ಚುನಾವಣೆ ಮೈತ್ರಿ ಬಗ್ಗೆ ದೇವೇಗೌಡರು ನೀಡಿದ ಸುಳಿವೇನು?
ಬೆಂಗಳೂರು, ಡಿ. 20: ಎಂಎಲ್ಸಿ ಎಲೆಕ್ಷನ್ ನಲ್ಲಿ ಯಾವುದೇ ಪಕ್ಷದೊಡನೆ ಮೈತ್ರಿ ಸಾಧ್ಯತೆ ಇಲ್ಲ. ಆದರೆ, ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಎಡಪಕ್ಷಗಳ ಜೊತೆ ಮೈತ್ರಿ ಸಾಧ್ಯತೆ ಬಗ್ಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಹೇಳಿದ್ದಾರೆ.
ಸಿಪಿಐ, ಸಿಪಿಎಂ ಹಾಗೂ ಬಿಎಸ್ಪಿಯೊಂದಿಗೆ ಸೀಟು ಹೊಂದಾಣಿಕೆಗೆ ಜೆದಿಎಸ್ ಸಿದ್ಧವಿದೆ ಎಂದು ಪದ್ಮನಾಭ ನಗರದಲ್ಲಿನ ತನ್ನ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಮುಂದೆ ಹೇಳಿದರು. ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲದೆ ಮುಂಬರುವ ವಿಧಾನಸಭೆ ಚುನಾವ ಣೆಯಲ್ಲಿಯೂ ಈ ಮೂರು ಪಕ್ಷಗಳೊಂದಿಗೆ ಚುನಾವಣಾ ಮೈತ್ರಿಗೆ ಜೆಡಿಎಸ್ ಸಮಾಲೋಚನೆ ನಡೆಸಲಿದೆ ಎಂದರು.[ಪರಿಷತ್ ಚುನಾವಣೆಯಲ್ಲಿ ಮೈತ್ರಿ ಇಲ್ಲ ಅಂದ್ರು ಗೌಡರು]

ಕೇರಳ ರಾಜ್ಯದಲ್ಲಿನ ಇನ್ನು 90 ದಿನಗಳಲ್ಲಿ ವಿಧಾನಸಭಾ ಚುನಾವಣೆ ಎದುರಾಗಲಿದ್ದು, ಆ ಸಂದರ್ಭದಲ್ಲಿ ಜೆಡಿಎಸ್, ಎಡಪಂಥೀಯ ಪಕ್ಷಗಳೊಂದಿಗೆ ಮೈತ್ರಿಯ ಬಗ್ಗೆ ಚರ್ಚೆ ನಡೆಸಲಿದೆ ಎಂದು ದೇವೇಗೌಡರು ಸುಳಿವು ನೀಡಿದರು.
ಜನತಾ ಪರಿವಾರ ಒಗ್ಗೂಡುವ ಬಗ್ಗೆ ಮಾತನಾಡಿದ ದೇವೇಗೌಡ, ಈ ವಿಷಯ ಈಗಲೇ ಚರ್ಚೆಯಾಗುವುದು ಬೇಡ. ಇದರಿಂದ ಕಾರ್ಯಕರ್ತರಲ್ಲಿ ಗೊಂದಲ ಮೂಡುತ್ತದೆ. ಜಾತ್ಯತೀತ ಶಕ್ತಿಗಳು ಒಂದಾಗಲು ಪ್ರಮಾಣಿಕ ಪ್ರಯತ್ನ ಹಾಗೂ ಸಮಾನ ಮನಸ್ಕರು ಬೇಕು. ಅನೇಕ ವರ್ಷಗಳಿಂದ ಈ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಈ ಬಗ್ಗೆ ಆತುರದ ನಿರ್ಧಾರ ಅಥವಾ ಘೋಷಣೆ ಅಪ್ರಸ್ತುತ. ಜನತಾ ಪರಿವಾರ ಒಗ್ಗೂಡುವುದಂತೂ ಸತ್ಯ ಎಂದರು. (ಒನ್ ಇಂಡಿಯಾ ಸುದ್ದಿ)












Click it and Unblock the Notifications