Get Updates
Get notified of breaking news, exclusive insights, and must-see stories!

ಕೆರಗೋಡುವಿನಲ್ಲಿ ಹನುಮನ ಮೇಲಿನ ಭಕ್ತಿ ಕಾಣುತ್ತಿಲ್ಲ, ಮತೀಯ ಕಾರ್ಯಸೂಚಿ ಕಾಣುತ್ತಿದೆ: ಸಿದ್ದರಾಮಯ್ಯ ಕಿಡಿ

ಮಂಡ್ಯ ಕೆರಗೋಡು ಗ್ರಾಮದ ಹನುಮ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಕಿಡಿಕಾರಿದ್ದಾರೆ. 'ಮಂಡ್ಯದ ಕೆರಗೋಡುವಿನಲ್ಲಿ ನಡೆದಿರುವ ಘಟನೆ ಬಿಜೆಪಿ ಹಾಗೂ ಸಂಘ ಪರಿವಾರದ ಮತೀಯವಾದಿ ಕಾರ್ಯಸೂಚಿಯ ಭಾಗವಾಗಿಯೇ ನಡೆದ ವ್ಯವಸ್ಥಿತ ಸಂಚಾಗಿದೆ" ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಹಲವು ಟ್ವೀಟ್ ಮಾಡಿರುವ ಅವರು, "ಇಂದು ರಾಷ್ಟ್ರಪಿತ ಗಾಂಧೀಜಿಯವರು ಹುತಾತ್ಮರಾದ ದಿನ. ಸತ್ಯ, ಅಹಿಂಸೆ, ಶಾಂತಿ, ಸಾಮರಸ್ಯ, ಸಹಿಷ್ಣುತೆಯನ್ನೇ ತಮ್ಮ ಬದುಕಿನುದ್ದಕ್ಕೂ ಉಸಿರಾಡಿದ ಗಾಂಧೀಜಿಯವರ ಜೀವನ ಸಂದೇಶಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿವೆ. ಗಾಂಧೀಜಿಯವರ ಚಿಂತನೆಗಳನ್ನು ಬುಡಸಮೇತ ನಿರ್ಮೂಲನೆ ಮಾಡಬೇಕೆಂದು ಹಿಂದುತ್ವವಾದಿ ಬಲಪಂಥೀಯ ಶಕ್ತಿಗಳು ಇಂದು ದೇಶದೆಲ್ಲೆಡೆ ಇಂದು ತಮ್ಮ ಗುಪ್ತ ಕಾರ್ಯಸೂಚಿಯ ಅನುಷ್ಠಾನಕ್ಕೆ ಹೇಯವಾದ ಸಂಚು ರೂಪಿಸಿವೆ" ಎಂದು ಹೇಳಿದ್ದಾರೆ.

Hanuman flag controversy: Chief Minister Siddaramaiah slams BJP and RSS over Mandy Issue

'ಬಿಜೆಪಿ ಮತೀಯವಾದಿ ಚಿಂತನೆಗಳನ್ನು ಪ್ರೋತ್ಸಾಹಿಸಿದೆ'

"ಇಂತಹ ಮತೀಯವಾದಿ ಚಿಂತನೆಗಳನ್ನು ಸದಾಕಾಲ ಪ್ರೋತ್ಸಾಹಿಸಿಕೊಂಡು ಬಂದಿರುವ ಬಿಜೆಪಿ ಹಾಗೂ ಸಂಘ ಪರಿವಾರ ಗೋಡ್ಸೆಯ‌ ಚಿಂತನೆಗಳನ್ನು ಬಹಿರಂಗವಾಗಿಯೇ ವೈಭವೀಕರಿಸುವ ಮೂಲಕ ದೇಶದಲ್ಲಿನ ಧಾರ್ಮಿಕ ಸಾಮರಸ್ಯಕ್ಕೆ ಗಂಡಾಂತರ ತಂದಿವೆ. ಮಂಡ್ಯದ ಕೆರಗೋಡುವಿನಲ್ಲಿ ನಡೆದಿರುವ ಘಟನೆ ಬಿಜೆಪಿ ಹಾಗೂ ಸಂಘ ಪರಿವಾರದ ಮತೀಯವಾದಿ ಕಾರ್ಯಸೂಚಿಯ ಭಾಗವಾಗಿಯೇ ನಡೆದ ವ್ಯವಸ್ಥಿತ ಸಂಚಾಗಿದೆ" ಎಂದು ಟೀಕಿಸಿದ್ದಾರೆ.

