ಲೋಕಾಯುಕ್ತ ಕಚೇರಿ ಸುರಕ್ಷತೆ ಲೋಪ, ಡಿಸಿಪಿ ಯೋಗೇಶ್ ತಲೆದಂಡ
ಬೆಂಗಳೂರು, ಮಾರ್ಚ್ 9: ಲೋಕಾಯುಕ್ತ ಪಿ.ವಿಶ್ವನಾಥ್ ಶೆಟ್ಟಿ ಅವರಿಗೆ ತಮ್ಮ ಕಚೇರಿಯಲ್ಲೇ ಚಾಕು ಇರಿತ ಆದ ನಂತರ ಗುರುವಾರದಂದು ಸರಕಾರವು ಡಿಸಿಪಿ (ವಿಧಾನಸೌಧ ಸುರಕ್ಷತಾ ವಿಭಾಗ) ಯೋಗೇಶ್ ಅವರನ್ನು ಅಮಾನತು ಮಾಡಿದೆ. ಲೋಕಾಯುಕ್ತ ಕಚೇರಿಯಲ್ಲಿನ ಸುರಕ್ಷತಾ ಲೋಪದ ಕಾರಣಕ್ಕೆ ಅವರನ್ನು ಅಮಾನತು ಮಾಡಲಾಗಿದೆ.
ಲೋಕಾಯುಕ್ತ ಕಚೇರಿಯಲ್ಲಿ ಸುರಕ್ಷತಾ ಲೋಪಗಳಾಗಿವೆ ಎಂದು ವಿರೋಧ ಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಡಿಸಿಪಿ ಅಮಾನತುವಿನಂಥ ಗಂಭೀರ ಕ್ರಮ ತೆಗೆದುಕೊಳ್ಳಲಾಗಿದೆ. ಇನ್ನು ಲೋಕಾಯುಕ್ತರಿಗೆ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು ನೀಡೀರುವ ಮಾಹಿತಿ ಪ್ರಕಾರ, ವಿಶ್ವನಾಥ್ ಶೆಟ್ಟಿ ಆರೋಗ್ಯ ಸ್ಥಿರವಾಗಿದೆ, ಚೇತರಿಸಿಕೊಳ್ಳುತ್ತಿದ್ದಾರೆ.
ಲೋಕಾಯುಕ್ತ ಕಚೇರಿಯಲ್ಲಿ ಹೊಸದಾಗಿ ಲೋಹ ಶೋಧಕ (ಮೆಟಲ್ ಡಿಟೆಕ್ಟರ್) ಯಂತ್ರ ಅಳವಡಿಸಲಾಗಿದೆ. ಜತೆಗೆ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. "ಲೋಕಾಯುಕ್ತ ಕಚೇರಿಯಿಂದ ರಾಜ್ಯ ಸರಕಾರಕ್ಕೆ ಈಚೆಗೆ ಎಂಟು ಪತ್ರ ಬರೆಯಲಾಗಿತ್ತು. ಭದ್ರತಾ ಕ್ರಮಗಳನ್ನು ಹೆಚ್ಚಿಸುವ ಕುರಿತು ಮನವಿ ಮಾಡಲಾಗಿತ್ತು" ಎಂದು ಮೂಲಗಳು ತಿಳಿಸಿವೆ.3

ತೇಜ್ ರಾಜ್ ಶರ್ಮಾ ಎಂಬಾತ ಲೋಕಾಯುಕ್ತರನ್ನು ಚಾಕುವಿನಿಂದ ಇರಿದಿದ್ದ. ಆತನ್ನು ಐದು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದ್ದ. ಆತ ವಾಸವಿದ್ದ ತುಮಕೂರಿಗೆ ಕರೆದೊಯ್ದು ಪೊಲೀಸರು ವಿಚಾರಣೆ ನಡೆಸಿದ್ದಾರೆ.












Click it and Unblock the Notifications