ವಿಚ್ಛೇದನ ಪ್ರಕರಣ: ಪತ್ನಿಯ ಜೀವನಾಂಶ ₹40 ಲಕ್ಷಕ್ಕೆ ಹೆಚ್ಚಿಸಿದ ಹೈಕೋರ್ಟ್
ವಿಚ್ಛೇದನ ಪತ್ನಿಯ ಜೀವನ ನಿರ್ವಹಣೆ ಹಾಗೂ ಆಕೆಯ ಸುಪರ್ದಿಯಲ್ಲಿರುವ ಎರಡನೇ ಮಗನ ವೃತ್ತಿಪರ ಕೋರ್ಸ್ ವ್ಯಾಸಂಗದ ವೆಚ್ಚ ಪರಿಗಣಿಸಿ ಪತ್ನಿಗೆ ಶಾಶ್ವತ ಜೀವನಾಂಶ ಮೊತ್ತವನ್ನು ₹40 ಲಕ್ಷಕ್ಕೆ ಹೈಕೋರ್ಟ್ ಹೆಚ್ಚಿಸಿದೆ.
ಬೆಂಗಳೂರು ಜನವರಿ 28: ವಿಚ್ಛೇದನ ಪತ್ನಿಯ ಜೀವನ ನಿರ್ವಹಣೆ ಹಾಗೂ ಆಕೆಯ ಸುಪರ್ದಿಯಲ್ಲಿರುವ ಎರಡನೇ ಮಗನ ವೃತ್ತಿಪರ ಕೋರ್ಸ್ ವ್ಯಾಸಂಗದ ವೆಚ್ಚ ಪರಿಗಣಿಸಿ ಪತ್ನಿಗೆ ಶಾಶ್ವತ ಜೀವನಾಂಶ ಮೊತ್ತವನ್ನು ₹40 ಲಕ್ಷಕ್ಕೆ ಹೈಕೋರ್ಟ್ ಹೆಚ್ಚಿಸಿದೆ.
ಪತ್ನಿಯ ಜೀವನ ವೆಚ್ಚ, ಪುತ್ರರ ವಿದ್ಯಾಭ್ಯಾಸದ ವೆಚ್ಚವನ್ನೂ ಸಹ ಪತಿ ಭರಿಸಬೇಕಾಗುತ್ತದೆಂದು ನ್ಯಾಯಾಲಯ ಆದೇಶಿಸಿದೆ. ದಕ್ಷಿಣ ಕನ್ನಡದ ವಿಚ್ಚೇದಿತ ದಂಪತಿ ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿಗಳ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ಜೀವನಾಂಶ ಮೊತ್ತವನ್ನು 40 ಲಕ್ಷ ರೂಪಾಯಿಗೆ ಹೆಚ್ಚಿಸಿತು. ಆ ಪೈಕಿ ಮೂರು ತಿಂಗಳ ಒಳಗೆ 10 ಲಕ್ಷ ರೂಪಾಯಿ ಮತ್ತು ಉಳಿದ 30 ಲಕ್ಷ ರೂಪಾಯಿ ಗಳನ್ನು ಒಂದು ವರ್ಷದ ಒಳಗೆ ಎರಡು ಕಂತಿನಲ್ಲಿ ಪತ್ನಿಗೆ ಪಾವತಿಸುವಂತೆ ಪತಿಗೆ ಆದೇಶಿಸಿದೆ.

ಮೇಲ್ಮನವಿದಾರರ ಮೊದಲ ಮಗ ಮುಂಬೈ ಐಐಟಿಯಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾಭ್ಯಾಸಕ್ಕಾಗಿ 26.50 ಲಕ್ಷ ರೂಪಾಯಿ ವ್ಯಯಿಸಲಾಗುತ್ತಿದೆ. ಎರಡನೇ ಮಗ ಸದ್ಯ ಪತ್ನಿಯ ಸುಪರ್ದಿಯಲ್ಲಿದ್ದು, 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಆ ಮಗು ವೃತ್ತಿಪರ ಕೋರ್ಸ್ ವ್ಯಾಸಂಗ ಮಾಡಲು ಇನ್ನೂ ಮೂರು ವರ್ಷ ಅಗತ್ಯವಿದೆ. ಮೊದಲನೆ ಮಗನ ವ್ಯಾಸಂಗದ ಸಂಪೂರ್ಣ ವೆಚ್ಚದ ಜವಾಬ್ದಾರಿ ಹೊತ್ತಿರುವ ತಂದೆ, ಎರಡನೇ ಮಗನ ವಿದ್ಯಾಭ್ಯಾಸದ ಖರ್ಚನ್ನೂ ಹೊರಬೇಕಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಎರಡನೇ ಮಗನ ಮುಂದಿನ ವೃತ್ತಿಪರ ಕೋರ್ಸ್ ವ್ಯಾಸಂಗ ಮತ್ತು ಪತ್ನಿಯ ಜೀವನ ನಿರ್ವಹಣೆ ಪರಿಗಣಿಸಿದಾಗ ಜೀವನಾಂಶವನ್ನು ಹೆಚ್ಚಿಸುವುದು ಸೂಕ್ತ. ಅದರಂತೆ 40 ಲಕ್ಷ ರು. ಜೀವನಾಂಶ ನಿಗದಿಪಡಿಸಿದರೆ, ಎರಡನೇ ಮಗನ ವೈದ್ಯಕೀಯ ಹಾಗೂ ಶೈಕ್ಷಣಿಕ ವೆಚ್ಚ ನೋಡಿಕೊಳ್ಳಬಹುದು ಎಂದು ಹೇಳಿದೆ.
