊಂಡಿದೆ. ಈಗ ಇಂಧನ ಇಲಾಖೆಯಲ್ಲಿ ಮೇಯಲು ಹೊರಟಿದೆ. ವಿದ್ಯುತ್ ಖರೀದಿಗೆ ಹೊರಟಿದ್ದಾರೆ, ವಿದ್ಯುತ್ ಖರೀದಿ ಅಂದ್ರೆ ಇವರಿಗೆ ಹಬ್ಬ. ಖರೀದಿ ಮಾಡಿದಷ್ಟು ಕಿಕ್ ಬ್ಯಾಕ್ ಜಾಸ್ತಿ. ಪ್ರತಿ ತಿಂಗಳು 1500 ಕೋಟಿ ರೂ. ಖರ್ಚು ಮಾಡೋದಕ್ಕೆ ಹೊರಟಿದ್ದಾರೆ. ಇದರಲ್ಲಿ ಎಷ್ಟು ಹೊಡೆಯುತ್ತೀರಾ? ಎಂದು ಮಾಜಿ ಸಿಎಂ ಎಚ್ಡಿಕೆ ಪ್ರಶ್ನೆ ಮಾಡಿದ್ದಾರೆ.
ನುಡಿದಂತೆ ನಡೆದಿದ್ದೇವೆ ಎಂಬುದು ಸುಳ್ಳು
ರಾಜ್ಯದ ಉದ್ದಗಲಕ್ಕೂ ಅನಧಿಕೃತ ಲೋಡ್ ಶೆಡ್ಡಿಂಗ್ ಮಾಡ್ತಿದ್ದಾರೆ. ರೈತರಿಗೆ ಸೂಕ್ತ ವಿದ್ಯುತ್ ಕೊಡುತ್ತಿಲ್ಲ. ದೀಪಾವಳಿಗೆ ಮನೆಮನೆಗೂ ಮಣ್ಣಿನ ದೀಪ ಕೊಡಲು ಹೊರಟಿದ್ದಾರೆ. ಎಲ್ಲಿ ಕೊಟ್ರಿ 200 ಯುನಿಟ್ ವಿದ್ಯುತ್ ಶಿವಕುಮಾರ್, ಸಿದ್ದರಾಮಯ್ಯನವರೇ? ಕಾಕಾ ಪಾಟೀಲ್ ಗೂ ಫ್ರೀ, ಮಹಾದೇವಪ್ಪಗೂ ಫ್ರೀ ಅಂದರು. ಎಲ್ಲಿದೆ ಫ್ರೀ? ಸರಾಸರಿ ಅಂತ ಹೇಳಿಕೊಂಡು ಜನರಿಗೆ ಮೋಸ ಮಾಡುತ್ತಿದೆ ಈ ಸರ್ಕಾರ. ಆದರೂ ನುಡಿದಂತೆ ನಡೆದಿದ್ದೇವೆ ಎಂದು ಪೊಳ್ಳು ಹೇಳುತ್ತಿದ್ದಾರೆ ಎಂದು ಅವರು ಆರೋಪ ಮಾಡಿದರು.












Click it and Unblock the Notifications