ಬೆಂಗಳೂರು ಪೊಲೀಸರಿಗೆ ಹೈಕೋರ್ಟ್ ಕಪಾಳಮೋಕ್ಷ: ಕಾರಣ ಇಲ್ಲಿದೆ ನೋಡಿ
ಬೆಂಗಳೂರು, ಆಗಸ್ಟ್ 3: ಬಿಬಿಎಂಪಿ ವ್ಯಾಪ್ತಿಯಲ್ಲಿನ ಅಕ್ರಮ ಫ್ಲೆಕ್ಸ್ ಹಾಗೂ ಹೋರ್ಡಿಂಗ್ಗಳನ್ನು ತೆರವುಗೊಳಿಸಲು ತೆರಳಿದ್ದ ಬಿಬಿಎಂಪಿ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಪ್ರಭಾವಿಗಳ ವಿರುದ್ಧ ಬೆಂಗಳೂರು ಪೊಲೀಸರು ಕ್ರಮ ಕೈಗೊಳ್ಳದೇ ಇರುವುದಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಶುಕ್ರವಾರ ಈ ಸಂಬಂಧ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಈವರೆಗೂ ಎಷ್ಟು ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದೀರಾ, ಪ್ರಭಾವಿಗಳ ವಿರುದ್ಧ ನಿಗಮೆ ಕೆಲಸ ಮಾಡಲು ಆಗುವುದಿಲ್ಲವೇ, ಸಾಧ್ಯವಾದರೆ ಕೆಲಸ ಮಾಡಿ ಇಲ್ಲವಾದಲ್ಲಿ ಬಿಟ್ಟುಹೋಗಿ ಎಂದು ತೀವ್ರ ಅಸಮಾದಾನ ಹೊರಹಾಕಿದರು.
ಅಷ್ಟೇ ಅಲ್ಲ ತಕ್ಷಣವೇ ಬೆಂಗಳೂರು ಪೊಲೀಸ್ ಆಯುಕ್ತರು ತಮ್ಮ ಮುಂದೆ ಹಾಜರಾಗಬೇಕೆಂದು ಕೂಡ ಆದೇಶ ಹೊರಡಿಸಿದರು.ಈ ಹಿನ್ನೆಲೆಯಲ್ಲಿ ಅಕ್ರಮ ಫ್ಲೆಕ್ಸ್ ಹಾಗೂ ಹೋರ್ಡಿಂಗ್ ತೆರವುಗೊಳಿಸುವ ವಿವಾದ ತೀವ್ರಗೊಂಡಿದ್ದು ಬಿಬಿಎಂಪಿ ಬುಧವಾರವಷ್ಟೇ ಹೈಕೋರ್ಟ್ ಆದೇಶದ ಮೇರೆಗೆ ನಗರದಲ್ಲಿ 50 ಸಾವಿರಕ್ಕೂ ಹೆಚ್ಚು ಫ್ಲೆಕ್ಸ್ ಹಾಗೂ ಹೋರ್ಡಿಂಗ್ಗಳನ್ನು ತೆರವುಗೊಳಿಸಿತ್ತು.
ಅದಾದ ಬಳಿಕ ಶಾಸಕ ಭೈರತಿ ಬಸವರಾಜ ಬೆಂಬಲಿಗರು ಬಿಬಿಎಂಪಿ ಸಿಬ್ಬಂದಿ ಮೇಲೆ ಫ್ಲೆಕ್ಸ್ ತೆರವು ಕಾರ್ಯಾಚರಣೆ ವೇಳೆ ಹಲ್ಲೆ ನಡೆಸಿದ್ದರು.ಈ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಹೈಕೋರ್ಟ್ ಕೂಡ ಶಾಸಕರ ಬೆಂಬಲಿಗರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದೆ ಹೀಗಾಗಿ ಬೆಂಗಳೂರು ಪೊಲೀಸರು ಇದೀಗ ಪ್ರಭಾವಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅನಿಯವಾರ್ಯವಾಗಿದೆ.
ನೂತನ ಶಾಸಕಿ ಸೌಮ್ಯಾ ರೆಡ್ಡಿ ನಿರ್ಧಾರಕ್ಕೆ ಬಹುಪರಾಕ್!
ವಿಚಾರಣೆಗೆ ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಹಾಜರಾಗಿದ್ದಾರೆ, ಒಂದೇ ಒಂದು ಅಕ್ರಮ ಫ್ಲೆಕ್ಸ್ ಕಂಡರೂ ಅದಕ್ಕೆ ಪೊಲೀಸರೇ ಹೊಣೆ ಎಂದು ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ವಿಭಾಗೀಯ ಪೀಠ ತರಾಟೆಗೆ ತೆಗೆದುಕೊಂಡಿತು.
ಫ್ಲೆಕ್ಸ್ ತೆರವು ಕೇವಲ ಬಿಬಿಎಂಪಿಯ ಹೊಣೆಯಲ್ಲ, ನಗರದೆಲ್ಲೆಡೆ ನಿವಾ ವಹಿಸುವುದು ಪೊಲೀಸರ ಜವಾಬ್ದಾರಿ, ಆಗಸ್ಟ್ 7ರ ಒಳಗೆ ತನಿಖೆ ಫಲಿತಾಂಶವನ್ನು ತಿಳಿಸಬೇಕು. ಫ್ಲೆಕ್ಸ್ ತೆಗೆಯದ ಗುತ್ತಿಗೆದಾರರನ್ನು ಕೋರ್ಟ್ಗೆ ಹಾಜರುಪಡಿಸುವಂತೆ ಬಿಬಿಎಂಪಿ ಪರ ವಕೀಲ ಶ್ರೀನಿಧಿಗೆ ಸೂಚಿಸಿದರು.