"ಕೆರಗೋಡುವಿನ ಸರ್ಕಾರಿ ಜಾಗದಲ್ಲಿ ನೆಟ್ಟಿರುವ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಹಾಗೂ ನಾಡಧ್ವಜಗಳನ್ನು ಮಾತ್ರವೇ ಹಾರಿಸಲು ಅನುಮತಿಸಲಾಗಿತ್ತು. ಅದರ ಹೊರತಾಗಿಯೂ ಅಲ್ಲಿ ಹನುಮಧ್ವಜವನ್ನು ಹಾರಿಸಲು ಮುಂದಾಗಿದ್ದರ ಹಿಂದೆ ಹನುಮನ ಮೇಲಿನ ಭಕ್ತಿ ಕಾಣುತ್ತಿಲ್ಲ, ಬದಲಿಗೆ ಮತೀಯ ಕಾರ್ಯಸೂಚಿ ಕಾಣುತ್ತಿದೆ. ದೇಶಭಕ್ತಿ, ರಾಷ್ಟ್ರಧ್ವಜ ಮತ್ತು ರಾಷ್ಟ್ರೀಯ ಲಾಂಛನಗಳೆಲ್ಲ ಅವರ ಪಾಲಿಗೆ ತಮ್ಮ ವಿಸ್ತರಣೆಯನ್ನು ಸಾಧಿಸಿಕೊಳ್ಳುವ ಪರಿಕರಗಳಷ್ಟೆ" ಎಂದಿದ್ದಾರೆ.

'ಆರ್‌ಎಸ್‌ಎಸ್‌ ನಾಯಕರು ತ್ರಿವರ್ಣ ಧ್ವಜ ವಿರೋಧಿಸಿದ್ದಾರೆ'

"ರಾಷ್ಟ್ರಧ್ವಜದ ಕುರಿತು ಆರ್‌ಎಸ್‌ಎಸ್‌ ನಾಯಕರ ನಿಲುವೇನಾಗಿತ್ತು ಎಂಬುದನ್ನು ಅರ್ಥ ಮಾಡಿಕೊಂಡರೆ, ಇವತ್ತು ಮಂಡ್ಯದಲ್ಲಿ ಬಿಜೆಪಿ ಯಾಕೆ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಕೇಸರಿ ಭಾಗವಧ್ವಜ ಹಾರಿಸಬೇಕೆಂದು ಹಠ ಮಾಡುತ್ತಿದೆ ಎಂಬುದು ಮನದಟ್ಟಾಗುತ್ತದೆ. ಪ್ರಾರಂಭದಿಂದಲೇ ಆರ್‌ಎಸ್‌ಎಸ್‌ ನಾಯಕರು ತ್ರಿವರ್ಣ ಧ್ವಜವನ್ನು ವಿರೋಧಿಸುತ್ತಾ ಬಂದಿದ್ದರು. ಆರ್‌ಎಸ್‌ಎಸ್‌ನ ಎರಡನೇ ಸರಸಂಘಚಾಲಕರಾದ ಎಂ ಎಸ್ ಗೋಳ್ವಾಲ್ಕರ್ ಅವರು ತ್ರಿವರ್ಣ ಧ್ವಜವನ್ನು ನಮ್ಮ ರಾಷ್ಟ್ರದ ಧ್ವಜವೆಂದು ಒಪ್ಪಲು ಸಾಧ್ಯವಿಲ್ಲ ತಮ್ಮ 'ಬಂಚ್ ಆಫ್ ಥಾಟ್ಸ್' ಕೃತಿಯಲ್ಲಿ ಬರೆದಿದ್ದರು" ಎಂದು ಮಾಹಿತಿ ಹೊರಹಾಕಿದ್ದಾರೆ.