ಪ್ರಕರಣ ವಿವರ:
ದಕ್ಷಿಣ ಕನ್ನಡದ ಮೇಲ್ಮನವಿದಾರರು 2003ರಲ್ಲಿ ಮದುವೆಯಾಗಿದ್ದರು. ಅವರಿಗೆ ದಂಪತಿಗೆ ಇಬ್ಬರು ಗಂಡು ಮಕ್ಕಳು ಜನಿಸಿದ್ದರು. ದುಬೈನಲ್ಲಿ ಒಟ್ಟಿಗೆ ಆರು ವರ್ಷದ ನೆಲೆಸಿದ್ದರು. ಭಿನ್ನಾಭಿಪ್ರಾಯಗಳಿಂದ ಸಂಬಂಧ ಹಳಸಿದಾಗ 2009ರ ಡಿಸೆಂಬರ್ನಲ್ಲಿ ಪತ್ನಿ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ದುಬೈ ತೊರೆದು ಮಂಗಳೂರಿನ ತಾಯಿಯ ಮನೆ ಸೇರಿದ್ದರು.
ಪತ್ನಿ-ಮಕ್ಕಳನ್ನು ಮನೆಗೆ ತರಲು ಸಾಕಷ್ಟು ಪ್ರಯತ್ನಿಸಿ ವಿಫಲವಾದ ಪತಿ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದ ಪತ್ನಿ, ಪತ್ನಿಯು ನನ್ನ ಹಾಗೂ ಮಕ್ಕಳನ್ನು ನಿರ್ಲಕ್ಷ್ಯ ಮಾಡುತ್ತಿದ್ದರು. ಅನಗತ್ಯವಾಗಿ ನಿಂದಿಸುತ್ತಿದ್ದರು. ಮದ್ಯ ವ್ಯಸನಿಯಾಗಿದ್ದರು. ಪರಸ್ತ್ರೀ ವ್ಯಾಮೋಹ ಬೆಳೆಸಿಕೊಡಿದ್ದರು. ಪತಿಯ ಕಿರುಕುಳ ಬೇಸತ್ತು ಮಕ್ಕಳೊಂದಿಗೆ ತವರು ಮನೆ ಸೇರಬೇಕಾಯಿತು ಎಂದು ಆರೋಪಿಸಿದ್ದರು.
ವಿಚ್ಛೇದನ ಮಂಜೂರು ಮಾಡಿದ್ದ ದಕ್ಷಿಣ ಕನ್ನಡ ಜಿಲ್ಲಾ ಕೌಟುಂಬಿಕ ನ್ಯಾಯಾಲಯ, ಪತ್ನಿಗೆ 25 ಲಕ್ಷ ರೂಪಾಯಿ ಶಾಶ್ವತ ಜೀವನಾಂಶ ನೀಡುವಂತೆ ಪತಿಗೆ 2015ರ ಜುಲೈ 1ರಂದು ಆದೇಶಿಸಿತ್ತು. ಈ ಮೊತ್ತ ಕಡಿತಗೊಳಿಸುವಂತೆ ಕೋರಿ ಪತಿ ಮತ್ತು ಜೀವನಾಂಶ ಮೊತ್ತ ಹೆಚ್ಚಿಸುವಂತೆ ಪತ್ನಿ ಹೈಕೋರ್ಟ್ಗೆ ಪ್ರತ್ಯೇಕವಾಗಿ ಮೇಲ್ಮನವಿ ಸಲ್ಲಿಸಿದ್ದರು.












Click it and Unblock the Notifications