ಗುರು ರಾಘವೇಂದ್ರ ಬ್ಯಾಂಕ್ ಅವ್ಯವಹಾರ ಪ್ರಕರಣ: ತನಿಖೆ CIDಗೆ ಹಸ್ತಾಂತರ
ಬೆಂಗಳೂರು, ಜುಲೈ 1: ಹಣಕಾಸು ಅವ್ಯವಹಾರ ಸಂಬಂಧ ಬಸವನಗುಡಿಯ ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕಿನ ಪ್ರಕರಣವನ್ನು ಎಸಿಬಿಯಿಂದ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.
ನೂರಾರು ಕೋಟಿ ರುಪಾಯಿ ವಂಚನೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಹೈಕೋರ್ಟ್ ಸೂಚನೆ ಮೇರೆಗೆ ಸಿಐಡಿಗೆ ಹಸ್ತಾಂತರ ಮಾಡಲಾಗಿದೆ. ಈ ಪ್ರಕರಣದ ತನಿಖೆಯನ್ನು ಎಸಿಬಿ ಹಾಗೂ ಸಿಐಡಿ ಎರಡು ಸಂಸ್ಥೆಗಳು ವಹಿಸಿಕೊಂಡಿದ್ದವು. ಹೀಗಾಗಿ ಉಚ್ಚ ನ್ಯಾಯಾಲಯ ಏಕ ತನಿಖಾ ಸಂಸ್ಥೆಗೆ ಪ್ರಕರಣದ ತನಿಖೆ ನಡೆಸಲು ಆದೇಶಿಸಿದೆ.
ಇತ್ತೀಚೆಗೆ ವಜಾಗೊಂಡ ಬ್ಯಾಂಕಿನ ಆಡಳಿತ ಮಂಡಳಿ ವಿರುದ್ಧ ಬಸವನಗುಡಿ ಠಾಣೆಯಲ್ಲಿ ದಾಖಲಾಗಿದ್ದ ದೂರುಗಳನ್ನು ಈಗಾಗಲೇ ಸಿಐಡಿಗೆ ವರ್ಗಾಯಿಸಲಾಗಿತ್ತು. ಅಲ್ಲದೆ ಸಾವಿರಾರು ಗ್ರಾಹಕರ ಶ್ರೀ ಗುರು ರಾಘವೇಂದ್ರ ಬ್ಯಾಂಕಿನ ಕೇಂದ್ರ ಕಚೇರಿ ಸೇರಿದಂತೆ ಐದು ಕಡೆ ಎಸಿಬಿ ದಾಳಿ ನಡೆಸಿತ್ತು.

ಜೊತೆಗೆ ಬ್ಯಾಂಕ್ ಅಧಿಕಾರಿಗಳು ತೆರೆದಿದ್ದಾರೆನ್ನಲಾದ ನಕಲಿ ಖಾತೆಗಳಿಗೆ ಸಂಬಂಧಿಸಿದ ದಾಖಲೆ, ಬ್ಯಾಂಕ್ ನೀಡಿದ ಸಾಲದ ವಿವರ, ವಸೂಲಾಗದ ಸಾಲದ ದಾಖಲೆ, ಬ್ಯಾಂಕ್ನ ಕಂಪ್ಯೂಟರ್ ಡೇಟಾ ಜಪ್ತಿ ಮಾಡಲಾಗಿದೆ.
ಆಡಳಿತ ಮಂಡಳಿ ಕೈವಾಡ ಶಂಕೆ
ಅವ್ಯವಹಾರದಲ್ಲಿ ವಜಾಗೊಂಡಿರುವ ಆಡಳಿತ ಮಂಡಳಿ ಕೈವಾಡವಿದ್ದು, ಅಗತ್ಯ ಭದ್ರತೆ ಪಡೆಯದೆ 27 ಮಂದಿಗೆ 921 ಕೋಟಿ ರುಪಾಯಿ ಸಾಲ ನೀಡಿರುವ ಸಂಗತಿ ಆರ್ಬಿಐ ಮತ್ತು ಸಹಕಾರ ಸಂಘಗಳ ರಿಜಿಸ್ಟ್ರಾರ್ ಹಾಗೂ ಎಸಿಬಿ ತನಿಖೆಯಿಂದ ಬಯಲಾಗಿದೆ.












Click it and Unblock the Notifications