"ಭಾರತೀಯ ನಾಯಕರು ನಮ್ಮ ಕೈಗೆ ತ್ರಿವರ್ಣ ಧ್ವಜವನ್ನು ಕೊಡಬಹುದು. ಆದರೆ ನಾವ್ಯಾವತ್ತೂ ಅದನ್ನು ಗೌರವಿಸುವುದಿಲ್ಲ ಮತ್ತು ಅದನ್ನು ಒಪ್ಪಿಕೊಳ್ಳುವುದೂ ಇಲ್ಲ. ಎಂದು 1947ರಲ್ಲಿಯೇ ಆರ್‌ಎಸ್‌ಎಸ್ ಮುಖವಾಣಿ 'ದಿ ಆರ್ಗನೈಸರ್' ಪತ್ರಿಕೆಯಲ್ಲಿ ಬರೆದುಕೊಂಡಿತ್ತು. ಈ ಕಾರಣ ಕ್ಕಾಗಿಯೇ ನಾಗಪುರದಲ್ಲಿರುವ ಆರ್‌ಎಸ್‌ಎಸ್ ಕೇಂದ್ರ ಕಚೇರಿ ಮೇಲೆ 52 ವರ್ಷಗಳ ಕಾಲ ರಾಷ್ಟ್ರಧ್ವಜವನ್ನೇ ಹಾರಿಸಿರಲಿಲ್ಲ. 2001ರ ಜನವರಿ 26ರಂದು ರಾಷ್ಟ್ರಪ್ರೇಮಿ ಯುವದಳದ ಮೂವರು ಕಾರ್ಯಕರ್ತರು, ಬಲವಂತವಾಗಿ ಆರ್‌ಎಸ್‌ಎಸ್ ಕಚೇರಿಗೆ ನುಗ್ಗಿ, ಸಾಕಷ್ಟು ವಿರೋಧದ ನಡುವೆಯೂ ಅದರ ಮೇಲೆ ತ್ರಿವರ್ಣ ಧ್ವಜ ಹಾರಿಸಿ, ಆರ್‌ಎಸ್‌ಎಸ್ ಸೆಡ್ಡು ಹೊಡೆದಿದ್ದರು. ಅವರ ಮೇಲೆ ಆರ್‌ಎಸ್‌ಎಸ್ ಕೇಸು ಕೂಡಾ ದಾಖಲಿಸಿತ್ತು" ಎಂದು ಆರ್‌ಎಸ್‌ಎಸ್‌ ತ್ರಿವರ್ಣ ಧ್ವಜವನ್ನು ವಿರೋಧಿಸುತ್ತದೆ ಎಂದು ಹೇಳಿದ್ದಾರೆ.

Hanuman flag controversy: Chief Minister Siddaramaiah slams BJP and RSS over Mandy Issue

"ರಾಷ್ಟ್ರಧ್ವಜ ಹಾಗೂ ರಾಷ್ಟ್ರಪಿತನಿಗೆ ನಿರಂತರವಾಗಿ ಅಪಮಾನ ಎಸಗುತ್ತಾ ಬಂದಿರುವ ಬಿಜೆಪಿ ಹಾಗೂ ಸಂಘ ಪರಿವಾರಗಳು ಇಂದು ರಾಷ್ಟ್ರಧ್ವಜವನ್ನೇ ತಾಲಿಬಾನ್‌ ಧ್ವಜಕ್ಕೆ ಹೋಲಿಸುತ್ತಿರುವುದು ಅವರ ರೋಗಗ್ರಸ್ತ ಚಿಂತನೆಗಳನ್ನು ಸೂಚಿಸುತ್ತಿದೆ. ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಈ ರೀತಿಯ ಮತೀಯ ಉದ್ವಿಗ್ನತೆಯನ್ನು ಸೃಷ್ಟಿಸಿ ಅದರ ಲಾಭ ಪಡೆಯುವ ಹುನ್ನಾರ. ಈ ಹಿಂದೆ ವಿಧಾನಸಭಾ ಚುನಾವಣೆ ವೇಳೆಯೂ ಇಂತಹದ್ದೇ ಪ್ರಯತ್ನಗಳಿಗೆ ಬಿಜೆಪಿ ಕೈ ಹಾಕಿದ್ದನ್ನು ಮಂಡ್ಯದ ಜನತೆ ಮರೆತಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.

"ಬಿಜೆಪಿಯ ಇಂತಹ ಮತೀಯ ಸಂಚುಗಳಿಗೆ ಜೆಡಿಎಸ್‌ ಕೂಡ ಬಹಿರಂಗವಾಗಿಯೇ ಕೈಜೋಡಿಸಿರುವುದು ಆ ಪಕ್ಷದ ಅಧಿಕಾರದ ಹಪಾಹಪಿ, ಚಿಂತನಾ ದಾರಿದ್ರ್ಯ, ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಜೆಡಿಎಸ್‌ ಪಕ್ಷದ ವರಿಷ್ಠರು ತಾವು ಪ್ರತಿಯೊಂದು ವಿಚಾರದಲ್ಲಿಯೂ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರ ಅಣತಿಯಂತೆ ನಡೆಯುವುದಾಗಿ ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಬಿಜೆಪಿಯವರು ನೀಡಿರುವ ಕೇಸರಿ ಶಾಲನ್ನು ಹೊದ್ದು ಸಂಭ್ರಮಿಸುತ್ತಿರುವ ಜೆಡಿಎಸ್‌ ನಾಯಕರಿಗೆ ಸಾಮರಸ್ಯ, ಸೌಹಾರ್ದದ ನೆಲೆಯಾದ ಕರ್ನಾಟಕಕ್ಕೆ ತಾವು ಎಸಗುತ್ತಿರುವ ಅಪಚಾರದ ಅರಿವೇ ಇಲ್ಲವಾಗಿದೆ" ಎಂದು ಟೀಕಿಸಿದ್ದಾರೆ.

"ಬಿಜೆಪಿ, ಸಂಘ ಪರಿವಾರ ಹಾಗೂ ಜೆಡಿಎಸ್‌ ಒಗ್ಗೂಡಿಸಿ ರೂಪಿಸಿರುವ ಈ ಮತೀಯ ಸಂಚನ್ನು ಮಂಡ್ಯದ ಜನತೆ ವಿಫಲಗೊಳಿಸಲಿದ್ದಾರೆ. ಸ್ವಾತಂತ್ರ್ಯ ಚಳವಳಿಯ ಕಾಲಘಟ್ಟದಿಂದಲೂ ಧಾರ್ಮಿಕ ಸಾಮರಸ್ಯ, ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಮಂಡ್ಯದ ಭೂಮಿ ರೈತ ಚಳವಳಿಯೂ ಸೇರಿದಂತೆ ನೂರಾರು ಪ್ರಗತಿಪರ ಚಳವಳಿಗೆ ತವರಾಗಿರುವ ನೆಲ. ಸಂವಿಧಾನ, ಶಾಂತಿ, ಸಾಮರಸ್ಯಗಳಲ್ಲಿ ಗಾಢವಾದ ನಂಬಿಕೆ ಇರಿಸಿರುವ ಗಾಂಧೀವಾದಿ ಚಿಂತನೆಗಳಿಂದ ಪ್ರೇರಣೆ ಪಡೆದ ಭೂಮಿ. ಮಂಡ್ಯದ ಜನತೆಯು ಸಂವಿಧಾನ ವಿರೋಧಿ ಶಕ್ತಿಗಳಿಗೆ, ಗಾಂಧಿ ವಿರೋಧಿ ಚಿಂತನೆಗಳಿಗೆ ಎಂದಿಗೂ ಜಾಗ ನೀಡುವುದಿಲ್ಲ. ಧರ್ಮದ ಹೆಸರಿನಲ್ಲಿ ಕೋಮುವಾದಿ ರಾಜಕಾರಣಕ್ಕೆ ಆಸ್ಪದ ಮಾಡಿಕೊಡುವುದಿಲ್ಲ ಎನ್ನುವ ದೃಢವಾದ ನಂಬಿಕೆ ನನ್ನದು" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+